ಭಾರತದ ಮೊದಲ ಕೋವಿಡ್ ಪತ್ತೆಯಾಗಿ 3 ವರ್ಷ, ಸರಿಯಾಗಿ ನೆನಪಿದೆ ಕೊರೋನಾ ಸಂಕಷ್ಟ!

By Suvarna NewsFirst Published Jan 31, 2023, 7:44 PM IST
Highlights

ಭಾರತದಲ್ಲಿ ಮೊದಲ ಕೋವಿಡ್ ಪತ್ತೆಯಾಗಿ 3 ವರ್ಷ ಕಳೆದಿದೆ. ಈ ಮೂರು ವರ್ಷದಲ್ಲಿ ಭಾರತ ಹಲವು ಅಡೆ ತಡೆ ಎದುರಿಸಿದೆ. ಲಾಕ್‌ಡೌನ್, ಆಕ್ಸಿಜನ್ ಕೊರತೆ, ಲಸಿಕೆ ಅಭಿವೃದ್ಧಿ, ಉಚಿತ ಲಸಿಕೆ ವಿತರಣೆ ಸೇರಿದಂತೆ ಹಂತ ಹಂತವಾಗಿ ಭಾರತ ಕೋವಿಡ್ ಸವಾಲು ಎದುರಿಸಿ ಗೆದ್ದಿದೆ. ಕಳೆದ 3 ವರ್ಷ ಭಾರತದ ಎದುರಿಸಿದ ಸಂಕಷ್ಟ, ಸಾಧನೆ ಸಂಕ್ಷಿಪ್ತ ನೋಟ ಇಲ್ಲಿದೆ.

ನವದೆಹಲಿ(ಜ.31):  ಕೋವಿಡ್ ಸಂಕಷ್ಟದಿಂದ ಭಾರತ ಮೈಕೊಡವಿ ನಿಂತಿದೆ. ಇದೀಗ ಭಾರತ ಆರ್ಥಿಕ ಪುನಶ್ಚೇತನದ ಬಜೆಟ್ ನಿರೀಕ್ಷೆಯಲ್ಲಿದೆ. ಕೋವಿಡ್ ಸಂಕಷ್ಟ ದಿನಗಳನ್ನು ಯಾರೂ ಮರೆತಿಲ್ಲ. ಸರಿಯಾಗಿ ಮೂರು ವರ್ಷಗಳ ಹಿಂದೆ ಭಾರತದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಬಳಿಕ ಮಾರ್ಚ್ 8 ರಂದು ಕರ್ನಾಟಕದ ಕಲಬುರಗಿಯಲ್ಲಿ ಮೊದಲ ಸಾವು ಸೇರಿದಂತೆ ರಾಜ್ಯ ರಾಜ್ಯಗಳಲ್ಲಿ ಪ್ರಕರಣ ಕಾಡ್ಗಿಚ್ಚಿನಂತೆ ಹರಡಿತ್ತು. ಸೀಲ್ ಡೌನ್, ಜನತಾ ಕರ್ಫ್ಯೂ, ಲಾಕ್‌ಡೌನ್,  ಎರಡನೇ ಅಲೆ ಸೇರಿದಂತೆ ಸಂಕಷ್ಟಗಳ ಸರಮಾಲೆ ಸೃಷ್ಟಿಯಾಗಿತ್ತು. ಆಸ್ಪತ್ರೆ ಬೆಡ್ ಕೊರತೆ, ಆಕ್ಸಿಜನ್ ಕೊರತೆ ಮೆಟ್ಟಿ ನಿಂತ ಭಾರತ ಲಸಿಕೆ ಅಭಿವೃದ್ಧಿ ಮಾಡಿ ದೇಶಕ್ಕೆ ಉಚಿತವಾಗಿ ಹಂಚಿಕೆ ಮಾಡಿತ್ತು. ಇತರ ದೇಶಗಳಿಗೂ ವಿತರಿಸಿತ್ತು. ಹೀಗೆ ಮೂರು ವರ್ಷದಲ್ಲಿ ಭಾರತ ಸಂಪೂರ್ಣವಾಗಿ ಕೋವಿಡ್ ನಿಯಂತ್ರಿಸಿ ಇತರರಿಗೆ ಮಾದರಿಯಾಗಿದೆ. 

ಭಾರತದ ಮೊದಲ ಕೋವಿಡ್ ಪ್ರಕರಣ
ಡಿಸೆಂಬರ್ 2019ರಲ್ಲಿ ಚೀನಾದ ವುಹಾನ್‌ನಲ್ಲಿ ಕೋವಿಡ್ ಸ್ಫೋಟಗೊಂಡಿತ್ತು. ಈ ವೇಳೆ ಇದು ಭಾರತಕ್ಕೆ ಬರಲ್ಲ, ಇಲ್ಲಿನ ಬಿಸಿ ವಾತಾವರಣದಲ್ಲಿ ಕೋವಿಡ್‌ ವೈರಸ್ ಉಳಿಯಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಜನವರಿ 17ಕ್ಕೆ ಮೂರನೇ ವರ್ಷದ ಮೆಡಿಕಲ್ ವಿದ್ಯಾರ್ಥಿ ಕೇರಳದ ತ್ರಿಶೂರ್‌ಗೆ ಮರಳಿದ್ದರು. ಜ್ವರ ಹಾಗೂ ಕೋವಿಡ್ ರೋಗಲಕ್ಷಣ ಕಾಣಿಸಿಕೊಂಡ ಕಾರಣ ಪರೀಕ್ಷೆಗೆ ಒಳಗಾದಿದ್ದರು. ಈ ವರದಿ ಜನವರಿ 30ಕ್ಕೆ ಬಹಿರಂಗಗೊಂಡಿತ್ತು. ಈ ಮೂಲಕ ಭಾರತದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿತ್ತು.ಫೆಬ್ರವರಿ 20, 2020ರಲ್ಲಿ ಈ ವಿದ್ಯಾರ್ಥಿ ಆಸ್ಪತ್ರೆಯಿಂದ ಬಿಡುಗಡೆಯಾದರು.

ಚೀನಾದಲ್ಲಿ ಕೊರೋನಾ ತಾಂಡವ, ಬಹುತೇಕ ಗ್ರಾಮಗಳಲ್ಲಿ ಶವಪೆಟ್ಟಿಗೆಗಳಿಗೆ ಬರ!

ಕರ್ನಾಟಕದಲ್ಲಿ ಫೆ.17ಕ್ಕೆ ಮೊದಲ ಕೇಸ್, ಮಾರ್ಚ್ 8ಕ್ಕೆ ಮೊದಲ ಸಾವು
ಕರ್ನಾಟಕದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾಗಿದ್ದು ಫೆಬ್ರವರಿ 17, 2021ರಲ್ಲಿ. ಇದು ರಾಜ್ಯದಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿತ್ತು. ರಾಜ್ಯ ಕೂಡ ಅಲರ್ಟ್ ಆಗಿ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿತ್ತು. ಇತ್ತ ಮಾರ್ಚ್ 8 ರಂದು ದೇಶದ ಮೊದಲ ಕೋವಿಡ್ ಸಾವು ಪ್ರಕರಣ ಕಲಬುರಗಿಯಲ್ಲಿ ದಾಖಲಾಗಿತ್ತು. 

ಜನವರಿ 17ಕ್ಕೆ ಮಾರ್ಗಸೂಚಿ ಬಿಡುಗಡೆ
ಕೋವಿಡ್ ಪ್ರಕರಣ ದೇಶ ಪ್ರವೇಶಿಸುವ ಮುನ್ನವೇ ಚೀನಾದಿಂದ ಆಗಮಿಸುವ ಪ್ರಯಾಣಿಕರಿಗೆ ನಿರ್ಬಂಧ ಹೇರಲಾಯಿತು. ಕೋವಿಡ್ ಮಾರ್ಗಸೂಚಿ ಪ್ರಕಟ ಮಾಡಲಾಯಿತು. ಜನವರಿ 18ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಕಡ್ಡಾಯ ಕೋವಿಡ್ ಪರೀಕ್ಷೆಗೆ ಸೂಚಿಸಲಾಯಿತು. ಮಾರ್ಚ್ 22ಕ್ಕೆ ಭಾರತ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಿತು.

 

ಭಾರತದಲ್ಲಿ ನೇಸಲ್ ಡ್ರಾಪ್ ಕೋವಿಡ್ ಲಸಿಕೆ ಬಿಡುಗಡೆ, ಸರ್ಕಾರಿ ಆಸ್ಪತ್ರೆಯಲ್ಲಿ 325 ರೂ!

ಲಾಕ್‌ಡೌನ್
ಮಾರ್ಚ್ 22, 2022ರ ಭಾನುವಾರ ಪ್ರಧಾನಿ ಮೋದಿ ಜನತಾ ಕರ್ಫ್ಯೂ ಘೋಷಿಸಿದರು. ಇಡೀ ಭಾರತವೇ ಸಂಪೂರ್ಣ ಬಂದ್ ಆಗಿತ್ತು. ಆದರೆ ಕೋವಿಡ್ ಪ್ರಕರಣ ಹರಡುವಿಕೆ ಪ್ರಮಾಣ ಹೆಚ್ಚಾದ ಕಾರಣ ಮಾರ್ಚ್ 24ರ ಸಂಜೆ ಪ್ರಧಾನಿ ಮೋದಿ ದೇಶವನ್ನುದ್ದೇಶಿ ಭಾಷಣ ಮಾಡಿದರು. ಬಳಿಕ ಮಾರ್ಚ್ 25 ರಿಂದ 21 ದಿನಗಳ ಲಾಕ್‌ಡೌನ್ ಘೋಷಿಸಲಾಯಿತು. ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ವಲಸೆ ಕಾರ್ಮಿಕರು ತಮ್ಮ ತಮ್ಮ ಗ್ರಾಮಕ್ಕೆ ಹಿಂತಿರುಗಲು ಹರಸಾಹಸಪಟ್ಟರು. ಸಾವಿರ ಕಿಲೋಮೀಟರ್ ನಡೆದುಕೊಂಡೆ ಹೋದವರು ಇದ್ದಾರೆ. ಸಿಕ್ಕ ಸಿಕ್ಕ ವಾಹನ ಏರಿ, ಊಟ, ನೀರು ಇಲ್ಲದೆ ಆರೋಗ್ಯ ಹದಗೆಟ್ಟು ಕಾರ್ಮಿಕರು ಹಾಗೂ ಕೆಳವರ್ಗದ ಜನರ ಪರಿಸ್ಥಿತಿ ಶೋಚನೀಯವಾಗಿತ್ತು.

ಕೋವಿಡ್ ಮೂರು ಅಲೆ
ಸೆಪ್ಟೆಂಬರ್ 17, 2020ರ ವೇಳೆ ಮೊದಲ ಅಲೆ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಪ್ರತಿ ದಿನ ಸರಾಸರಿ 98,000 ಪ್ರಕರಣ ಪತ್ತೆಯಾಗಿತ್ತು. ಮಾರ್ಚ್ 2021ರ ವೇಳೆಗೆ ಎರಡನೇ ಅಲೆ ವಕ್ಕರಿಸಿತ್ತು. ಇದು ಭಾರತವನ್ನು ಹೈರಾಣಾಗಿಸಿತ್ತು. 1.6 ಕೋಟಿ ಹೆಚ್ಚು ಮಂದಿ ಎರಡನೇ ಅಲೆಯಲ್ಲಿ ಕೋವಿಡ್‌ಗೆ ತುತ್ತಾಗಿದ್ದರು. ಆಕ್ಸಿನ್ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಭಾರತ ಎದುರಿಸಿತ್ತು. ಡಿಸೆಂಬರ್ 2021ರ ಅಂತ್ಯದಲ್ಲಿ ಒಮಿಕ್ರಾನ್ ಮೂಲಕ ಭಾರತದಲ್ಲಿ 2ನೇ ಅಲೆ ಭೀತಿ ಆರಂಭಗೊಂಡಿತ್ತು.

ಲಸಿಕೆ ಅಭಿವೃದ್ಧಿ ಹಾಗೂ ವಿಚರಣೆ
ಕೋವಿಡ್ ನಡುವೆ ಕೇಂದ್ರ ಸರ್ಕಾರ ಲಸಿಕೆ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿತ್ತು. ಇದರ ಪರಿಣಾಮ ಜನವರಿ 16, 2021ರಲ್ಲಿ ಕೋವಿಡ್ ಲಸಿಕೆ ವಿತರಣೆ ಆರಂಭಿಸಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಭಾರತದ ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು. ಹಂತ ಹಂತವಾಗಿ ಲಸಿಕೆ ಕಾರ್ಯಕ್ರವನ್ನು ವಿಸ್ತರಿಸಲಾಯಿತು. ಬಳಿಕ  ಒಮಿಕ್ರಾನ್, ಡೆಲ್ಟಾ ಸೇರಿದಂತೆ ಹಲವು ರೂಪಾಂತರಿ ವೈರಸ್ ಆತಂಕಕ್ಕೆ ಬೂಸ್ಟರ್ ಡೂಸ್ ನೀಡುವ ಕಾರ್ಯಕ್ರಮ ಆರಂಭಿಸಲಾಯಿತು.

click me!