
ನವದೆಹಲಿ(ಮಾ.19): ಈ ವರ್ಷ ಬೇಸಿಗೆ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ತನ್ನ ನಿಜ ಬಣ್ಣ ತೋರಿಸಲಾರಂಭಿಸಿದೆ. ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ತಾಪಮಾನ ಈಗಾಗಲೇ 40 ಡಿಗ್ರಿ ದಾಟಿದೆ. ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮುಂಬರುವ ವಾರದಲ್ಲಿ ದೇಶದ ಹಲವೆಡೆ ಸೆಕೆ ಮತ್ತಷ್ಟು ಹೆಚ್ಚಾಗಲಿದೆ. ಏತನ್ಮಧ್ಯೆ, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಶೀಘ್ರದಲ್ಲೇ 'ಅಸಾನಿ' ಚಂಡಮಾರುತವಾಗಿ ಬದಲಾಗಲಿದೆ. ಇದರಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಳೆ ಆರಂಭವಾಗಿದೆ.
ಪಶ್ಚಿಮ ರಾಜಸ್ಥಾನದ ಬಹುತೇಕ ಭಾಗಗಳಲ್ಲಿ ತಾಪಮಾನ ಭಾರೀ ಹೆಚ್ಳವಾಗಿದೆ. ಇದಲ್ಲದೆ, ಸೌರಾಷ್ಟ್ರ-ಕಚ್, ವಿದರ್ಭ ಮತ್ತು ಗುಜರಾತ್ನ ಕೆಲವು ಭಾಗಗಳಲ್ಲಿ ಬಿಸಿ ಗಾಳಿ ಈಗಾಗಲೇ ಜನರಿಗೆ ಆತಂಕ ಉಂಟು ಮಾಡಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4.5⁰C ಹೆಚ್ಚಾಗಿದೆ. ಪಂಜಾಬ್, ಹರಿಯಾಣ-ಚಂಡೀಗಢ-ದೆಹಲಿ, ಪಶ್ಚಿಮ ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಸೌರಾಷ್ಟ್ರ ಮತ್ತು ಕಚ್ ಮತ್ತು ವಿದರ್ಭದಲ್ಲೂ ಸೆಕೆ ಹೆಚ್ಚಾಗಿದೆ.
ಈ ರಾಜ್ಯಗಳಲ್ಲಿ ಮಳೆ
ಸ್ಕೈಮೆಟ್ ಹವಾಮಾನ ವರದಿ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಬಹುದು. ಅಂಡಮಾನ್ ಮತ್ತು ನಿಕೋಬಾರ್ ಕರಾವಳಿಯ ಸಮುದ್ರದಲ್ಲಿ ಹೆಚ್ಚಿನ ಅಲೆಗಳು ಉಂಟಾಗಬಹುದು ಮತ್ತು ಗಾಳಿಯ ವೇಗ ಗಂಟೆಗೆ 50 ರಿಂದ 60 ಕಿ.ಮೀ ವೇಗವಾಗಿರಬಹುದೆನ್ನಲಾಗಿದೆ. ಮಾರ್ಚ್ 20 ಮತ್ತು 21ರಂದು ಮಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಹಿಮ ಬೀಳಬಹುದು. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಾಗಬಹುದು.
ಅಸಾನಿ ಚಂಡಮಾರುತ
ಏತನ್ಮಧ್ಯೆ, ವರ್ಷದ ಮೊದಲ ಚಂಡಮಾರುತ, ಅಸಾನಿ, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಹುಟ್ಟುಕೊಂಡಿದೆ ಮತ್ತು ಶುಕ್ರವಾರದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯ ನಿರೀಕ್ಷೆಯಿದೆ, ಆದಾಗ್ಯೂ ಪೂರ್ವ ಕರಾವಳಿ ಪ್ರದೇಶಗಳಲ್ಲಿ ಮಳೆ ಇರುವುದಿಲ್ಲ. ಇಂದು ಈ ಚಂಡಮಾರುತವು ಪೂರ್ವ-ಈಶಾನ್ಯಕ್ಕೆ ಚಲಿಸುತ್ತದೆ ಮತ್ತು ನಂತರ ಉತ್ತರಕ್ಕೆ ಚಲಿಸುತ್ತದೆ ಮತ್ತು ಮಾರ್ಚ್ 20 ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಲುಪುತ್ತದೆ.
7 ಜಿಲ್ಲೆಗಳಲ್ಲಿ ದಿಢೀರ್ ಮಳೆಯ ಅಬ್ಬರ!
ಬಿಸಿಲ ಧಗೆ ಏರುತ್ತಿರುವ ನಡುವೆಯೇ ಉತ್ತರ ಕನ್ನಡ ಸೇರಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಶುಕ್ರವಾರ ಕೆಲಗಂಟೆಗಳ ಕಾಲ ದಿಢೀರ್ ಉತ್ತಮ ಮಳೆಯಾಗಿದೆ. ಮಳೆ-ಗಾಳಿ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರಾ ಗದ್ದುಗೆ ಮಂಟಪಕ್ಕೆ ಹಾನಿಯಾಗಿದ್ದಲ್ಲದೆ, ಮನೋರಂಜನೆಗೆಂದು ಹಾಕಲಾಗಿದ್ದ ಜೈಂಟ್ ವ್ಹೀಲ್ನ ಐದು ತೊಟ್ಟಿಲು ಕುಸಿದು ಬಿದ್ದಿದೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಲಿನ ಝಳ ಏರುತ್ತಲೇ ಇದ್ದು, ಇದರ ನಡುವೆಯೇ ಉತ್ತರ ಕನ್ನಡ, ಹಾವೇರಿ, ಗದಗ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು ಅರ್ಧಗಂಟೆಯಿಂದ ಒಂದು ಗಂಟೆಗಳ ಕಾಲ ಉತ್ತಮ ಮಳೆ ಸುರಿದಿದೆ. ಕಾಫಿ ಬೆಳೆಯುವ ಪ್ರದೇಶದಲ್ಲಿ ಮಳೆಯಾದ ಬಗ್ಗೆ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಮಾರಿಕಾಂಬಾ ಜಾತ್ರೆಗೆ ಅಡ್ಡಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಸಂಜೆ ವೇಳೆಗೆ ಸುಮಾರು ಒಂದರಿಂದ ಒಂದೂವರೆ ಗಂಟೆಗಳ ಕಾಲ ಭಾರೀ ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಸಿದ್ದಾಪುರದಲ್ಲಿ ಮನೆ ಮೇಲೆ ತೆಂಗಿನಮರವೊಂದು ಬಿದ್ದು, ನಾಲ್ವರಿಗೆ ಗಾಯಗಳಾಗಿದೆ. ಮಳೆ-ಗಾಳಿಯಿಂದಾಗಿ ಶಿರಸಿಯಲ್ಲಿ ಮಾರಿಕಾಂಬಾದೇವಿ ದೇವಸ್ಥಾನದ ಬಿಡ್ಕಿಬೈಲಿನಲ್ಲಿ ಜಾತ್ರಾ ಗದ್ದುಗೆಗಾಗಿ ನಿರ್ಮಿಸಿದ್ದ ಮಂಟಪಕ್ಕೆ ಹಾನಿಯಾಗಿದೆ. ಸಂಜೆ ಸುಮಾರು 6 ಗಂಟೆ ವೇಳೆ ದಿಢೀರ್ ಬಿರುಗಾಳಿ ಬೀಸಿದೆ. ಇದರಿಂದಾಗಿ ಜಾತ್ರಾ ಮಂಟಪದ ಮೇಲ್ಭಾಗ ಕುಸಿದಿದೆ. ಭಾರೀ ಗಾಳಿಗೆ ಅಂಗಡಿ ಮುಂಗಟ್ಟುಗಳ ಮುಂದೆ ಕಟ್ಟಿದ್ದ ಟಾರ್ಪಲ್ ಹಾರಿ ಹೋದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ತಪ್ಪಿದ ದುರಂತ: ಜಾತ್ರೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನೋರಂಜನೆಗಾಗಿ ಅಳವಡಿಸಲಾಗಿದ್ದ ಜೈಂಟ್ ವ್ಹೀಲ್ಗೂ ಗಾಳಿ-ಮಳೆಯಿಂದಾಗಿ ಹಾನಿಯಾಗಿದೆ. ಗಾಳಿಯಬ್ಬರಕ್ಕೆ ಸುಮಾರು 5 ತೊಟ್ಟಿಲು ಕಳಚಿ ಕೆಳ ಬಿದ್ದಿದೆ. ಗಾಳಿ ಜೋರಾಗುತ್ತಿದ್ದಂತೆ ಅಧಿಕಾರಿಗಳು ಜಾಯಿಂಟ್ ವ್ಹೀಲ್ ಅನ್ನು ತಕ್ಷಣ ಸ್ಥಗಿತಗೊಳಿಸಿ ಜನರನ್ನು ಸ್ಥಳದಿಂದ ಹೊರ ಕಳುಹಿಸಿದ ಹಿನ್ನೆಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ