
ಚೆನ್ನೈ(ಜ.3): ಅಕ್ಕಿ ಹೊಟ್ಟಿನಿಂದ ತಯಾರಿಸಿದ ಪರಿಸರ ಸ್ನೇಹಿ ತಟ್ಟೆ ಲೋಟ ಹಾಗೂ ಆಹಾರ ತುಂಬಿಸುವ ಪೊಟ್ಟಣಗಳ ಬಗ್ಗೆ ತಿಳಿಸುವ ವಿಡಿಯೋವೊಂದನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು (Supriya Sahu) ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್ನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ರಿಟ್ವಿಟ್ ಮಾಡಿದ್ದು, ಇವುಗಳ ಬಳಕೆ ಬಗ್ಗೆ ಜನರ ಗಮನ ಸೆಳೆದಿದ್ದಾರೆ. ಇದು ತಮಿಳುನಾಡು ಮಾತ್ರವಲ್ಲ ದೇಶಾದ್ಯಂತ ಮರು ಬಳಕೆ ಮಾಡಬಲ್ಲ ಪರಿಸರ ಸ್ನೇಹಿ ವಸ್ತುಗಳನ್ನು ಜನ ಬಳಸುವಂತಾಗಬೇಕು. ಇದು ನಿಜವಾಗಿಯೂ ಕೆಲಸ ಮಾಡುತ್ತದೆ. ಇಂತಹ ಸಾಕಷ್ಟು ಆವಿಷ್ಕಾರಗಳಿಂದಾದ ವಸ್ತುಗಳನ್ನು ನಾವು ಪ್ಲಾಸ್ಟಿಕ್ನ ಬದಲು ಬಳಸಬಹುದು. ಇಂತಹ ಸಂಶೋಧನೆಗಳಿಗೆ ಉತ್ಪಾದನೆ ಹೆಚ್ಚಿಸಲು ಭಾರತ ಸರ್ಕಾರವೂ ಪ್ರೋತ್ಸಾಹ ನೀಡಬೇಕು ಎಂದು ಅವರು ಟ್ವಿಟ್ನಲ್ಲಿ ಮನವಿ ಮಾಡಿದ್ದಾರೆ.
ಈ ವಿಡಿಯೊ ಅಕ್ಕಿ ಹೊಟ್ಟಿನಿಂದ ತಯಾರಿಸಿದ ಆಹಾರ ಪಾತ್ರೆಗಳನ್ನು ತೋರಿಸುತ್ತಿದೆ. ಇದರಲ್ಲಿ ವಿವಿಧ ಗಾತ್ರದ ಲೋಟಗಳು ಮತ್ತು ಬಾಟಲಿಗಳನ್ನು ಸಹ ತೋರಿಸಲಾಗಿದೆ. ಇದನ್ನು ಒಮ್ಮೆ ಮಾತ್ರ ಬಳಸಬಹುದು ಎಂದು ವಿಡಿಯೋದಲ್ಲಿರುವ ವ್ಯಕ್ತಿ ಹೇಳುತ್ತಿರುವುದು ಕೇಳಿ ಬರುತ್ತಿದೆ. ಈ ವೀಡಿಯೋವನ್ನು ಇದುವರೆಗೆ 25 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇದಕ್ಕೆ ನೆಟ್ಟಿಗರು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಕೆಲವು ಟ್ವಿಟ್ಟರ್ ಬಳಕೆದಾರರು ಪರಿಸರ ಸ್ನೇಹಿ ಉತ್ಪನ್ನಗಳ ಬೆಲೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸರ್, ಇವು ಅತ್ಯುತ್ತಮ ಉತ್ಪನ್ನಗಳು ಆದರೆ ದುಬಾರಿ ವ್ಯವಹಾರವಾಗಬಹುದು, ಇದರ ತಯಾರಿಕೆಗೆ ಹೆಚ್ಚು ವೆಚ್ಚ ತಗುಲುವ ಕಾರಣದಿಂದ ಇದನ್ನು ಜನ ಸಾಮಾನ್ಯರು ಬಳಸುವುದು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ರಾಜ್ಯದಲ್ಲಿ ನಿಷೇಧಗೊಂಡಿರುವ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ನಿಲ್ಲಿಸುವ ಸಮಯ ಬಂದಿದೆ. ಪ್ಲಾಸ್ಟಿಕ್ ಬಳಸುವ ಬದಲು ಇಂತಹ ಪರಿಸರ ಸ್ನೇಹಿ ಹಾಗೂ ಸೋರಿಕೆ ರಹಿತವಾದಂತಹ ಉತ್ಪನ್ನಗಳನ್ನು ಬಳಸುವಂತೆ ಹೊಟೇಲ್ಗಳು ರೆಸ್ಟೋರೆಂಟ್ಗಳು ಹಾಗೂ ಆಹಾರೋದ್ಯಮ ಸಂಸ್ಥೆಗಳಿಗೆ ತಮಿಳುನಾಡು ಸರ್ಕಾರದ ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ.
Sperm plastic:ವೀರ್ಯದಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ ಆವಿಷ್ಕಾರ, ವಿಜ್ಞಾನಿಗಳ ಕಾರ್ಯಕ್ಕೆ ಭಾರಿ ಮೆಚ್ಚುಗೆ!
ಸುಪ್ರಿಯಾ ಸಾಹು, 'ಮೀಂಡಂ ಮಂಜಪ್ಪೈ' (Meendum Manjappai) ಯೋಜನೆಗೆ ಉತ್ತೇಜನ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ವಸ್ತುಗಳನ್ನು ಖರೀದಿಸಲು ಜನರು ಮನೆಯಿಂದ ಹೊರ ಹೋಗುವಾಗಲೆಲ್ಲಾ ಪ್ಲಾಸ್ಟಿಕ್ ಬದಲು ಹಳದಿ ಬಣ್ಣದ ಬಟ್ಟೆಯ ಚೀಲವನ್ನು ಕೊಂಡೊಯ್ಯುವಂತೆ 'ಮೀಂಡಂ ಮಂಜಪ್ಪೈ' ಯೋಜನೆ ಉತ್ತೇಜಿಸುತ್ತದೆ. ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ( M K Stalin) ಅವರು ಡಿಸೆಂಬರ್ 24 ರಂದು ಕಲೈವಾನರ್ ಅರಂಗಮ್ನಲ್ಲಿ 'ಮೀಂಡಂ ಮಂಜಪೈ ವಿಜಿಪುನರ್ವು ಇಯಕ್ಕಂ' ಯೋಜನೆಗೆ ಚಾಲನೆ ನೀಡಿದ್ದರು. ತಮಿಳುನಾಡು ರಾಜ್ಯ ಸರ್ಕಾರವು ಜನವರಿ 1, 2019 ರಿಂದಲೇ ಜಾರಿಗೆ ಬರುವಂತೆ ಈಗಾಗಲೇ 14 ಬಗೆಯ ಪ್ಲಾಸ್ಟಿಕ್ಗಳ ಉತ್ಪಾದನೆ, ಬಳಕೆ, ಸಂಗ್ರಹಣೆ, ವಿತರಣೆ, ಸಾಗಣೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರಿದೆ.
ತೆಂಗಿನ ಸಿಪ್ಪೆ, ಗರಟ ಬಿಸಾಡಬೇಡಿ... ಈ ರೀತಿ ಉಪಯೋಗಿಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ