
ನವದೆಹಲಿ(ಜು.06): ದೇಶದ ಸ್ವಾತಂತ್ರ್ಯದ 75ನೇ ಸಂಭ್ರಮಾಚರಣೆಯನ್ನು ಮತ್ತಷ್ಟುಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ವಿವಿಧ ಪ್ರಕರಣಗಳಲ್ಲಿ ಜೈಲು ಪಾಲಾಗಿರುವ ವೃದ್ಧರು, ಮಹಿಳೆಯರು, ಹಿಜಡಾಗಳು, ಅಬಲರಿಗೆ, ಅವರ ನಡತೆ, ಶಿಕ್ಷೆ ಪೂರ್ಣಗೊಳಿಸಿರುವ ಅವಧಿ ಮೊದಲಾದ ಅಂಶಗಳನ್ನು ಪರಿಗಣಿಸಿ ಬಿಡುಗಡೆ ಭಾಗ್ಯ ಕಲ್ಪಿಸಲು ನಿರ್ಧರಿಸಿದೆ. ಇದರಿಂದಾಗಿ ಸಾವಿರಾರು ಜನರಿಗೆ ಅವಧಿಪೂರ್ವ ಬಿಡುಗಡೆ ಭಾಗ್ಯ ಸಿಗುವ ಅವಕಾಶ ಒದಗಿಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಅನ್ವಯ, ಜೈಲಿನಲ್ಲಿ ಉತ್ತಮ ನಡತೆ ತೋರಿರುವ 60 ವರ್ಷದ ಮೀರಿದ ಪುರುಷರು, 50 ವರ್ಷ ದಾಟಿದ ಮಹಿಳೆಯರು, ಹಿಜಡಾಗಳು, ಅಂಗವಿಕಲರು ಮತ್ತು ಶೇ.50ರಷ್ಟುಶಿಕ್ಷೆ ಪೂರ್ಣಗೊಳಿಸಿದ ಅಂಗವಿಕಲರನ್ನು ಬಿಡುಗಡೆಗೆ ಪರಿಗಣಿಸಬಹುದು. ಇನ್ನು ಶಿಕ್ಷೆ ಪೂರೈಸಿದ್ದರೂ, ದಂಡದ ಹಣ ಪಾವತಿಸಲಾಗದೇ ಜೈಲಿನಲ್ಲೇ ಇರುವವರನ್ನೂ ಬಿಡುಗಡೆ ಮಾಡಬಹುದು ಎಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳಿಗೆ ಮಾಹಿತಿ ರವಾನಿಸಿದೆ.
ಇದಲ್ಲದೆ 18-21ರ ವಯೋಮಿತಿಯಲ್ಲಿ ಅಪರಾಧ ಎಸಗಿದ ಮತ್ತು ಇತರೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರದ ಕೈದಿಗಳಿದ್ದು, ಅವರು ತಮ್ಮ ಶಿಕ್ಷೆಯ ಶೇ.50ರಷ್ಟುಅವಧಿ ಪೂರೈಸಿದ್ದರೆ ಅವರನ್ನೂ ಬಿಡುಗಡೆಗೆ ಪರಿಗಣಿಸಬಹುದು. ಬಿಡುಗಡೆಗೂ ಮುನ್ನ ಅವರನ್ನು ಹಿರಿಯ ನಾಗರಿಕರು ಮತ್ತು ಪೊಲೀಸರನ್ನು ಒಳಗೊಂಡ ರಾಜ್ಯಮಟ್ಟದ ಸಮಿತಿ ಪರಿಶೀಲಿಸಬೇಕು. ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಸಮಿತಿಗಳು ಮಾಡುವ ಶಿಫಾರಸ್ಸನ್ನು ರಾಜ್ಯಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಬೇಕು ಎಂದು ಮಾಹಿತಿ ನೀಡಲಾಗಿದೆ.
ಇವರಿಗಿಲ್ಲ:
ಗಲ್ಲು, ಜೀವಾವಧಿ, ಅತ್ಯಾಚಾರ, ಭಯೋತ್ಪಾದನೆ, ವರದಕ್ಷಿಣೆ, ಅಕ್ರಮ ಹಣ ವರ್ಗಾವಣೆ, ಸ್ಫೋಟಕ ಕಾಯ್ದೆ, ರಾಷ್ಟ್ರೀಯ ಭದ್ರತಾ ಕಾಯ್ದೆ, ಆ್ಯಂಟಿ ಹೈಜಾಕ್ ತಡೆ ಪ್ರಕರಣದಲ್ಲಿ ಶಿಕ್ಷೆಗೊಳಗಾದವರನ್ನು ಈ ಅವಧಿಪೂರ್ವ ಬಿಡುಗಡೆಗೆ ಪರಿಗಣಿಸಲಾಗುವುದಿಲ್ಲ.
2020ರ ವರದಿ ಅನ್ವಯ ದೇಶದ ಜೈಲುಗಳಲ್ಲಿ 4.03 ಲಕ್ಷ ಕೈದಿಗಳನ್ನು ಇಡಬಹುದಾದ ವ್ಯವಸ್ಥೆ ಇದೆಯಾದರೂ, 4.78 ಲಕ್ಷ ಕೈದಿಗಳನ್ನು ಇರಿಸಲಾಗಿದೆ. ಈ ಪೈಕಿ ಸುಮಾರು 1ಲಕ್ಷ ಮಹಿಳೆಯರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ