ಒಡಿಶಾ, ಬಂಗಾಳಕ್ಕೆ 'ಯಾಸ್': ಚಂಡಮಾರುತ ಸ್ವರೂಪ ಪಡೆದ ವಾಯುಭಾರ ಕುಸಿತ!

By Kannadaprabha NewsFirst Published May 25, 2021, 9:24 AM IST
Highlights

* ನಾಳೆ ಮಧ್ಯಾಹ್ನ ‘ಯಾಸ್‌’ ದಾಳಿ

* ಚಂಡಮಾರುತ ಸ್ವರೂಪ ಪಡೆದ ವಾಯುಭಾರ ಕುಸಿತ

* 24 ತಾಸಲ್ಲಿ ಮತ್ತಷ್ಟು ವೇಗ

* ಸಿದ್ಧತೆ ಪರಿಶೀಲಿಸಿದ ಅಮಿತ್‌ ಶಾ

* ಸೇನೆಗಳ ವಿಮಾನ, ನೌಕೆ, ಕಾಪ್ಟರ್‌ ಸನ್ನದ್ಧ ಸ್ಥಿತಿ

* ಚಂಡಮಾರುತದಿಂದ ದೇಶದ ವಿವಿಧ ಭಾಗಗಳಿಗೆ ಆಮ್ಲಜನಕ ಪೂರೈಕೆ ವ್ಯತ್ಯಯ?

ನವದೆಹಲಿ(ಮೇ.25): ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ ‘ಯಾಸ್‌’ ಚಂಡಮಾರುತದ ಸ್ವರೂಪ ಪಡೆದುಕೊಂಡಿದೆ. ಮುಂದಿನ 24 ತಾಸುಗಳಲ್ಲಿ ಇನ್ನಷ್ಟುಶಕ್ತಿ ವೃದ್ಧಿಸಿಕೊಳ್ಳುವ ಈ ಮಾರುತ, ಬುಧವಾರ ಮಧ್ಯಾಹ್ನ ಪಶ್ಚಿಮ ಬಂಗಾಳ- ಒಡಿಶಾ ಕರಾವಳಿಗೆ ಗಂಟೆಗೆ 185 ಕಿ.ಮೀ. ವೇಗದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಹಾಗೂ ಒಡಿಶಾ ಕರಾವಳಿಯಲ್ಲಿ ಅಪಾಯದಂಚಿನಲ್ಲಿರುವ ಜನರ ಸ್ಥಳಾಂತರಕ್ಕೆ ಒತ್ತು ನೀಡಲಾಗುತ್ತಿದೆ. ಸೇನಾ ಪಡೆಗಳು ಕಟ್ಟೆಚ್ಚರದಿಂದ ಇದ್ದು, ನೌಕಾಪಡೆ ನಾಲ್ಕು ಯುದ್ಧ ನೌಕೆಗಳನ್ನು ನಿಯೋಜಿಸಿದೆ. ವಾಯುಪಡೆ 11 ಸಾಗಣೆ ವಿಮಾನ ಹಾಗೂ 25 ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ.

ರಾಜ್ಯಕ್ಕಿದೆಯಾದ ‘ಯಾಸ್‌’ಚಂಡಮಾರುತ : ಹವಾಮಾನ ಇಲಾಖೆ ಸ್ಪಷ್ಟನೆ

ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಹಾಗೂ ಅಂಡಮಾನ್‌- ನಿಕೋಬಾರ್‌ ಉಪರಾಜ್ಯಪಾಲರ ಜತೆ ವಿಡಿಯೋ ಸಂವಾದ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. ಚಂಡಮಾರುತ ಸಲುವಾಗಿ ಕೇಂದ್ರ ಗೃಹ ಇಲಾಖೆಯಲ್ಲಿ ದಿನ ಇಪ್ಪತ್ನಾಲ್ಕೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ರಾಜ್ಯ ಸರ್ಕಾರಗಳು ಸಹಾಯಕ್ಕೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಕರೆ ಮಾಡಬಹುದಾಗಿದೆ ಎಂದಿದ್ದಾರೆ.

ಚಂಡಮಾರುತ ವೇಳೆ ಕೋವಿಡ್‌ ಆಸ್ಪತ್ರೆ, ಲ್ಯಾಬ್‌, ವ್ಯಾಕ್ಸಿನ್‌ ಕೋಲ್ಡ್‌ ಚೈನ್‌ ಹಾಗೂ ಇನ್ನಿತರೆ ವೈದ್ಯಕೀಯ ಘಟಕಗಳಿಗೆ ವಿದ್ಯುತ್‌ ಸರಬರಾಜಾಗುವಂತೆ ನೋಡಿಕೊಳ್ಳಬೇಕು. ಸಾಕಷ್ಟುಆಕ್ಸಿಜನ್‌ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.

ಸಿಎಂಗಳಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಮಹತ್ವದ ಸೂಚನೆ..!

ಆಕ್ಸಿಜನ್‌ ಸರಬರಾಜು ವ್ಯತ್ಯಯ?:

ಕೊರೋನಾ ರೋಗಿಗಳಿಗೆ ವೈದ್ಯಕೀಯ ಆಕ್ಸಿಜನ್‌ ಉತ್ಪಾದಿಸಿ, ದೇಶದ ವಿವಿಧ ಭಾಗಗಳಿಗೆ ಪೂರೈಸುತ್ತಿರುವ ಘಟಕಗಳು ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿವೆ. ಚಂಡಮಾರುತದ ಸಂದರ್ಭದಲ್ಲಿ ಉತ್ಪಾದನೆಗೆ ತೊಡಕಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಚಂಡಮಾರುತ ಸಂದರ್ಭದಲ್ಲೂ ಈ ಘಟಕಗಳಲ್ಲಿ ಉತ್ಪಾದನೆ ನಿಲ್ಲದಂತೆ ನೋಡಿಕೊಳ್ಳಲು ತನ್ನ ರಕ್ಷಣಾ ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ.

click me!