ಮಹದಾಯಿ: ಕರ್ನಾಟಕದ ಡಿಪಿಆರ್‌ಗೆ ಕೇಂದ್ರ ಒಪ್ಪಿಗೆ; ಅಮಿತ್‌ ಶಾಗೆ ಗೋವಾ ಸಿಎಂ ದೂರು

By Kannadaprabha NewsFirst Published Jan 12, 2023, 8:07 AM IST
Highlights

ಮಹದಾಯಿ ವಿಚಾರವಾಗಿ ಅಮಿತ್‌ ಶಾಗೆ ಗೋವಾ ದೂರು ಕೊಟ್ಟಿದೆ. ಸಿಎಂ ಪ್ರಮೋದ್‌ ಸಾವಂತ್‌, ಕೇಂದ್ರ ಸಚಿವ ನಾಯಕ್‌ ನೇತೃತ್ವದ ನಿಯೋಗದ ಭೇಟಿ ಮಾಡಿದ್ದು, ಶಾ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಸಾವಂತ್‌ ಹೇಳಿದ್ದಾರೆ. 

ನವದೆಹಲಿ: ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಬುಧವಾರ ರಾತ್ರಿ ಭೇಟಿಯಾಗಿ ಮಹದಾಯಿ ಕುರಿತು ದೂರು ಸಲ್ಲಿಸಿದೆ. ಕರ್ನಾಟಕದ ಡಿಪಿಆರ್‌ಗೆ ಕೇಂದ್ರ ಒಪ್ಪಿಗೆ ನೀಡಿರುವುದನ್ನು ವಿರೋಧಿಸಿದೆ. ಮಹದಾಯಿ ಯೋಜನೆಗೆ ಕರ್ನಾಟಕ ಸಲ್ಲಿಸಿದ್ದ ಪರಿಷ್ಕೃತ ಡಿಪಿಆರ್‌ಗೆ ಕೇಂದ್ರ ಸರ್ಕಾರ ನೀಡಿರುವ ಅನುಮೋದನೆ ಹಿಂಪಡೆಯಬೇಕೆಂದು ಗೋವಾ ನಿಯೋಗ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಜಲ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ರನ್ನು ಭೇಟಿ ಮಾಡಿ ಒತ್ತಾಯಿಸಿದೆ. ‘ಈ ಬಗ್ಗೆ ಅಮಿತ್‌ ಶಾ ಅವರಿಂದ ಧನಾತ್ಮಕ ಪ್ರತಿಕ್ರಿಯ ಬಂದಿದೆ’ ಎಂದು ಸಭೆ ಬಳಿಕ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ. ಆದರೆ ‘ದೇಖೇಂಗೆ. ಸ್ಟಡಿ ಕರೇಂಗೆ’ (ನೋಡೋಣ) ಎಂದು ಅಮಿತ್‌ ಶಾ ಹೇಳಿದರು ಎಂದು ಕೆಲವು ಮೂಲಗಳು ಹೇಳಿವೆ.

ಗೋವಾ (Goa) ಸಿಎಂ ಪ್ರಮೋದ್‌ ಸಾವಂತ್‌ (Pramod Sawant), ಕೇಂದ್ರ ಸಚಿವ ಶ್ರೀಪಾದ್‌ ನಾಯಕ್‌ (Shripad Naik) ಒಳಗೊಂಡ ಗೋವಾ ನಿಯೋಗವು ಅಮಿತ್‌ ಶಾ (Amit Shah), ಗಜೇಂದ್ರ ಸಿಂಗ್‌ ಶೆಖಾವತ್‌ (Gajendra Singh Shekhawat) ಭೇಟಿ ಮಾಡಿತು. ಕರ್ನಾಟಕದ ಯೋಜನೆಯಿಂದ ರಾಜ್ಯದಲ್ಲಿ ನೀರಿನ ಕೊರತೆ ಕಾಣಿಸಿಕೊಳ್ಳಲಿದೆ. ಹೀಗಾಗಿ ಯೋಜನೆಗೆ ನೀಡಿರುವ ಅನುಮತಿ ಹಿಂದಕ್ಕೆ ಪಡೆಯುವಂತೆ ಹಾಗೂ ಐತೀರ್ಪು ಜಾರಿ ಮೇಲೆ ಕಣ್ಣಿಡಲು ಮಹದಾಯಿ ಪ್ರಾಧಿಕಾರ ರಚಿಸುವಂತೆ ನಿಯೋಗ ಒತ್ತಾಯಿಸಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಮಹದಾಯಿ ಯೋಜನೆಗೆ ಭಾರಿ ಹಿನ್ನಡೆ: ಮತ್ತೆ ತಗಾದೆ ತೆಗೆದ ಕೇಂದ್ರ ಪರಿಸರ ಅರಣ್ಯ ಇಲಾಖೆ

ಈ ನಿಯೋಗದಲ್ಲಿ ಗೋವಾ ಸಿಎಂ ಜತೆಗೆ ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀಪಾದ್ ನಾಯಕ್, ಗೋವಾ ವಿಧಾನಸಭೆ ಸ್ಪೀಕರ್ ರಮೇಶ್ ತಾವಡ್ಕರ್, ಜಲಸಂಪನ್ಮೂಲ ಅಭಿವೃದ್ಧಿ ಸಚಿವ ಸುಭಾಷ್ ಶಿರೋಡ್ಕರ್, ಪರಿಸರ ಸಚಿವ ನೀಲೇಶ್ ಕಬ್ರಾಲ್, ಸಾರಿಗೆ ಸಚಿವ ಮೂವಿನ್ ಗೊಡಿನ್ಹೋ, ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ವಿದ್ಯುತ್ ಸಚಿವ ರಾಮಕೃಷ್ಣ ಧವಲಿಕರ್ ಮತ್ತು ಸ್ವತಂತ್ರ ಶಾಸಕ ಚಂದ್ರಕಾಂತ್ ಶೆಟ್ಟಿ ಇದ್ದರು ಎಂದು ತಿಳಿದುಬಂದಿದೆ.

ಅಮಿತ್ ಶಾ ಭೇಟಿಗೂ ಮುನ್ನ ಪಣಜಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಾ ಸಿಎಂ, ಮಹದಾಯಿ ಸಮಸ್ಯೆ ಅಂತರರಾಜ್ಯ ವಿಷಯವಾಗಿರುವುದರಿಂದ ಕೇಂದ್ರ ಗೃಹ ಸಚಿವರಿಗೆ ಅದನ್ನು ಪರಿಹರಿಸುವ ಅಧಿಕಾರವಿದೆ ಎಂದು ತಿಳಿಸಿದರು. ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಗೋವಾದ ಹಿತಾಸಕ್ತಿ ಕಾಪಾಡಲು ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಎತ್ತಿ ಹಿಡಿದ ಗೋವಾ ಸಿಎಂ, ಈ ಬಗ್ಗೆ ನೀರು ನಿರ್ವಹಣಾ ಪ್ರಾಧಿಕಾರ ರಚಿಸುವಂತೆ ಕೇಂದ್ರವನ್ನು ನಿಯೋಗ ಒತ್ತಾಯಿಸಲಿದೆ ಎಂದರು. ಯೋಜನೆಗೆ ವಿಸ್ತೃತ ಯೋಜನಾ ವರದಿಗೆ ನೀಡಿರುವ ಅನುಮೋದನೆಯನ್ನು ಹಿಂಪಡೆಯುವಂತೆಯೂ ನಿಯೋಗ ಒತ್ತಾಯಿಸಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Mahadayi Dispute: 1 ವರ್ಷದಲ್ಲಿ ಮಹದಾಯಿ ಜಾರಿ: ಕಾರಜೋಳ ಶಪಥ

ಇನ್ನು, ಮಹದಾಯಿ ವಿಚಾರದ ಬಗ್ಗೆ ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಮಾತನಾಡಿದ್ದು, ಮಹದಾಯಿ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿರುವ ಹಿನ್ನೆಲೆಯಲ್ಲಿ ನಿಯೋಗ ದೆಹಲಿಗೆ ತೆರಳಿದೆ. 'ಮಹದಾಯಿ ಹೋರಾಟಕ್ಕೆ ನಾವು ಕೈ ಹಾಕಿಲ್ಲ. ಸರ್ಕಾರ ಗಂಭೀರವಾಗಿದೆ. ಹಿಂತಿರುಗಿದ ಮೇಲೆ ವಿಷಯಗಳು ಸಕಾರಾತ್ಮಕವಾಗಿರುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ  ಅವರು ಹೇಳಿದರು. ಕರ್ನಾಟಕದ ಡಿಪಿಆರ್‌ಗೆ ಸಿಡಬ್ಲ್ಯುಸಿ ಅನುಮೋದನೆಯನ್ನು ಪ್ರಶ್ನಿಸಿ ಗೋವಾ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಉಲ್ಲಂಘನೆ ಆರೋಪದ ಮೇಲೆ ಕರ್ನಾಟಕ ಸರ್ಕಾರಕ್ಕೆ ರಾಜ್ಯವು ಶೋಕಾಸ್ ನೋಟಿಸ್ ನೀಡಿದೆ.

ಇದನ್ನೂ ಓದಿ: ಮಹದಾಯಿ: ಗೋವಾ ಮೂಲದ ಕೇಂದ್ರ ಸಚಿವ ರಾಜೀನಾಮೆ ಬೆದರಿಕೆ

click me!