
ಪುಣೆ: ಲಡಾಕ್ಗೆ ಪ್ರವಾಸ ಹೋಗಿ ವಾಪಸ್ ಬರುತ್ತಿದ್ದ ವೇಳೆ ಫಾರ್ಚುನರ್ ಕಾರೊಂದು ಫ್ಲೈಒವರ್ನಿಂದ ಕೆಳಗೆ ಬಿದ್ದ ಪರಿಣಾಮ ಮೂವರು ಸ್ನೇಹಿತರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರೆಲ್ಲರೂ ತಮ್ಮ 21, 23, ಹಾಗೂ 25ರ ಹರೆಯದವರಾಗಿದ್ದು, ತರುಣರ ಈ ಹಠಾತ್ ಸಾವು ಪೋಷಕರನ್ನು ಆಘಾತಕ್ಕೆ ದೂಡಿದೆ. ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಸಾಗಿ ಹೋಗುವ ಪುಣೆ ಡೆಲ್ಲಿ ಎಕ್ಸ್ಪ್ರೆಸ್ ವೇಯಲ್ಲಿ ಈ ಅಪಘಾತ ಸಂಭವಿಸಿದೆ. ಕೋಟಾ ಜಿಲ್ಲೆಯ ಕೈಥುನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಾಪುರ ಮತ್ತು ಕರಡಿಯಾ ಗ್ರಾಮಗಳ ನಡುವೆ ಬುಧವಾರ ಬೆಳಗ್ಗೆ 10:30 ರ ಸುಮಾರಿಗೆ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಅತಿ ವೇಗದಲ್ಲಿ ಚಲಿಸುತ್ತಿದ್ದ ಟೊಯೋಟಾ ಫಾರ್ಚೂನರ್ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಫ್ಲೈಓವರ್ನಿಂದ ಸುಮಾರು 30 ಅಡಿಗಳಷ್ಟು ಕೆಳಗೆ ಬಿದ್ದಿದೆ. ಅಪಘಾತದ ಪರಿಣಾಮ ವಾಹನದಲ್ಲಿದ್ದ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರು ನಜ್ಜುಗುಜ್ಜಾಗಿತ್ತು. ಸ್ಥಳೀಯ ನಿವಾಸಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ತೀವ್ರ ಹಾನಿಗೊಳಗಾದ ಅವರ ವಾಹನದಿಂದ ಅವರನ್ನು ಹೊರತೆಗೆದರು. ಗಾಯಾಳುಗಳನ್ನು ತಕ್ಷಣವೇ ಕೈಥುನ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು, ಅಲ್ಲಿನ ವೈದ್ಯರು ಈ ಯುವಕರು ಆಸ್ಪತ್ರೆಗೆ ಬರುವುದರೊಳಗೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಮೃತರನ್ನು 21 ವರ್ಷದ ಸಿದ್ಧಾಂತ್ ಅಲ್ಹತ್ , 25 ವರ್ಷದ ಕುನಾಲ್ ಚೋರಾಡಿಯಾ ಹಾಗೂ 23 ವರ್ಷದ ಮಯೂರೇಶ್ ಪಡಲೆಎಂದು ಗುರುತಿಸಲಾಗಿದೆ. ಮೂವರೂ ಪುಣೆ ನಿವಾಸಿಗಳಾಗಿದ್ದು, ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರು. ಪ್ರಾಥಮಿಕ ವರದಿಯ ಪ್ರಕಾರ ವಾಹನ ಚಾಲನೆ ಮಾಡುತ್ತಿದ್ದ ಯುವಕ ಬಹುಶಃ ನಿದ್ರೆ ಮಂಪರಿಗೆ ಜಾರಿರಬಹುದು ಇದರಿಂದ ವಾಹನವು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾ*ಚಾರ: ಪ್ರಭಾವಿ ಜ್ಯೋತಿಷಿಯ ಬಂಧನ: ತನಿಖೆಗಿಳಿದ ಪೊಲೀಸರಿಗೆ ಸಿಕ್ತು ಬೆಚ್ಚಿಬೀಳಿಸುವ ಪೆನ್ಡ್ರೈವ್
ಲೇಹ್-ಲಡಾಖ್ ಮತ್ತು ಜಮ್ಮು ಕಾಶ್ಮೀರಕ್ಕೆ ರೋಡ್ ಟ್ರಿಪ್ ಕೈಗೊಂಡಿದ್ದ ಸ್ನೇಹಿತರು
ಪೊಲೀಸರ ಪ್ರಕಾರ ಈ ಯುವಕರು ಫೆಬ್ರವರಿ 26 ರಂದು ಪ್ರಾರಂಭವಾದ ಲೇಹ್-ಲಡಾಖ್ ಮತ್ತು ಜಮ್ಮು ಕಾಶ್ಮೀರಕ್ಕೆ ರೋಡ್ ಟ್ರಿಪ್ ಕೈಗೊಂಡಿದ್ದ 12 ಸ್ನೇಹಿತರ ಗುಂಪಿನ ಭಾಗವಾಗಿದ್ದರು. ಅಪಘಾತ ಸಂಭವಿಸಿದಾಗ ಈ ಸ್ನೇಹಿತರು ಹಲವು ವಾಹನಗಳಲ್ಲಿ ಪುಣೆಗೆ ಹಿಂತಿರುಗುತ್ತಿದ್ದರು. ಇವರ ಈ ನತದೃಷ್ಟ ಕಾರು ವಾಹನಗಳ ಸಾಲಿನ ಮುಂಭಾಗದಲ್ಲಿತ್ತು, ಅವರ ಸ್ನೇಹಿತರು ಅವರ ಹಿಂದೆಯೇ ಎರಡು ಫಾರ್ಚೂನರ್ ಎಸ್ಯುವಿಗಳಲ್ಲಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಪ್ರತ್ಯಕ್ಷದರ್ಶಿಗಳು ವರದಿ ಮಾಡಿರುವ ಪ್ರಕಾರ, ವಾಹನವು ವೇಗದಲ್ಲಿ ಚಲಿಸುತ್ತಿದ್ದಂತೆ ಕಂಡುಬಂದಿದ್ದು, ನಂತರ ಇದ್ದಕ್ಕಿದ್ದಂತೆ ಹಿಂದಕ್ಕೆ ಸರಿದು ಅಪಘಾತಕ್ಕೀಡಾಗಿದೆ. ಒಟ್ಟಿನಲ್ಲಿ ರೋಡ್ ಟ್ರಿಪ್ಪೊಂದು ಯುವಕರ ಜೀವವನ್ನೇ ಬಲಿ ಪಡೆದಿದೆ.
ಇದನ್ನೂ ಓದಿ:
ರೆಡ್ ಬುಲ್ ಎಫ್1 ಕಾರಿಗೆ ನಿಂಬೆ ಮೆಣಸಿನಕಾಯಿ ಕಟ್ಟಿ ತೆಂಗಿನಕಾಯಿ ಒಡೆದು ಪೂಜೆ ಮಾಡಿದ ವಿದೇಶಿ ಮಹಿಳೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ