
ಪಣಜಿ: ಪ್ರಸ್ತಾವಿತ ಗೋವಾ ಹುಲಿ ಪ್ರದೇಶದ ಮೊದಲ ಹಂತದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಸಂರಕ್ಷಿತ ಅಭಯಾರಣ್ಯ ಪ್ರದೇಶವನ್ನಷ್ಟೇ ಸೇರ್ಪಡೆ ಮಾಡುವಂತೆ ಸುಪ್ರೀಂ ಕೋರ್ಟ್ನ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ. ಮೊದಲ ಹಂತದಿಂದ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನವಸತಿ ಪ್ರದೇಶ ಹೊಂದಿರುವ ಭಗವಾನ್ ಮಹಾವೀರ್ ವನ್ಯಜೀವಿ ಅಭಯಾರಣ್ಯ ಮತ್ತು ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹೊರಗಿಡಬೇಕು. ಈ ಪ್ರದೇಶವನ್ನು ಸಾಕಷ್ಟು ಸಮಾಲೋಚನೆಯ ಬಳಿಕ ಮುಂದಿನ ಹಂತದಲ್ಲಿ ಸೇರ್ಪಡೆ ಮಾಡಬೇಕು ಎಂದು ಸಲಹೆ ನೀಡಿದೆ.
ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಸಂಬಂಧ ಗೋವಾ ಫೌಂಡೇಷನ್ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿತ್ತು. ಅದರಂತೆ ತನ್ನ ವ್ಯಾಪ್ತಿಯಲ್ಲಿರುವ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂಪಕ್ಷಿತ ಪ್ರದೇಶವನ್ನಾಗಿ ಘೋಷಿಸಲು ಹೈಕೋರ್ಟ್ ಗೋವಾ ಸರ್ಕಾರಕ್ಕೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಗೋವಾ ಫೌಂಡೇಷನ್ ಸೇರಿ ಸಂಬಂಧಪಟ್ಟ ಎಲ್ಲರ ಅಭಿಪ್ರಾಯ ಆಲಿಸಿದ ಸುಪ್ರೀಂ ಕೋರ್ಟ್ ರಚಿಸಿದ ಸಿಇಸಿ ತನ್ನ ವರದಿಯನ್ನು ನ.21ರಂದು ಕೋರ್ಟ್ಗೆ ಸಲ್ಲಿಸಿದೆ.
ಕರ್ನಾಟಕದ ಕಾಳಿ ಹುಲಿ ಸಂರಕ್ಷಿತ ಪ್ರದೇಶದೊಂದಿಗೆ ಹೊಂದಿಕೊಂಡಿರುವ ರಾಜ್ಯದ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಜನವಸತಿ ಇದೆ. ನೇತ್ರಾವಳಿ ಅಭಯಾರಣ್ಯದಲ್ಲಿ 50 ಮನೆಗಳು, ಕೋಟಿಗಾವೋ ಅಭಯಾರಣ್ಯ ವ್ಯಾಪ್ತಿಯಲ್ಲಿ ಕೇವಲ 41 ಮನೆಗಳಷ್ಟೇ ಇವೆ. ಈ ಪ್ರದೇಶಗಳನ್ನಷ್ಟೇ ಪ್ರಸ್ತಾವಿತ ಗೋವಾ ಹುಲಿ ಸಂರಕ್ಷಿತ ಪ್ರದೇಶದ ಮೊದಲ ಹಂತದಲ್ಲಿ ಸೇರ್ಪಡೆ ಮಾಡಬೇಕು.
ಪ್ರಸ್ತಾವಿತ ಗೋವಾ ಹುಲಿ ಸಂರಕ್ಷಿತ ಪ್ರದೇಶವು ಒಟ್ಟು 468.60 ಚರದ ಕಿ.ಮೀ. ವ್ಯಾಪ್ತಿ ಹೊಂದಿದ್ದು, ಇದು 1,345 ಚದರ ಕಿ.ಮೀ. ವ್ಯಾಪ್ತಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದೆ. ಈ ಎರಡೂ ಹುಲಿ ಸಂರಕ್ಷಿತ ಪ್ರದೇಶಗಳಿಂದ ಒಟ್ಟಾರೆ 1,814 ಕಿ.ಮೀ. ವ್ಯಾಪ್ತಿಯ ಸಂರಕ್ಷಿತ ಪ್ರದೇಶ ನಿರ್ಮಾಣವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಕಬ್ಬನ್ ಪಾರ್ಕ್ನಲ್ಲಿ ನ.27ರಿಂದ ಫ್ಲವರ್ ಶೋ: ಹುಲಿ-ಚಿರತೆ-ಆನೆಗಳ ಹೂವಿನ ಕಲಾಕೃತಿ ಆಕರ್ಷಣೆ
ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾರಣ ನೈಸರ್ಗಿಕವಾಗಿ ಈ ಪ್ರದೇಶ ಹುಲಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲಿದೆ. ಇದರಿಂದ ಕಾನೂನು ಹಾಗೂ ಸಾಮಾಜಿಕವಾಗಿಯೂ ಕಡಿಮೆ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಜನವಸತಿ ಪ್ರದೇಶಗಳನ್ನು ಹೊಂದಿರುವ ಭಗವಾನ್ ಮಹಾವೀರ್ ವನ್ಯಜೀವಿ ಅಭಯಾರಣ್ಯ(560 ಮನೆಗಳು) ಮತ್ತು ಮಹದಾಯಿ ವನ್ಯಜೀವಿ ಅಭಯಾರಣ್ಯ(612 ಮನೆಗಳು)ವನ್ನು ಗೋವಾ ಹುಲಿ ಸಂರಕ್ಷಿತ ಪ್ರದೇಶದ ಮೊದಲ ಹಂತದಲ್ಲಿ ಸೇರ್ಪಡೆ ಮಾಡಬಾರದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕನ್ನಡ ಶಾಲೆ ಮುಚ್ಚಿದರೆ ಕನ್ನಡವನ್ನೇ ಕೊಂದಂತೆ.. ಹೇಗೆ ಅಂತ ಗೊತ್ತಾ? ಇಲ್ಲಿದೆ ಚಂದ್ರಶೇಖರ ದಾಮ್ಲೆ ಲೇಖನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ