ಸರ್ಕಾರ ರಚನೆ ಕಸರತ್ತು: ಒಂದೇ ವಿಮಾನದಲ್ಲಿ ದೆಹಲಿಗೆ ಹೊರಟ ನಿತೀಶ್, ತೇಜಸ್ವಿ ಯಾದವ್

Published : Jun 05, 2024, 01:19 PM ISTUpdated : Jun 05, 2024, 01:21 PM IST
ಸರ್ಕಾರ ರಚನೆ ಕಸರತ್ತು: ಒಂದೇ ವಿಮಾನದಲ್ಲಿ ದೆಹಲಿಗೆ ಹೊರಟ ನಿತೀಶ್, ತೇಜಸ್ವಿ ಯಾದವ್

ಸಾರಾಂಶ

ಎರಡು ಮೈತ್ರಿಕೂಟಗಳು ಇಂದು ದೆಹಲಿಯಲ್ಲಿ ಮಿತ್ರಪಕ್ಷಗಳ ಸಭೆ ಕರೆದಿವೆ. ಹೀಗಾಗಿ ಇತ್ತ ಎನ್‌ಡಿಎ ಮೈತ್ರಿಕೂಟದ ನಿತೀಶ್ ಕುಮಾರ್ ಹಾಗೂ ಅತ್ತ ಇಂಡಿಯಾ ಮೈತ್ರಿ ಕೂಟಕ್ಕೆ ಸೇರಿರುವ ತೇಜಸ್ವಿ ಯಾದವ್ ಪಾಟ್ನಾದಿಂದ ಜೊತೆಯಾಗಿಯೇ ವಿಮಾನವೇರಿದ್ದು, ಇವರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವೊಂದಕ್ಕೆ ಏಕಾಂಗಿ ಸರ್ಕಾರ ರಚಿಸಲು ಬಹುತಮ ಕೊರತೆ ಆಗಿದೆ. ಹೀಗಾಗಿ ಎನ್‌ಡಿಎಯ ಮಿತ್ರಪಕ್ಷಗಳನ್ನು ಬಿಜೆಪಿ ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಇದರ ಜೊತೆಗೆ ಬಹುಮತವಿಲ್ಲದಿದ್ದರೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಕೂಡ ಕೇಂದ್ರದಲ್ಲಿ ಮಿತ್ರಪಕ್ಷಗಳೆಲ್ಲರನ್ನು ಕೂಡಿಸಿಕೊಂಡು ಸರ್ಕಾರ ರಚನೆಯ ಪ್ಲಾನ್ ಮಾಡಿದೆ. ಹೀಗಾಗಿ ಎರಡು ಮೈತ್ರಿಕೂಟಗಳು ಇಂದು ದೆಹಲಿಯಲ್ಲಿ ಮಿತ್ರಪಕ್ಷಗಳ ಸಭೆ ಕರೆದಿವೆ. ಹೀಗಾಗಿ ಇತ್ತ ಎನ್‌ಡಿಎ ಮೈತ್ರಿಕೂಟದ ನಿತೀಶ್ ಕುಮಾರ್ ಹಾಗೂ ಅತ್ತ ಇಂಡಿಯಾ ಮೈತ್ರಿ ಕೂಟಕ್ಕೆ ಸೇರಿರುವ ತೇಜಸ್ವಿ ಯಾದವ್ ದೆಹಲಿಯಲ್ಲಿ ಸಭೆ ಇರುವ ಹಿನ್ನೆಲೆಯಲ್ಲಿ ಪಾಟ್ನಾದಿಂದ ಜೊತೆಯಾಗಿಯೇ ವಿಮಾನವೇರಿದ್ದು, ಇವರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 294 ಸ್ಥಾನಗಳನ್ನು ಗಳಿಸಿದೆ. ಲೋಕಸಭೆಯಲ್ಲಿ ಅಧಿಕಾರ ಹಿಡಿಯುವುದಕ್ಕೆ 272 ಸೀಟುಗಳ ಅಗತ್ಯವಿದೆ. ಸರಳ ಬಹುಮತಕ್ಕಿಂತ 22 ಸೀಟು ಹೆಚ್ಚೇ ಎನ್‌ಡಿಎ ಮೈತ್ರಿಕೂಟ ಗೆದ್ದಿದೆ. ಇತ್ತ ಇಂಡಿಯಾ ಮೈತ್ರಿಕೂಟವೂ ಸರಳ ಬಹುಮತಕ್ಕಿಂತ 38 ಸೀಟು ಕಡಿಮೆ ಗೆದ್ದಿದೆ.  ಹೀಗಾಗಿ ಎನ್‌ಡಿಎ ಮೈತ್ರಿಕೂಟದಲ್ಲಿರುವ ಬಿಹಾರ ಜೆಡಿಯುನ ನಿತೀಶ್ ಕುಮಾರ್ ಹಾಗೂ ಆಂಧ್ರ ಪ್ರದೇಶ ಟಿಡಿಪಿಯ ಚಂದ್ರಬಾಬು ನಾಯ್ಡು ಇಲ್ಲಿ ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿದ್ದು, ಇಂದು ದೆಹಲಿಯ ಖಾಸಗಿ ಹೊಟೇಲ್‌ನಲ್ಲಿ ನಡೆಯುವ ಎನ್‌ಡಿಎ ಕೂಟದ ಸಭೆಯಲ್ಲಿ ಇವರಿಗೆ ವಿಶೇಷ ಸ್ಥಾನಮಾನ ದೊರೆಯಲಿದೆ. ಇತ್ತ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡೆ ಇವರು ಚುನಾವಣೆಗೆ ಇಳಿದು ಗೆದ್ದಿದ್ದಾರೆ. ಆದರೆ ಇಂಡಿಯಾ ಕೂಟದ ನಾಯಕರು ಸರ್ಕಾರ ರಚನೆಗಾಗಿ ಅವರನ್ನು ಸೆಳೆಯುವ ಕಸರತ್ತು ಮಾಡುತ್ತಿದ್ದಾರೆ. ಇಂಡಿಯಾ ಕೂಟ ಅಧಿಕಾರಕ್ಕೆ ಬರಲು ಜೆಡಿಯು ಹಾಗೂ ಟಿಡಿಪಿ ಎರಡೂ ಪಕ್ಷಗಳ ಬಹುಮತ ಅಗತ್ಯವಾಗಿದೆ.

ಕಿಂಗ್ ಮೇಕರ್ ಚಂದ್ರಬಾಬು ನಾಯ್ಡು ಸುದ್ದಿಗೋಷ್ಠಿ: ಬೆಂಬಲದ ಬಗ್ಗೆ ಮಹತ್ವದ ಘೋಷಣೆ

ಈ ಹಿನ್ನೆಲೆಯಲ್ಲಿ ಈಗ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ ಸೇರಿದ ಬಿಹಾರದ ಇಬ್ಬರು ನಾಯಕರಾದ ತೇಜಸ್ವಿ ಯಾದವ್ ಹಾಗೂ ನಿತೀಶ್ ಕುಮಾರ್ ಒಂದೇ ವಿಮಾನದಲ್ಲಿ ದೆಹಲಿಗೆ ಹೊರಟಿದ್ದಾರೆ. ಇದೇ ವೇಳೆ ನಿತೀಶ್ ಕುಮಾರ್ ಅವರ ಆಪ್ತ ಸಹಾಯಕ ಮತ್ತು ಜೆಡಿಯು ನಾಯಕ ಕೆ.ಸಿ. ತ್ಯಾಗಿ ನಿನ್ನೆ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡುತ್ತಾ, ತಮ್ಮ ಜೆಡಿಯು ಪಕ್ಷವು ಎನ್‌ಡಿಎ ಮೈತ್ರಿಕೂಟದಲ್ಲಿಯೇ ಉಳಿಯುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ  ಇಂಡಿಯಾ ಕೂಟಕ್ಕೆ ಹೋಗುವ ಊಹಾಪೋಹಗಳನ್ನು ಅವರು ತಿರಸ್ಕರಿಸಿದರು. ಹಾಗೆಯೇ ಆಂಧ್ರ ಪ್ರದೇಶದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಚಂದ್ರಬಾಬು ನಾಯ್ಡು ಕೂಡ ಎನ್‌ಡಿಎ ಮೈತ್ರಿಕೂಟದ ಭಾಗವಾಗುವೆ ಎಂದು ಹೇಳಿದ್ದು, ಇಂದು ಸಂಜೆ ನಡೆಯುವ ಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ. 

ಆದಾಗ್ಯೂ, ಈ ಇಬ್ಬರೂ ನಾಯಕರು ಈ ಹಿಂದೆ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಬಲವಾಗಿ ಟೀಕಿಸಿದ್ದಾರೆ ಎಂಬುದನ್ನು ನೆನಪಿನಲ್ಲಿಡಬೇಕು. ಅದರಲ್ಲು ನಿತೀಶ್ ಕುಮಾರ್ ಪಕ್ಷದಿಂದ ಪಕ್ಷಕ್ಕೆ ತಮ್ಮ ನಿಯತ್ತು ಬದಲಾಯಿಸುವ ಕಾರಣದಿಂದಲೇ ರಾಜಕೀಯದಲ್ಲಿ ಅತೀಹೆಚ್ಚು ಫೇಮಸ್ ಆದವರು. ಇನ್ನೊಂದೆಡೆ ಇಂಡಿಯಾ ಕೂಟದ ಸಭೆಗಾಗಿ  ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಆರ್‌ಜೆಡಿಯ ತೇಜಸ್ವಿ ಯಾದವ್ ಉದ್ಧವ್ ಠಾಕ್ರೆ, ಶರದ್ ಪವಾರ್ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್, ಎಡಪಕ್ಷಗಳ ಮುಖಂಡರೂ ಕೂಡ ದೆಹಲಿಗೆ ಹಾರಿದ್ದಾರೆ. 

ದಕ್ಷಿಣ ಭಾರತದಲ್ಲಿ ಕಮಾಲ್ ಮಾಡಿದ ಪ್ರಧಾನಿ ಮೋದಿ ರೋಡ್ ಶೋ.. ಉತ್ತರದಲ್ಲೇ ಅನಿರೀಕ್ಷಿತ ಆಘಾತ

ಹಾಗೆಯೇ ಎನ್‌ಡಿಎ ಸಭೆಗೆ ಸಂಬಂಧಿಸಿದಂತೆ, ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು, ಏಕನಾಥ್ ಶಿಂಧೆ ಬಣದ ಶಿವಸೇನೆ ನಾಯಕರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಹಿಂದೂಸ್ತಾನ್ ಅವಾಮ್ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಾಂಝಿ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮತ್ತು ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಅವರು ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

COVID-19 Vaccine: ಯುವಕರ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? AIIMS ವರದಿ ಬಹಿರಂಗ
PM Modi: ಮತ್ತೆ ದಕ್ಷಿಣದತ್ತ ಮುಖ ಮಾಡಿದ ಪ್ರಧಾನಿ: ರಾಜಕೀಯ ಮಹತ್ವ ಪಡೆದ ಮೋದಿ ನಡೆ