
ಪಾಟ್ನ (ಮೇ.18) ಭಾರತೀಯ ರೈಲ್ವೇಯಲ್ಲಿ ಕಳೆದ 2 ದಿನದಲ್ಲಿ 2 ರೈಲಿನಲ್ಲಿ ಬೆಂಕಿ ದುರ್ಘಟನೆ ನಡೆದಿದೆ. ತಿರುವನಂತಪುರಂ ದೆಹಲಿ ನಡುವಿನ ರಾಜಧಾನಿ ಎಕ್ಸ್ಪ್ರೆಸ್ ರೈಲು ಮಧ್ಯಪ್ರದೇಶದ ಬಳಿ ಬೆಂಕಿಗೆ ಆಹುತಿಯಾಗಿತ್ತು. ಇಂದು ಸಸರಾಂ ಪಾಟ್ನಾ ನಡುವಿನ ಪ್ರಯಾಣಿಕರ ರೈಲಿನ ಬೋಗಿಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಸಸರಾಂ ನಿಲ್ದಾಣದಿಂದ ಪ್ರಯಾಣಿಕರ ಹೊತ್ತ ರೈಲು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲೇ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ದುರ್ಘಟನೆ ನಡೆದಿದೆ.
ಸಸರಾಂ ರೈಲು ನಿಲ್ದಾಣದಿಂದ ಪಾಟ್ನಾಗೆ ಹೊರಟ್ಟಿದ್ದ ರೈಲಿನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. 6ನೇ ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ರೈಲು ಪ್ರಯಾಣಿಕರ ಹೊತ್ತು ಇನ್ನೇನು ಪಾಟ್ನಾದತ್ತ ಪ್ರಯಾಣ ಬೆಳೆಸಬೇಕು ಅನ್ನೋವಷ್ಟರಲ್ಲೇ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಳು ಆರಂಭಗೊಂಡಿದೆ. ರೈಲ್ವೇ ರಕ್ಷಣಾ ತಂಡ, ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ. ಪರಿಣಾಮ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಬೆಂಕಿ ಕೆನ್ನಾಲಗೆ ಆವರಿಸುತ್ತಿದ್ದಂತೆ ಸಿಬ್ಬಂದಿಗಳು ಬೋಗಿಯನ್ನು ಬೇರ್ಪಡಿಸಿದ್ದಾರೆ. ಇದರ ಪರಿಣಾಮ ಇತರ ಬೋಗಿಗೆ ಬೆಂಕಿ ಹೊತ್ತಿಕೊಳ್ಳದಂತೆ ತಡೆದಿದ್ದಾರೆ. ಹೀಗಾಗಿ ದುರಂತದ ತೀವ್ರತೆಯನ್ನು ತಗ್ಗಿಸಿದ್ದಾರೆ. ಇಡೀ ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿತ್ತು. ಹಲವು ಪ್ರಯಾಣಿಕರು ಹೊಗೆಯಿಂದ ಅಸ್ವಸ್ಥರಾಗಿದ್ದರು. ಇತ್ತ ಪ್ರಯಾಣಿಕರನ್ನು ರೈಲು ನಿಲ್ದಾಣದಿಂದ ಹೊರಗೆ ಕಳುಹಿಸಲಾಯಿತು.
ಬೆಂಕಿ ಅವಘಡದಿಂದ ರೈಲು ನಿಲ್ದಾಣದಲ್ಲಿ ಕೆಲ ಕಾಲ ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಇತ್ತ ಇತರ ರೈಲುಗಳ ಪ್ರಯಾಣಕ್ಕೂ ಅಡ್ಡಿಯಾಗಿತ್ತು. ಹೀಗಾಗಿ ಸಸರಾಂ ಮಾರ್ಗದಲ್ಲಿ ಸಾಗುವ ಕೆಲ ರೈಲುಗಳು ವಿಳಂಬವಾಗಿದೆ.
ತಿರುವನಂತಪುರಂ ದೆಹಲಿ ನಡುವಿನ ನಿಜಾಮುದ್ದೀನ್ ರಾಜಧಾನಿ ಎಕ್ಸ್ಪ್ರೆಸ್ ರೈಲು ಮಧ್ಯಪ್ರದೇಶದ ಬಳಿ ಬೆಂಕಿ ಹೊತ್ತಿಕೊಂಡಿತ್ತು. ಹಲವು ಬೋಗಿಗಳು ಬೆಂಕಿಗೆ ಆಹುತಿಯಾಗಿತ್ತು. ರೈಲ್ವೇ ಗಾರ್ಡ್ ಬೆಂಕಿ ಗಮನಿಸಿದ ತಕ್ಷಣವೇ ಲೋಕೋ ಪೈಲೆಟ್ಗೆ ಮಾಹಿತಿ ನೀಡಲಾಗಿತ್ತು. ಹೀಗಾಗಿ ಎಮರ್ಜೆನ್ಸಿ ಬ್ರೇಕ್ ಮೂಲಕ ರೈಲು ನಿಲ್ಲಿಸಿ ಪ್ರಯಾಣಿಕರ ರಕ್ಷಣೆ ಮಾಡಲಾಗಿತ್ತು. ಹೀಗಾಗಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ