
ಚೆನ್ನೈ: ‘ತಮಿಳುನಾಡಿನಲ್ಲಿ ಹೆಣ್ಣುಮಕ್ಕಳಿಗೆ ಓದಲು ಪ್ರೋತ್ಸಾಹಿಸುತ್ತಾರೆ. ಆದರೆ ಉತ್ತರ ಭಾರತದಲ್ಲಿ ಅವರಿಗೆ ಮನೆಗೆಲಸ ಮಾಡಿಕೊಂಡಿದ್ದು ಮಕ್ಕಳನ್ನು ಹೆರಲು ಹೇಳುತ್ತಾರೆ’ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಹೇಳಿದ್ದಾರೆ. ಇದು ಮತ್ತೆ ಉತ್ತರ-ದಕ್ಷಿಣ ಸಂಘರ್ಷಕ್ಕೆ ನಾಂದಿ ಹಾಡಿದೆ,
ಹಿಂದು ವಿರೋಧಿ ಹೇಳಿಕೆಗಳಿಂದಲೇ ಸುದ್ದಿಯಾಗುವ ಡಿಸಿಎಂ ಉದಯನಿಧಿ ಸ್ಟಾಲಿನ್ ಅವರೂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾರನ್, ‘ಸ್ಟಾಲಿನ್ ಸರ್ಕಾರವು ಡ್ರಾವಿಡ ಮಾದರಿಯದ್ದಾಗಿದ್ದು, ಎಲ್ಲರಿಗೂ ಎಲ್ಲಾ ಎಂಬ ಕಲ್ಪನೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. ತಮಿಳುನಾಡಿನ ಹುಡುಗ, ಹುಡುಗಿಯರಿಗೆ ಸರ್ಕಾರದ ಕಡೆಯಿಂದ ಲ್ಯಾಪ್ಟಾಪ್ ನೀಡಿ, ಅವರು ಉನ್ನತ ಶಿಕ್ಷಣ ಮಾಡಲಿ ಅಥವಾ ಸಂದರ್ಶನವನ್ನು ಎದುರಿಸಲಿ ಎಂದು ಬಯಸುತ್ತೇವೆ. ಆದರೆ ಉತ್ತರದಲ್ಲಿ ಹೆಣ್ಣುಮಕ್ಕಳನ್ನು ಅಡುಗೆಮನೆ ಕೆಲಸ ಮತ್ತು ಮಕ್ಕಳನ್ನು ಹೆರುವುದಕ್ಕೆ ಸೀಮಿತವಾಗಿರಿಸಲಾಗಿದೆ’ ಎಂದರು.
ಜತೆಗೆ, ‘ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಕೊಡುವ ಬದಲು ಬರೀ ಹಿಂದಿಯಲ್ಲಿ ವಿದ್ಯಾಭ್ಯಾಸ ಮಾಡಿದರೆ ಅವರ ಭವಿಷ್ಯ ಹಾಳಾಗುತ್ತದೆ. ಅಂಥವರನ್ನು ಜೀತದಾಳಿನಂತೆ ನಡೆಸಿಕೊಳ್ಳಲಾಗುತ್ತದೆ. ಇದರಿಂದ ನಿರುದ್ಯೋಗವೂ ಹೆಚ್ಚುತ್ತದೆ. ಆದರೆ ಇಂಗ್ಲಿಷ್ ಶಿಕ್ಷಣವನ್ನು ಪ್ರೋತ್ಸಾಹಿಸುವ ತಮಿಳುನಾಡಿಗೆ ಜಾಗತಿಕ ಕಂಪನಿಗಳು ಬರುತ್ತಿವೆ’ ಎಂದರು. ಈ ಮೂಲಕ ಹಿಂದಿ ಹೇರಿಕೆಯನ್ನೂ ಪರೋಕ್ಷವಾಗಿ ಪ್ರಸ್ತಾಪಿಸಿದರು.ಬಿಜೆಪಿ ಕಿಡಿ:
ಮಾರನ್ರ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ನಾರಾಯಣನ್ ತಿರುಪತಿ, ‘ದಯಾನಿಧಿಗೆ ಸಾಮಾನ್ಯ ಜ್ಞಾನವಿಲ್ಲ. ಅವರು ಸಾರ್ವಜನಿಕವಾಗಿ ದೇಶದ ಜನತೆಗೆ, ಅದರಲ್ಲೂ ವಿಶೇಷವಾಗಿ ಅಶಿಕ್ಷಿತ ಮತ್ತು ಅನಾಗರಿಕ ಎಂದು ಅವರಿಂದ ಕರೆಯಲ್ಪಟ್ಟ ಹಿಂದಿ ಭಾಷಿಕರ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ