ಕೇರಳದಲ್ಲಿ ಮತ್ತೆ ರೈಲಲ್ಲಿ ಬೆಂಕಿ: ಸಿಸಿಟಿವಿಯಲ್ಲಿ ಕ್ಯಾನ್ ಹಿಡಿದ ವ್ಯಕ್ತಿ ಪತ್ತೆ

By Kannadaprabha NewsFirst Published Jun 2, 2023, 7:00 AM IST
Highlights

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಆಲಪ್ಪುಳ-ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿನ ಬೋಗಿಯಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡ ಘಟನೆ ಬುಧವಾರ ತಡರಾತ್ರಿ 1.30ರ ವೇಳೆ ನಡೆದಿದೆ.

ಕಣ್ಣೂರು: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಆಲಪ್ಪುಳ-ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿನ ಬೋಗಿಯಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡ ಘಟನೆ ಬುಧವಾರ ತಡರಾತ್ರಿ 1.30ರ ವೇಳೆ ನಡೆದಿದೆ. ಅದೃಷ್ಟವಶಾತ್‌ ಪ್ರಯಾಣಿಕರೆಲ್ಲಾ ಬೋಗಿಯಿಂದ ಇಳಿದ ಬಳಿಕ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ಆದರೆ ಬೆಂಕಿ ಕಾಣಿಸಿಕೊಂಡ ರೈಲಿನ ಬೋಗಿ, ರೈಲ್ವೆ ಪೆಟ್ರೋಲ್‌ ಟ್ಯಾಂಕ್‌ನಿಂದ (railway petrol tank) ಕೇವಲ 100 ಮೀಟರ್‌ ದೂರದಲ್ಲಿತ್ತು. ಹೀಗಾಗಿ ಒಂದೊಮ್ಮೆ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸದೇ ಹೋಗಿದ್ದಲ್ಲಿ ಭಾರೀ ಅವಘಡವೊಂದು ಸಂಭವಿಸುವ ಸಾಧ್ಯತೆ ಇತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನಾ ಸ್ಥಳದ ಸಿಸಿಟೀವಿ (CCTV) ಪರಿಶೀಲಿಸಿದ ವೇಳೆ ವ್ಯಕ್ತಿಯೊಬ್ಬ ತಲೆಗೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಕ್ಯಾನ್‌ ಹಿಡಿದು ಸಾಗಿದ ದೃಶ್ಯ ಸೆರೆಯಾಗಿದೆ. ಜೊತೆಗೆ ಎಂಜಿನಿಂದ್ ರೈಲಿನ ಬೋಗಿ ಬೇರ್ಪಡಿಸಿದ ಬಳಿಕ ಘಟನೆ ನಡೆದ ಕಾರಣ ಶಾರ್ಟ್‌ ಸರ್ಕೀಟ್‌ ಆಗಿರುವ ಸಾಧ್ಯತೆ ಇಲ್ಲವೇ ಇಲ್ಲ. ಹೀಗಾಗಿ ಅನಾಮಿಕರ ದುಷ್ಕೃತ್ಯದ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿವೆ. ದುರ್ಘಟನೆ ಕುರಿತು ಕೇರಳ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿಧಿ ವಿಜ್ಞಾನ ತಜ್ಞರು (Forensic experts) ಕೂಡಾ ಸ್ಥಳಕ್ಕೆ ಆಗಮಿಸಿದ್ದಾರೆ. ಮತ್ತೊಂದೆಡೆ ರಾಷ್ಟ್ರೀಯ ತನಿಖಾ ದಳ ಕೂಡಾ ತನ್ನ ತನಿಖೆ ಆರಂಭಿಸಿದೆ.

ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಸೈಫಿ ವಿವಾದಿತ ಇಸ್ಲಾಂ ಪ್ರಚಾರಕ ಝಾಕೀರ್‌ನ ಕಟ್ಟಾ ಅನುಯಾಯಿ

ಕಳೆದ ಏ.2ರಂದು ಕೂಡಾ ಕಲ್ಲಿಕೋಟೆಯಲ್ಲಿ (Kallikote) ನಿಲ್ದಾಣದ ಸಮೀಪದಲ್ಲೇ ರೈಲೊಂದರಲ್ಲಿ ವ್ಯಕ್ತಿಯೊಬ್ಬ ದಹನಶೀಲ ಪದಾರ್ಥ ಎರಚಿ ಬೆಂಕಿ ಹಚ್ಚಿದ್ದ ಘಟನೆ ನಡೆದಿತ್ತು. ಇದರಿಂದ ಆತಂಕಗೊಂಡ ಮೂವರು ರೈಲಿನಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ದೆಹಲಿ ಮೂಲದ ಶಾರುಖ್‌ ಸೈಫಿ (Shahrukh Saifi) ಎಂಬಾತನನ್ನು ಬಂಧಿಸಲಾಗಿತ್ತು. ಅದೇ ರೈಲಿನಲ್ಲಿ ಮತ್ತೆ ಇದೀಗ ದುರ್ಘಟನೆ ಸಂಭವಿಸಿದೆ.

ಈ ನಡುವೆ ಆಡಳಿತಾರೂಢ ಎಡಪಕ್ಷದ ವಿರುದ್ಧ ವಿಪಕ್ಷಗಳು ತೀವ್ರ ಕಿಡಿಕಾರಿದ್ದು, ಸರ್ಕಾರ ಇಂತಹ ಘಟನೆಗಳ ಬಗ್ಗೆ ಯಾವುದೇ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ. ವೋಟ್‌ ಬ್ಯಾಂಕ್‌ಗಾಗಿ ರಾಜ್ಯದ ಭದ್ರತೆಯನ್ನು ಬಿಟ್ಟುಕೊಡಲಾಗಿದೆ ಎಂದು ಆರೋಪಿಸಿವೆ.

ಕೇರಳ ರೈಲಿಗೆ ಬೆಂಕಿ ಹಿಂದೆ ಉಗ್ರ ನಂಟಿನ ಶಂಕೆ; ಸಂಪೂರ್ಣ ರೈಲು ಸುಡುವ ದುರುದ್ದೇಶ: ಎನ್‌ಐಎಗೆ ಸ್ಫೋಟಕ ಸುಳಿವು

 

click me!