ಅಯೋಧ್ಯೆಯಲ್ಲಿ 1008 ಅಡಿ ಎತ್ತರದ ಚಿನ್ನದ ರಾಮಮಂದಿರ ನಿರ್ಮಾಣ?

By Web DeskFirst Published Dec 3, 2019, 8:00 AM IST
Highlights

ಅಯೋಧ್ಯೆಯಲ್ಲಿ ಬಂಗಾರದ ರಾಮಮಂದಿರಕ್ಕೆ ಪ್ರಸ್ತಾಪ| ವಿಶ್ವದ ಅತಿ ಎತ್ತರದ ದೇಗುಲ ನಿರ್ಮಿಸಲು ಸ್ವಾಮೀಜಿ ಯೋಜನೆ| ವಿಶ್ವದ ಹಿಂದು ಪರಿಷತ್‌ ವಿರೋಧ

 ಲಖನೌ[ಡಿ.03]: ವಿಶ್ವದ ಅತಿ ಎತ್ತರದ ದೇಗುಲವನ್ನು ಕಟ್ಟುವ ಚಿಂತನೆಯೊಂದು ಈಗ ಅಯೋಧ್ಯೆಯಲ್ಲಿ ಮೊಳಕೆಯೊಡೆದಿದೆ. ಸರ್ಕಾರವು ರಾಮಮಂದಿರ ನಿರ್ಮಾಣಕ್ಕೆ ಒದಗಿಸುವ 2.77 ಎಕರೆ ಜಮೀನಿನಲ್ಲಿ ಅಥವಾ ಅಯೋಧ್ಯೆಯ ಅನ್ಯ ಸ್ಥಳದಲ್ಲಿ ಚಿನ್ನದಲ್ಲಿ ವಿಶ್ವದ ಅತಿ ಎತ್ತರದ ದೇಗುಲ ನಿರ್ಮಾಣ ಮಾಡುವ ಚಿಂತನೆಯನ್ನು ರಾಮಾಲಯ ನ್ಯಾಸ ಟ್ರಸ್ಟ್‌ನ ಅಧ್ಯಕ್ಷ ಸ್ವಾಮಿ ಅವಿಮುಕ್ತೇಶ್ವರಾನಂದರು ತೆರೆದಿಟ್ಟಿದ್ದಾರೆ. ಇದು 1008 ಅಡಿ ಎತ್ತರದ ಚಿನ್ನದ ರಾಮ ಮಂದಿರವಾಗಲಿದೆ.

ಭಾನುವಾರ ಮಾತನಾಡಿದ ಅವಿಮುಕ್ತೇಶ್ವರಾನಂದರು, ‘1008 ಅಡಿ ಎತ್ತರದ ಚಿನ್ನದ ರಾಮಮಂದಿರ ನಿರ್ಮಾಣ ಆಗಬೇಕು ಎಂದು ನನ್ನ ಗುರುಗಳಾದ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಗಳು ನಿರ್ಧರಿಸಿದ್ದರು. ಈಗ ಸರ್ಕಾರವು ರಾಮಜನ್ಮಭೂಮಿಯ 2.77 ಎಕರೆ ಜಮೀನನ್ನು ನಮಗೆ ಕೊಟ್ಟರೆ ಅಲ್ಲಿಯೇ ಈ ಮಂದಿರ ಕಟ್ಟುತ್ತೇವೆ. ಇಲ್ಲದಿದ್ದರೆ ಬೇರೆಡೆ ಜಮೀನು ಗುರುತಿಸಿ ಕಟ್ಟುತ್ತೇವೆ’ ಎಂದರು.

ಆದರೆ, ಇದಕ್ಕೆ ಹಣ ಹೇಗೆ ಕ್ರೋಡೀಕರಿಸಲಾಗುತ್ತದೆ ಎಂಬುದನ್ನು ಅವರು ಹೇಳಲಿಲ್ಲ.

ಈಗ 690 ಅಡಿ ಎತ್ತರದ ಹಸನ್‌-2 ಹೆಸರಿನ ಮಸೀದಿ ವಿಶ್ವದ ಅತಿ ಎತ್ತರದ ಧಾರ್ಮಿಕ ಕಟ್ಟಡವಾಗಿದೆ. ಇದು ಮೊರಕ್ಕೋದಲ್ಲಿದೆ. ಇದರ ನಡುವೆಯೇ ಮಥುರಾದ ವೃಂದಾವನದಲ್ಲಿ 700 ಅಡಿ ಎತ್ತರದ ವೃಂದಾವನ ಚಂದ್ರೋದಯ ಮಂದಿರದ ನಿರ್ಮಾಣ ಪ್ರಗತಿಯಲ್ಲಿದೆ.

ವಿಎಚ್‌ಪಿ ವಿರೋಧ:

ರಾಮಾಲಯ ಟ್ರಸ್ಟ್‌ನ ಅವಿಮುಕ್ತೇಶ್ವರಾನಂದರ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್‌ ಹಾಗೂ ಜಗದ್ಗುರು ವಾಸುದೇವಾನಂದ ಸರಸ್ವತಿಗಳು ವಿರೋಧಿಸಿದ್ದಾರೆ.

‘ವಿಎಚ್‌ಪಿ 90ರ ದಶಕದಿಂದ ರಾಮಮಂದಿರದ ಕಲ್ಲು ಕೆತ್ತನೆ ನಡೆಸುತ್ತಿದೆ. ಇಂಥದ್ದರಲ್ಲಿ ಈಗ ಅವಿಮುಕ್ತೇಶ್ವರಾನಂದರು ಚಿನ್ನದ ದೇಗುಲ ನಿರ್ಮಾಣದ ಹೇಳಿಕೆ ನೀಡಿರುವುದು ಸರಿಯಲ್ಲ. ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ವಿಎಚ್‌ಪಿ ಹೇಳಿದೆ.

ವಾಸುದೇವಾನಂದರು ಪ್ರತಿಕ್ರಿಯಿಸಿ, ‘ಸುಪ್ರೀಂ ಕೋರ್ಟ್‌ ತೀರ್ಪಿನ ಅನುಸಾರ ಕೇಂದ್ರ ಸರ್ಕಾರ ಟ್ರಸ್ಟ್‌ ರಚಿಸಲಿದೆ. ಈ ಟ್ರಸ್ಟುರಾಮಮಂದಿರ ನಿರ್ಮಿಸುತ್ತದೆ. ರಾಮಾಲಯ ಟ್ರಸ್ಟ್‌ ಖಾಸಗಿ ಸಂಸ್ಥೆಯಾಗಿದ್ದು, ಇದು ಇಡೀ ಹಿಂದೂ ಸಮಾಜದ ಪ್ರತಿನಿಧಿ ಅಲ್ಲ’ ಎಂದಿದ್ದಾರೆ.

click me!