ದೇಶದಲ್ಲೂ ಎಪ್‌ಸ್ಟೀನ್‌ ಫೈಲ್ಸ್‌ ಗದ್ದಲ

Kannadaprabha News   | Kannada Prabha
Published : Feb 12, 2026, 05:48 AM IST
Hardeep Puri

ಸಾರಾಂಶ

ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕಡತಗಳಲ್ಲಿನ ತಮ್ಮ ಹೆಸರು ಉಲ್ಲೇಖಿಸಿ ಲೋಕಸಭೆಯಲ್ಲಿ ತಮ್ಮ ವಿರುದ್ಧ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾಡಿದ್ದ ಆರೋಪಗಳನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಪುರಿ ಸಾರಾಸಗಟಾಗಿ ತಿರಸ್ಕರಿಸಿದ್ದಾ

ನವದೆಹಲಿ : ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕಡತಗಳಲ್ಲಿನ ತಮ್ಮ ಹೆಸರು ಉಲ್ಲೇಖಿಸಿ ಲೋಕಸಭೆಯಲ್ಲಿ ತಮ್ಮ ವಿರುದ್ಧ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾಡಿದ್ದ ಆರೋಪಗಳನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಪುರಿ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ‘ಎಪ್‌ಸ್ಟೀನ್‌ನನ್ನು ಕಾರ್ಯನಿಮಿತ್ತ 3-4 ಸಲ ಭೇಟಿ ಮಾಡಿದ್ದು ನಿಜ. ಆದರೆ ಆತನ ಲೈಂಗಿಕ ಹಗರಣಕ್ಕೂ ಭೇಟಿಗೂ ಸಂಬಂಧವಿಲ್ಲ. ಈ ಬಗ್ಗೆ ನನ್ನ ವಿರುದ್ಧ ರಾಹುಲ್‌ ಗಾಂಧಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ‘ಉದ್ಯಮಿ ಅನಿಲ್ ಅಂಬಾನಿ ಹಾಗೂ ಸಚಿವ ಹರ್ದೀಪ್‌ ಪುರಿ ಹೆಸರು ಎಪ್‌ಸ್ಟೀನ್‌ ಫೈಲ್‌ಗಳಲ್ಲಿವೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಲಿ. ಅವರ ವಿರುದ್ಧ ಇನ್ನೂ ಕ್ರಮ ಏಕಿಲ್ಲ?’ ಎಂದು ಪ್ರಶ್ನಿಸಿದ್ದರು.

ಇದಕ್ಕ ಸಂಜೆ ಸುದ್ದಿಗೋಷ್ಠಿಯಲ್ಲಿ ಸುದೀರ್ಘ ತಿರುಗೇಟು ನೀಡಿದ ಪುರಿ, ‘ನಾನು ವಿದೇಶಾಂಗ ಇಲಾಖೆಯಲ್ಲಿ ಮೊದಲು ಕೆಲಸ ಮಾತ್ತಿದ್ದೆ. ಸೇವೆಗೆ ರಾಜೀನಾಮೆ ನೀಡಿದ ನಂತರ ಅಂತಾರಾಷ್ಟ್ರೀಯ ಶಾಂತಿ ಸಂಸ್ಥೆಯಲ್ಲಿ (ಐಪಿಐ) ಕೆಲಸ ಮಾಡಿದ್ದೆ. ಐಪಿಐ ಮುಖ್ಯಸ್ಥ ಬಾಸ್ ಟೆರ್ಜೆ ರಾಡ್-ಲಾರ್ಸೆನ್ ಅವರಿಗೆ ಎಪ್‌ಸ್ಟೀನ್ ಪರಿಚಯ ಇತ್ತು. ಅವರ ಸೂಚನೆಯಂತೆ ನಾನು 3 ಅಥವಾ ಗರಿಷ್ಠ 4 ಬಾರಿ ಭೇಟಿ ಮಾಡಿದ್ದೆ. ವೃತ್ತಿಪರ ಇ-ಮೇಲ್‌ ಸಂವಾದವೂ ಆಗಿತ್ತು. ಆದರೆ ಈ ಮಾತುಕತೆಗೂ ಎಪ್‌ಸ್ಟೀನ್‌ನ ಅಪರಾಧಗಳಿಗೂ ಯಾವುದೇ ಸಂಬಂಧವಿಲ್ಲ. ಹಾಗೆ ನೋಡಿದರೆ ಎಪ್‌ಸ್ಟೀನ್‌ ನನ್ನನ್ನು ಎರಡು ಮುಖದವನು ಎಂದಿದ್ದ. ಆ ಅಂಶವೂ ಇ-ಮೇಲ್‌ನಲ್ಲಿದೆ. ಅದನ್ನು ರಾಹುಲ್‌ ಗಮನಿಸಲಿ’ ಎಂದರು.

‘ಎಪ್‌ಸ್ಟೀನ್‌ ಹಗರಣದಲ್ಲಿ ಸಂತ್ರಸ್ತರಾದವರೂ ಇದ್ದಾರೆ. ಇಂದು ಅವರು ಹಲವರ ಹೆಸರನ್ನು ಬಯಲು ಮಾಡುತ್ತಿದ್ದಾರೆ. ಆದರೆ ನಮ್ಮ ಎಪ್‌ಸ್ಟೀನ್‌ ಭೇಟಿಗೂ ಆತನ ಲೈಂಗಿಕ ಹಗರಣಕ್ಕೂ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

ರಾಹುಲ್‌ ಕಣ್ಣು ಹೊಡೆದಿದ್ದರು:

ಇದಲ್ಲದೆ, ‘ಕಳೆದ ವರ್ಷ ನವೆಂಬರ್ 26 ರಂದು ನಡೆದ ಸಂವಿಧಾನ ದಿವಸ್‌ ಆಚರಣೆ ವೇಳೆ, ನಾನು ಹಳೆಯ ಸಂಸತ್ತಿನ ಕಟ್ಟಡದ ಕೇಂದ್ರ ಸಭಾಂಗಣದಲ್ಲಿದ್ದೆ. ಕಾರ್ಯಕ್ರಮ ಮುಗಿದ ನಂತರ, ಅವರು (ರಾಹುಲ್ ಗಾಂಧಿ) ನನ್ನ ಬಳಿಗೆ ಬಂದು ತಮ್ಮ ಶೈಲಿಯಲ್ಲಿ ನನ್ನತ್ತ ಕಣ್ಣು ಮಿಟುಕಿಸಿದರು. ಅದನ್ನು ನೋಡಿ ನಾನು ಚಕಿತನಾದೆ. ಆಗ ಅವರು ‘ನಿಮ್ಮ ಹೆಸರು ಆಸಕ್ತಿದಾಯಕ ಸ್ಥಳಗಳಲ್ಲಿದೆ’ ಎಂದು ಹೇಳಿದರು. ಅದಕ್ಕೆ ಉತ್ತರಿಸಿದ ನಾನು, ‘ನೀವು ಸತ್ಯಗಳು ಏನೆಂದು ತಿಳಿದುಕೊಳ್ಳಲು ಬಯಸುತ್ತೀರಾ?’ ಎಂದು ಕೇಳಿದೆ. ಅವರಿಗೆ ಟಿಪ್ಪಣಿಯನ್ನೂ ಕಳಿಸಿದ್ದೆ’ ಎಂದರು.

ಈ ವೇಳೆ, ‘ದೇಶದಲ್ಲಿ 2 ಥರದ ರಾಜಕಾರಣಿಗಳಿದ್ದಾರೆ. ಮೊದಲನೆಯ ಥರದ ರಾಜಕಾರಣಿಗಳು ಗಂಭೀರವಾಗಿರುತ್ತಾರೆ. ದೇಶ ನಿರ್ಮಾಣ ಮಾಡುತ್ತಾರೆ. ಆದರೆ 2ನೇ ಥರದ ರಾಜಕಾರಣಗಳು ಸದಾ ವಿದೇಶ ಪ್ರವಾಸ ಮಾಡುತ್ತ ದೇಶಕ್ಕೆ ಸಾಂದರ್ಭಿಕವಾಗಿ ಬರುತ್ತಾರೆ. ಕೇವಲ ಮಿಥ್ಯಾರೋಪ ಮಾಡುತ್ತಿರುತ್ತಾರೆ. ಅವರು ‘ಬಫೂನರಿ’ಯಲ್ಲಿ ತೊಡಗಿದ್ದಾರೆ’ ಎಂದು ರಾಹುಲ್‌ ಹೆಸರೆತ್ತದೇ ಚಾಟಿ ಬೀಸಿದರು.

ರಾಹುಲ್‌ ಹೇಳಿದ್ದೇನು?:

ಇದಕ್ಕೂ ಮುನ್ನ ಲೋಕಸಭೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ‘ಅನಿಲ್‌ ಅಂಬಾನಿ ಅವರು ಜೈಲಿನಲ್ಲಿ ಏಕೆ ಇಲ್ಲ ಎಂದು ನಾನು ಕೇಳಲು ಬಯಸುತ್ತೇನೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡವಿದೆ. ಇದರ ಜತೆಗೆ ಅವರ ಹೆಸರು ಹಾಗೂ ಕೇಂದ್ರ ಸಚಿವ ಹರ್ದೀಪ್ ಪುರಿ ಅವರ ಹೆಸರುಗಳು ಎಪ್‌ಸ್ಟೀನ್‌ ಫೈಲ್ಸ್‌ನಲ್ಲಿವೆ. ಅಂಬಾನಿ ಅವರನ್ನು ಎಪ್‌ಸ್ಟೀನ್‌ಗೆ ಪರಿಚಯಿಸಿದವರು ಯಾರು ಎಂದು ಹರ್ದೀಪ್ ಪುರಿಗೆ ಕೇಳಲು ಬಯಸುತ್ತೇನೆ ಮತ್ತು ಹರ್ದೀಪ್ ಪುರಿಗೆ ಅವರನ್ನು ಯಾರು ಪರಿಚಯಿಸಿದರು ಎಂದು ತಿಳಿದಿದೆ’ ಎಂದು ಗೂಢಾರ್ಥದಲ್ಲಿ ಹೇಳಿದರು. ಬಳಿಕ ಸುದ್ದಿಗಾರರ ಜತೆ ಸಂಸತ್ತಿನ ಹೊರಗೆ ಮಾತನಾಡಿ, ಇದೇ ಆರೋಪಗಳನ್ನು ಪುನರುಚ್ಚರಿಸಿದರು.

- ರಾಹುಲ್‌ ಆರೋಪಕ್ಕೆ ಕೇಂದ್ರ ಮಂತ್ರಿ ತಿರುಗೇಟು

ಇಂದು ಹಕ್ಕುಚ್ಯುತಿ ಮಂಡನೆ ಸಂಭವ ಈ ಬಗ್ಗೆ ಮಾತನಾಡಿದ ಕೇಂದ್ರ ಸಂಸದೀಯ ಸಚಿವ ಕಿರಣ್‌ ರಿಜಿಜು, ‘ರಾಹುಲ್‌ ಗಾಂಧಿ ಯಾವುದೇ ನೋಟಿಸ್‌ ನೀಡದೇ ಪುರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದು ಹಕ್ಕುಚ್ಯುತಿ. ರಾಹುಲ್‌ ವಿರುದ್ಧ ನಾವು ಸ್ಪೀಕರ್‌ಗೆ ಹಕ್ಕುಚ್ಯುತಿ ನೋಟಿಸ್‌ ನೀಡುವ ಇರಾದೆ ಹೊಂದಿದ್ದೇವೆ’ ಎಂದರು. ಗುರುವಾರ ಇದರ ಮಂಡನೆ ಆಗುವ ಸಾಧ್ಯತೆ ಇದೆ.-

ಅಂಬಾನಿ- ಎಪ್‌ಸ್ಟೀನ್‌ಬಗ್ಗೆ ಸಚಿವ ಪುರಿ ಹೇಳಲಿ

ಕೇಂದ್ರ ಸಚಿವ ಹರ್ದೀಪ್ ಪುರಿ ಹೆಸರು ಎಪ್‌ಸ್ಟೀನ್‌ ಫೈಲ್ಸ್‌ನಲ್ಲಿವೆ. ಅಂಬಾನಿ ಅವರನ್ನು ಎಪ್‌ಸ್ಟೀನ್‌ಗೆ ಪರಿಚಯಿಸಿದವರು ಯಾರು ಎಂದು ಪುರಿ ಅವರಿಗೆ ಕೇಳಲು ಬಯಸುತ್ತೇನೆ.

- ರಾಹುಲ್ ಗಾಂಧಿ, ವಿಪಕ್ಷ ನಾಯಕ

--ನನ್ನನ್ನು 2 ಮುಖದವನುಅಂತ ಹೇಳಿದ್ದ ಎಪ್‌ಸ್ಟೀನ್‌ವಿದೇಶಾಂಗ ಅಧಿಕಾರಿಯಾಗಿದ್ದ ಶಾಂತಿ ಸಂಸ್ಥೆ ಮುಖ್ಯಸ್ಥರ ಸೂಚನೆಯಂತೆ 3-4 ಬಾರಿ ಎಪ್‌ಸ್ಟೀನ್‌ ಭೇಟಿಯಾಗಿದ್ದೆ. ಇ-ಮೇಲ್‌ನಲ್ಲೂ ಸಂವಾದ ಮಾಡಿದ್ದೆ. ಆತ ನನ್ನನ್ನು ಎರಡು ಮುಖದವನು ಎಂದಿದ್ದ. ಅದನ್ನೂ ಗಮನಿಸಿ.

- ಹರ್ದೀಪ್‌ ಸಿಂಗ್‌ ಪುರಿ, ಕೇಂದ್ರ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande Mataram: ವಂದೇ ಮಾತರಂ ಗೀತೆಗೆ ಬುನಾದಿಹಾಕಿದ್ದೇ ಕಾಂಗ್ರೆಸ್‌ ಪಕ್ಷ ಎಂದ ಡಿಸಿಎಂ
44 ವರ್ಷ ನಂತರ ಮುಂಬೈಗೆ ಬಿಜೆಪಿ ಮೇಯರ್‌