
ಪಾಟ್ನಾ: ಚುನಾವಣಾ ತಂತ್ರಜ್ಞ ಹಾಗೂ ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor) ಇದೀಗ ಬಿಹಾರದ ರಾಜಕಾರಣದಲ್ಲಿ ದೊಡ್ಡ ಹೆಜ್ಜೆಯನ್ನಿಟ್ಟಿದ್ದಾರೆ. ಗೆಲುವಿನ ಬೆನ್ನಲ್ಲೇ ಆಕ್ಷನ್ ಮೂಡ್ಗೆ ಇಳಿದಿರುವ ಪಿಕೆ 10 ಸಾವಿರ ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿಸುವ ಮಹತ್ವದ ಭರವಸೆ ನೀಡಿದ್ದಾರೆ.
ಮಂಗಳವಾರ (ಆಗಸ್ಟ್ 11) ಶಾಹಿದ್ ರಾಮ್ ಗೋವಿಂದ್ ಸಿಂಗ್ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿದ ಪ್ರಶಾಂತ್ ಕಿಶೋರ್, ಸ್ಥಳೀಯರೊಂದಿಗೆ ಸಂವಾದ ನಡೆಸಿದರು. ನಿಮ್ಮ ಮಕ್ಕಳು ಓದಿ ಬರೆದು ಕೆಲಸವಿಲ್ಲದೆ ಅಲೆಯುತ್ತಿದ್ದರೆ ಅವರ ಸಿವಿ (CV) ಅಥವಾ ರೆಸ್ಯೂಮೆಗಳನ್ನು ತಂದು ನಮ್ಮ ಕಚೇರಿಗೆ ನೀಡಿ. ಕನಿಷ್ಠ 10 ಸಾವಿರ ಮಕ್ಕಳಿಗೆ ಉದ್ಯೋಗ ಕೊಡಿಸುವ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎಂದು ಘೋಷಿಸಿದ್ದಾರೆ.
ಸದ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಕಿಶೋರ್, ನನ್ನ ಜೀವನದ ಸಂಪರ್ಕಗಳು ಮತ್ತು ನಾನು ಕೆಲಸ ಮಾಡಿದ ಇಷ್ಟು ವರ್ಷಗಳಲ್ಲಿ ಅನೇಕರು ಲಾಭ ಪಡೆದಿದ್ದಾರೆ. ಅವರೆಲ್ಲರಿಗೂ ನಾನು ಐದು ದಿನಗಳ ಹಿಂದೆ ಕರೆ ಮಾಡಿ ನಮ್ಮ ಯುವಕರಿಗೆ ಕೆಲಸ ಒದಗಿಸುವಂತೆ ಕೇಳಿಕೊಂಡಿದ್ದೇನೆ. ಸದ್ಯಕ್ಕೆ ನಾವು ಸರ್ಕಾರದಲ್ಲಿ ಇಲ್ಲದ ಕಾರಣ ಉದ್ಯೋಗಗಳು ಬಿಹಾರದ ಹೊರಗೆ ಇರಲಿವೆ. ಆದರೆ ಬಿಹಾರದಲ್ಲಿ 'ಜನ ಸುರಾಜ್' ವ್ಯವಸ್ಥೆ ಜಾರಿಗೆ ಬಂದ ನಂತರ ನಮ್ಮ ಮಕ್ಕಳು ಹೊರಗೆ ಹೋಗುವ ಅಗತ್ಯವಿರುವುದಿಲ್ಲ. ಇಲ್ಲೇ ಉದ್ಯೋಗ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳ ಸುಧಾರಣೆ ಕುರಿತೂ ಮಾತನಾಡಿದ ಅವರು ಜನರಿಗೆ ಒಂದು ವರ್ಷ ಸಮಯ ನೀಡುವಂತೆ ಕೇಳಿಕೊಂಡಿದ್ದಾರೆ. ಒಂದು ವರ್ಷದೊಳಗೆ ನಿಮ್ಮ ಸರ್ಕಾರಿ ಶಾಲೆಗಳು ಸುಧಾರಿಸಲಿವೆ. ಒಂದು ವೇಳೆ ಬದಲಾವಣೆ ಕಾಣದಿದ್ದರೆ ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ, ಅದರ ಸಂಪೂರ್ಣ ವೆಚ್ಚವನ್ನು ನಮ್ಮ ಕಚೇರಿಯೇ ಭರಿಸಲಿದೆ. ನಿಮಗೆ ಹಣದ ಹೊರೆ ಇರುವುದಿಲ್ಲ ಎಂದು ಮತ್ತೊಂದು ಬಂಪರ್ ಭರವಸೆ ನೀಡಿದರು.
ಗೆದ್ದ ನಂತರ ಪಿಕೆ ಎಲ್ಲಿದ್ದಾರೆ ಎಂದು ಟೀಕಿಸುತ್ತಿದ್ದವರಿಗೆ ಉತ್ತರಿಸಿದ ಅವರು ನಾನು ಸುಮ್ಮನೆ ತಿರುಗಾಡುತ್ತಿಲ್ಲ. ನಿಮ್ಮ ಕೆಲಸವನ್ನೇ ಮಾಡುತ್ತಿದ್ದೇನೆ. ನಾನು ಅಧಿಕಾರ ವಹಿಸಿಕೊಳ್ಳಲು ಇನ್ನೂ ಕೆಲವು ದಿನಗಳು ಬಾಕಿ ಇವೆ, ಅಷ್ಟರಲ್ಲೇ ಜನರ ಕಷ್ಟಕ್ಕೆ ಸ್ಪಂದಿಸಲು ಬಂದಿದ್ದೇನೆ ಎಂದಿದ್ದಾರೆ. ಒಟ್ಟಿನಲ್ಲಿ ಪ್ರಶಾಂತ್ ಕಿಶೋರ್ ಅವರ ಈ '10 ಸಾವಿರ ಉದ್ಯೋಗ' ಮತ್ತು 'ಶಾಲಾ ಶಿಕ್ಷಣದ' ಭರವಸೆಗಳು ಬಿಹಾರದಲ್ಲಿ ಹೊಸ ರಾಜಕೀಯ ಚರ್ಚೆಗೆ ದಾರಿ ಮಾಡಿಕೊಟ್ಟಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ