ಆಪ್ ನಾಯಕ ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರ ನಡುವೆ ಆಮ್ ಆದ್ಮಿ ಪಾರ್ಟಿ ಹೊಸ ಭವಿಷ್ಯ ನುಡಿದಿದೆ. ಸಿಸೋಡಿಯಾರನ್ನು ಇಡಿ ಬಂಧಿಸಲಿದೆ ಎಂದು ಆಪ್ ಹೇಳಿದೆ. ಇದು ತಿಹಾರ್ ಜೈಲಿನಲ್ಲಿರುವ ಸ್ವತಃ ಮನೀಶ್ ಸಿಸೋಡಿಯಾಗೆ ಭೀತಿ ಹುಟ್ಟಿಸಿದೆ.
ನವದೆಹಲಿ(ಮಾ.09): ಅಬಕಾರಿ ನೀತಿ ಅಕ್ರಮದಲ್ಲಿ ಜೈಲುಪಾಲಾಗಿರುವ ದೆಹಲಿ ಮಾಜಿ ಮುಖ್ಯಮಂತ್ರಿ, ಆಪ್ ನಾಯಕ ಮನೀಶ್ ಸಿಸೋಡಿಯಾ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾರ್ಚ್ 20ರ ವರೆಗೆ ಸಿಸೋಡಿಯಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತ್ತ ಶುಕ್ರವಾರ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇದರ ನಡುವೆ ಆಮ್ ಆದ್ಮಿ ಪಾರ್ಟಿ ಒಂದರ ಮೇಲೊಂದರಂತೆ ಭವಿಷ್ಯ ನುಡಿಯುತ್ತಿದೆ. ಇತ್ತೀಚೆಗೆ ಸಿಸೋಡಿಯಾ ಹತ್ಯೆಗೆ ಬಿಜೆಪಿ ಪ್ಲಾನ್ ಮಾಡಿದೆ ಎಂಬ ಹೇಳಿಕೆ ನೀಡಿತ್ತು. ಇದೀಗ ಮನೀಶ್ ಸಿಸೋಡಿಯಾರನ್ನು ಇಡಿ ಅಧಿಕಾರಿಗಳು ಬಂಧಿಸಲಿದ್ದಾರೆ ಎಂದು ಭವಿಷ್ಯ ನುಡಿದಿದೆ.
ಅಬಕಾರಿ ಅಕ್ರಮ ಕುರಿತು ಸಿಬಿಐ ಅಧಿಕಾರಿಗಳು ಸತತ ವಿಚಾರಣೆ ನಡೆಸಿ ಮನೀಶ್ ಸಿಸೋಡಿಯಾರನ್ನು ಬಂಧಿಸಿತ್ತು. ಫೆಬ್ರವರಿ 26 ರಂದು ಸಿಸೋಡಿಯಾರನ್ನು ಬಂಧಿಸಲಾಗಿತ್ತು. ಇದೀಗ ಆಮ್ ಆದ್ಮಿ ಪ್ರಕಾರ, ಮನೀಶ್ ಸಿಸೋಡಿಯಾಗೆ ಜಾಮೀನು ಸಿಕ್ಕರೂ ಇಡಿ ಅಧಿಕಾರಿಗಳು ಬಂಧಿಸಿ ಮತ್ತೆ ಜೈಲಿಗೆ ತಳ್ಳಲಿದ್ದಾರೆ ಎಂದಿದೆ. ಮನೀಶ್ ಸಿಸೋಡಿಯಾರನ್ನು ಜೈಲಿನಲ್ಲಿ ಎರಡನೇ ಬಾರಿಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ ಭವಿಷ್ಯ ನುಡಿದಿದೆ.
ಜೈಲಿನಲ್ಲೂ ಮನೀಶ್ ಸಿಸೋಡಿಯಾಗೆ ನೆಮ್ಮದಿ ಇಲ್ಲ, ಸತತ 5 ಗಂಟೆ ಇಡಿ ವಿಚಾರಣೆ!
ಅಬಕಾರಿ ನೀತಿ ಅಕ್ರಮದಲ್ಲಿನ ಅಕ್ರಮ ಹಣ ವರ್ಗಾವಣೆ ಕುರಿತು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತಿಹಾರ್ ಜೈಲಿಗೆ ತೆರಳಿ ಒಟ್ಟು 2 ಬಾರಿ ಮನೀಶ್ ಸಿಸೋಡಿಯಾ ವಿಚಾರಣೆ ನಡೆಸಿದ್ದಾರೆ. ಇಂದು 45 ನಿಮಿಷಗಳ ಕಾಲ ವಿಚಾರಣೆ ನಡೆಸಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ, ಬಂಧನದ ಭವಿಷ್ಯ ನುಡಿದಿದೆ.
ಮನೀಶ್ ಸಿಸೋಡಿಯಾ ಅವರನ್ನು ಕುಖ್ಯಾತ ಕ್ರಿಮಿನಲ್ಗಳ ಜತೆ ತಿಹಾರ್ ಜೈಲಿನಲ್ಲಿ ಇರಿಸಲಾಗಿದ್ದು, ಅವರ ಪ್ರಾಣಕ್ಕೆ ಅಪಾಯವಿದೆ. ಅಲ್ಲಿ ಅವರ ಹತ್ಯೆಗೆ ಯತ್ನ ನಡೆಯಬಹುದು ಎಂದು ಆಮ್ ಆದ್ಮಿ ಪಕ್ಷ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ, ಸಿಸೋಡಿಯಾ ಅವರಿಗೆ ‘ವಿಪಶ್ಶನ ಸೆಲ್’ ಅನ್ನೂ ತಿರಸ್ಕರಿಸಲಾಗಿದೆ ಎಂದು ದೂರಿದೆ.ಆದರೆ ಆಪ್ ಆರೋಪನ್ನು ಜೈಲು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.
ಮನೀಶ್ ಸಿಸೋಡಿಯಾಗೆ ತಿಹಾರ್ ಜೈಲೇ ಗತಿ, ಜಾಮೀನು ಅರ್ಜಿ ವಿಚಾರಣೆ ಮಾ.10ಕ್ಕೆ ಮುಂದೂಡಿಕೆ!
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಆಪ್ ರಾಷ್ಟ್ರೀಯ ವಕ್ತಾರ ಸೌರಭ್ ಭಾರದ್ವಾಜ್, ‘ಸಿಸೋಡಿಯಾ ಅವರನ್ನು ವಿಪಶ್ಶನ ಧ್ಯಾನಕ್ಕಾಗಿ ವಿಪಶ್ಶನ ಸೆಲ್ನಲ್ಲಿ ಇರಿಸಲು ದಿಲ್ಲಿ ಕೋರ್ಚ್ ಅನುಮತಿ ನೀಡಿದೆ. ಆದರೆ ಅಲ್ಲಿ ಅವರನ್ನು ಇರಿಸದೇ ಕೋರ್ಚ್ ಆದೇಶ ಉಲ್ಲಂಘಿಸಲಾಗಿದೆ. ಇದರ ಬದಲು ಕ್ರಿಮಿನಲ್ಗಳು ಇರುವ ಜೈಲ್ ನಂ.1ನಲ್ಲಿ ಇರಿಸಲಾಗಿದೆ’ ಎಂದು ಕಿಡಿಕಾರಿದರು.ಆಪ್ ಸಂಸದ ಸಂಜಯ್ ಸಿಂಗ್ ಮಾತನಾಡಿ, ‘ಕ್ರಿಮಿನಲ್ಗಳು ಇರುವ ಕಡೆ ಸಿಸೋಡಿಯಾ ಇರುವ ಕಾರಣ ಅವರ ಹತ್ಯೆಯ ಭೀತಿಯೂ ಇದೆ’ ಎಂದರು.