
ಕೋಲ್ಕತಾ(ಮೇ.10): ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಆಸಾನಿ’ ಚಂಡಮಾರುತದ ಪ್ರಭಾವದಿಂದಾಗಿ ದೇಶದ ಪೂರ್ವ ಕರಾವಳಿಯಲ್ಲಿ ಗರಿಷ್ಠ 120 ಕಿ.ಮೀ. ವೇಗದ ಗಾಳಿ ಬೀಸುವ ಹಾಗೂ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಪಾಯದಂಚಿನಲ್ಲಿರುವ ತನ್ನ ಕರಾವಳಿಯ 4 ಜಿಲ್ಲೆಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಒಡಿಶಾ ಸರ್ಕಾರ ಸಿದ್ಧತೆ ಆರಂಭಿಸಿದೆ.
ಸದ್ಯ ಆಸಾನಿ (ಸಿಂಹಳಿ ಭಾಷೆಯಲ್ಲಿ ಕ್ರೋಧ ಎಂದರ್ಥ) ವಿಶಾಖಪಟ್ಟಣದಿಂದ 550 ಕಿ.ಮೀ. ಹಾಗೂ ಪುರಿಯಿಂದ 680 ಕಿ.ಮೀ. ದೂರದಲ್ಲಿದೆ. ಗಂಟೆಗೆ 25 ಕಿ.ಮೀ. ವೇಗದಲ್ಲಿ ಕರಾವಳಿಯತ್ತ ಬರುತ್ತಿದೆ. ಈ ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾದ ಎಲ್ಲ ಬಂದರುಗಳಲ್ಲಿ ‘ಸಿಗ್ನಲ್ 2’ ಘೋಷಣೆ ಮಾಡಲಾಗಿದೆ. ಅಂದರೆ ಯಾವುದೇ ಹಡಗು ತೀರದತ್ತ ಬರಕೂಡದು ಎಂಬ ಸಂದೇಶ ರವಾನಿಸಲಾಗಿದೆ.
ಮಂಗಳವಾರ ಚಂಡಮಾರುತ ಮತ್ತಷ್ಟುಬಿರುಸು ಪಡೆದುಕೊಳ್ಳಲಿದ್ದು, ಕರಾವಳಿಯ ಬದಲಿಗೆ ವಾಪಸ್ ಬಂಗಾಳ ಕೊಲ್ಲಿಯತ್ತ ನುಗ್ಗಿ, ಬಳಿಕ ದುರ್ಬಲಗೊಳ್ಳಲಿದೆ. ಹೀಗಾಗಿ ಒಡಿಶಾ ಅಥವಾ ಆಂಧ್ರಪ್ರದೇಶಕ್ಕೆ ಲಗ್ಗೆ ಇಡುವುದಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಕರಾವಳಿಯ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳದ ಬಳಿಯೇ ಹಾದು ಹೋಗುವ ಕಾರಣ ಈ ಚಂಡಮಾರುತದಿಂದಾಗಿ ಈ ರಾಜ್ಯಗಳಲ್ಲಿ ಮಂಗಳವಾರ ಸಂಜೆಯಿಂದ ಧಾರಾಕಾರ ಮಳೆಯಾಗುವ ನಿರೀಕ್ಷೆ ಇದೆ. 7ರಿಂದ 11 ಸೆಂ.ಮೀ.ವರೆಗೂ ಮಳೆ ಸುರಿಯುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಕೆಲವು ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ