
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಎದುರು ಫೆ.17ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
5 ಬಾರಿ ಸಮನ್ಸ್ ಜಾರಿ ಮಾಡಿದರೂ ಕೇಜ್ರಿವಾಲ್ ವಿಚಾರಣೆಗೆ ಸಹಕರಿಸುತ್ತಿಲ್ಲಎಂದು ಇ.ಡಿ. ಕೋರ್ಟ್ಗೆ ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶೆ ದಿವ್ಯಾ ಮಲ್ಹೋತ್ರಾ ಈ ಆದೇಶ ನೀಡಿದ್ದಾರೆ. ವಿಚಾರಣೆಗೆ ಗೈರಾಗಿ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಕೇಜ್ರಿವಾಲ್ ವಿರುದ್ಧ ಫೆ.3ರಂದು ಇ.ಡಿ. ಹೊಸ ಪ್ರಕರಣ ದಾಖಲಿಸಿತ್ತು.ಇನ್ನು ಕೋರ್ಟ್ ಆದೇಶದ ಬಳಿಕ ಪ್ರತಿಕ್ರಿಯಿಸಿರುವ ಆಪ್, ನ್ಯಾಯಾಲಯದ ಆದೇಶ ಅಧ್ಯಯನ ಮಾಡಿ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.
ಲಂಚದ ಹಣ ಆಪ್ ಚುನಾವಣಾ ಪ್ರಚಾರಕ್ಕೆ ಬಳಕೆ:ಇ.ಡಿ
ಜಲ ಮಂಡಳಿ ಟೆಂಡರ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಪಡೆದುಕೊಂಡಿರುವ ಲಂಚದ ಹಣವನ್ನು ಚುನಾವಣಾ ಪ್ರಚಾರಕ್ಕೆ ಆಪ್ ಬಳಸಿಕೊಂಡಿದೆ ಎಂದು ಇ.ಡಿ ಬುಧವಾರ ಆರೋಪಿಸಿದೆ.
ಕೇಜ್ರಿ ಆಪ್ತರ ಮನೆ ಮೇಲೆ ದಾಳಿ
ಕೆಲ ದಿನಗಳ ಹಿಂದೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಹಾಗೂ ಇತರ ವ್ಯಕ್ತಿಗಳ ಮನೆ ಮೇಲೆ ಮಂಗಳವಾರ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ದೆಹಲಿ ಜಲ ಮಂಡಳಿಯ ಟೆಂಡರ್ ನೀಡುವಾಗ ಅಕ್ರಮ ಎಸಗಲಾಗಿದ್ದು, ಇದರಿಂದ ಪಕ್ಷಕ್ಕೆ ಚುನಾವಣಾ ದೇಣಿಗೆ ಸಂಗ್ರಹಿಸಲಾಗಿದೆ ಎಂಬ ಪ್ರಕರಣವನ್ನು ಇ.ಡಿ. ತನಿಖೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಲಂಚ ಪಡೆಯಲಾಗಿದೆ ಎಂಬ ಆರೋಪದ ಮೇಲೆ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಬವ್ ಕುಮಾರ್ ಹಾಗೂ ಪಕ್ಷಕ್ಕೆ ಸಂಬಂಧಿಸಿದ ಇತರರ ಆಸ್ತಿಗಳ ಶೋಧ ಕಾರ್ಯ ನಡೆಸಲಾಗಿದೆ. ರಾಷ್ಟ್ರರಾಜಧಾನಿ ವಲಯದಲ್ಲಿನ 10 ರಿಂದ 12 ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗಿದೆ. ಡಿಜೆಬಿ ಸದಸ್ಯ ಶಲಬ್ ಕುಮಾರ್, ರಾಜ್ಯಸಭಾ ಸದಸ್ಯ ಎನ್.ಡಿ.ಗುಪ್ತಾ, ಚಾರ್ಟೆಡ್ ಅಕೌಂಟೆಂಟ್ ಪಂಕಜ್ ಮಂಗಲ್ ಸೇರಿದಂತೆ ಹಲವರ ಮನೆಗಳಲ್ಲಿ ಮುಂಜಾನೆ 7 ಗಂಟೆಯಿಂದಲೇ ಶೋಧ ನಡೆಸಲಾಗಿದೆ. ಈ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರುವ ಆಪ್ ಸಚಿವೆ ಅತಿಶಿ, ಆಪ್ ನಾಯಕರನ್ನು ಹೆದರಿಸಲು ಈ ದಾಳಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ದೂರಿದ್ದರು. ಕೇಜ್ರವಾಲ್ ಆಪ್ತರ ಮನೆ ಮೇಲೆ ನಡೆದ ಇ.ಡಿ. ದಾಳಿ ವೇಳೆ 1.97 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ