
ಚಿನ್ನದ ಪ್ರಿಯರಿಗೆ ಒಂದು ಖುಷಿ ಸುದ್ದಿ. ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಕಾರ್ಯಾರಂಭ ಮಾಡಲು ಸಜ್ಜಾಗಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಜೋನ್ನಗಿರಿ ಪ್ರದೇಶದಲ್ಲಿ ಖಾಸಗಿ ಪ್ಲಾಂಟ್ ಚಿನ್ನದ ಗಣಿಗಾರಿಕೆ ಮತ್ತು ಸಂಸ್ಕರಣೆಗೆ ಸಿದ್ಧವಾಗುತ್ತಿದೆ. ಫೆಬ್ರವರಿ 18 ರಂದು ರಾಜ್ಯ ಸರ್ಕಾರ ಸಾರ್ವಜನಿಕ ವಿಚಾರಣೆ ನಡೆಸಿ ಅಂತಿಮ ಪರಿಸರ ಅನುಮತಿ ನೀಡಿದ ನಂತರ ಪ್ಲಾಂಟ್ ಕಾರ್ಯಾರಂಭ ಮಾಡಲಿದೆ.
ಸುಮಾರು ಎರಡು ವರ್ಷಗಳ ಹಿಂದೆ ಜಿಯೋಮೈಸೋರ್ ಮತ್ತು ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಚಿನ್ನದ ಗಣಿಯ ಆರಂಭಿಕ ಯೋಜನೆಗಳನ್ನು ಪ್ರಾರಂಭಿಸಿದವು. ಸಾರ್ವಜನಿಕ ವಿಚಾರಣೆಯ ನಂತರ ಅಂತಿಮ ಪರಿಸರ ಅನುಮತಿ ದೊರೆತ ಮೂರು ತಿಂಗಳೊಳಗೆ ಇಲ್ಲಿಂದ ಚಿನ್ನ ಉತ್ಪಾದಿಸಲು ಪ್ರಾರಂಭಿಸುತ್ತಾರೆ ಎಂದು ವರದಿಗಳು ತಿಳಿಸಿವೆ. ಪ್ರದೇಶದಿಂದ ವರ್ಷಕ್ಕೆ ಕನಿಷ್ಠ 750 ಕಿಲೋಗ್ರಾಂ ಚಿನ್ನವನ್ನು ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ಐ) 1994 ರಲ್ಲಿ ಕರ್ನೂಲ್ ಜಿಲ್ಲೆಯಲ್ಲಿ ಮೊದಲ ಬಾರಿಗೆ ಚಿನ್ನದ ನಿಕ್ಷೇಪವನ್ನು ಪತ್ತೆಹಚ್ಚಿತು. ನಂತರ ಪರಿಶೋಧನಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಖಾಸಗಿ ಸಂಸ್ಥೆಗಳನ್ನು ಆಹ್ವಾನಿಸಲಾಯಿತು. ಆದರೆ, ಪ್ರಾಥಮಿಕ ಅಧ್ಯಯನವನ್ನು ಪೂರ್ಣಗೊಳಿಸಲು ಸಹ ಭಾರಿ ಹೂಡಿಕೆ ಅಗತ್ಯವಿದ್ದ ಕಾರಣ ಯಾವುದೇ ಕಂಪನಿಯೂ ಮುಂದೆ ಬರಲಿಲ್ಲ. 2005 ರಲ್ಲಿ ಮುಕ್ತ ಪರವಾನಗಿ ನೀತಿಯ ಮೂಲಕ ಸರ್ಕಾರ ಮತ್ತೆ ಖಾಸಗಿ ಕಂಪನಿಗಳನ್ನು ಹುಡುಕಿತು.
ಇದನ್ನೂ ಓದಿ: ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರಿಗಾಗಿ ಚಿನ್ನದ ಎಟಿಎಂ, ನಿಮ್ಮದಾಗಿಸಿಕೊಳ್ಳಿ ಬಂಗಾರದ ನಾಣ್ಯ
ಅಂತಿಮವಾಗಿ, ಬೆಂಗಳೂರು ಮೂಲದ ಜಿಯೋ ಫಿಸಿಸಿಸ್ಟ್ ಡಾ. ಮೊದಲಿ ಹನುಮ ಪ್ರಸಾದ್ ನೇತೃತ್ವದ ಜಿಯೋಮೈಸೋರ್ ಸರ್ವೀಸಸ್ ಲಿಮಿಟೆಡ್ 2013 ರಲ್ಲಿ ಚಿನ್ನದ ಪರಿಶೋಧನೆಗಾಗಿ ಪ್ರಾಥಮಿಕ ಪರವಾನಗಿ ಪಡೆಯಿತು. ಆದರೆ, ನಂತರ ಕಂಪನಿಗೆ ಪೈಲಟ್ ಯೋಜನೆ ನಡೆಸಲು ಎಲ್ಲಾ ಅನುಮತಿಗಳು ದೊರೆಯಲು 10 ವರ್ಷಗಳೇ ಬೇಕಾಯಿತು.
ಈ ಮಧ್ಯೆ, ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಡಿಜಿಎಂಎಲ್) ಜಿಯೋಮೈಸೋರ್ನ 40% ಷೇರುಗಳನ್ನು ಖರೀದಿಸಿತ್ತು. ಸಂಸ್ಥೆಯು ಸುಮಾರು 1,500 ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದುಕೊಂಡಿತು ಮತ್ತು ತುಗ್ಗಲಿ, ಮದ್ದಿಕೇರ ಕ್ಷೇತ್ರಗಳಿಂದ ಸುಮಾರು 750 ಎಕರೆ ಖರೀದಿಸಿ 2021 ರಲ್ಲಿ ಪ್ರಯೋಗಗಳನ್ನು ಪ್ರಾರಂಭಿಸಿತು. ಜೊತೆಗೆ ಡಿಜಿಎಂಎಲ್ ಸಣ್ಣ ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ಪೈಲಟ್ ಯೋಜನೆಗಾಗಿ ಪರಿಶೋಧನಾ ಕಾರ್ಯಗಳನ್ನು ಪ್ರಾರಂಭಿಸಿತು.
ಇದನ್ನೂ ಓದಿ: ದುಬಾರಿ ದರವಿದ್ದರೂ ಕಡಿಮೆಯಾಗದ ಚಿನ್ನದ ವ್ಯಾಮೋಹ: ಜನವರಿಯಲ್ಲಿ ₹23000 ಕೋಟಿಯ ಚಿನ್ನ ಆಮದು
ಸುಮಾರು ಎರಡು ವರ್ಷಗಳ ಹಿಂದೆ ಪ್ಲಾಂಟ್ನಲ್ಲಿ ಪೈಲಟ್ ಯೋಜನೆಯನ್ನು ಪ್ರಾರಂಭಿಸಿದ ಜಿಯೋಮೈಸೋರ್ ಮತ್ತು ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಅಂತಿಮವಾಗಿ ಪ್ಲಾಂಟ್ನಿಂದ ವಾಣಿಜ್ಯಿಕವಾಗಿ ಚಿನ್ನವನ್ನು ಉತ್ಪಾದಿಸಲು ನಿರ್ಧರಿಸಿದವು. 2024ರ ಡಿಸೆಂಬರ್ ವೇಳೆಗೆ ವಾಣಿಜ್ಯ ಚಟುವಟಿಕೆಗಳನ್ನು ಪ್ರಾರಂಭಿಸಲು ಅವರು ಬಯಸಿದ್ದವು. ಆದರೆ ಪ್ರಯೋಗಾಲಯ ವರದಿಗಳು ತಡವಾಗಿ ಬಂದ ಕಾರಣ ಮತ್ತೆ ವಿಳಂಬವಾಯಿತು. ಕಂಪನಿಯು ಸುಮಾರು 25 ವರ್ಷಗಳ ಕಾಲ ಗಣಿಗಾರಿಕೆ ಚಟುವಟಿಕೆಗಳನ್ನು ಮುಂದುವರಿಸಲಿದೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಭಾರತದ ಕರ್ನಾಟಕ, ಜಾರ್ಖಂಡ್, ಉತ್ತರ ಪ್ರದೇಶ, ಆಂಧ್ರ ಮುಂತಾದ ರಾಜ್ಯಗಳಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ