ದಿಲ್ಲಿಯಲ್ಲಿ ಸೋಂಕು ಇಳಿಕೆ: ಕರ್ನಾಟಕಕ್ಕೂ ಆಶಾಕಿರಣ!

By Kannadaprabha NewsFirst Published Jul 21, 2020, 7:59 AM IST
Highlights

ರಾಷ್ಟ್ರ ರಾಜಧಾನಿಯಲ್ಲಿ ಸೋಂಕು ಇಳಿಮುಖ ಸೂಚನೆ| ರಾಜಧಾನಿಯಲ್ಲಿ ಸೋಂಕು ಗರಿಷ್ಠ ಮಟ್ಟ ಮುಟ್ಟಿರುವ ಸೂಚನೆ ಇರಬಹುದು| ಕೊರೋನಾ ನಿಯಂತ್ರಣಕ್ಕೆ ಬರುವುದರ ಸೂಚಕ

ನವದೆಹಲಿ(ಜು.21): ಬಹುತೇಕ ರಾಜ್ಯಗಳಲ್ಲಿ ಕೊರೋನಾ ಸೋಂಕು ದಿನೇ ದಿನೇ ಏರುಗತಿಯಲ್ಲಿರುವಾಗಲೇ, ರಾಜಧಾನಿ ದೆಹಲಿಯಿಂದ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ನಿರಂತರವಾಗಿ ಸೋಂಕು ಇಳಿಮುಖವಾಗುತ್ತಿದ್ದು, ಇದು ರಾಜಧಾನಿಯಲ್ಲಿ ಸೋಂಕು ಗರಿಷ್ಠ ಮಟ್ಟಮುಟ್ಟಿರುವ ಸೂಚನೆ ಇರಬಹುದು ಎಂದು ದೆಹಲಿ ಏಮ್ಸ್‌ನ ನಿರ್ದೇಶಕ ರಣದೀಪ್‌ ಗುಲೇರಿಯಾ ಹೇಳಿದ್ದಾರೆ. ನಿರಂತರವಾಗಿ ಏರಿ ಗರಿಷ್ಠ ಮಟ್ಟಮುಟ್ಟಿದ ಬಳಿಕ ಸೋಂಕು ಮತ್ತು ಸಾವು ನಿರಂತರವಾಗಿ ಇಳಿಮುಖವಾಗುವುದು, ಕೊರೋನಾ ನಿಯಂತ್ರಣಕ್ಕೆ ಬರುವುದರ ಸೂಚಕವಾಗಿದೆ.

ದೆಹಲಿಯ ಈ ಬೆಳವಣಿಗೆ, ಸಹಜವಾಗಿಯೇ ಕಳೆದ ಕೆಲದಿನಗಳಿಂದ ಅತಿ ಹೆಚ್ಚು ಕೇಸು ದಾಖಲಿಸುತ್ತಿರುವ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರಿಗೂ ಆಶಾಕಿರಣವಾಗಿ ಗೋಚರಿಸಿದೆ. ಶೀಘ್ರವೇ ಕರ್ನಾಟಕ ಕೂಡಾ ಗರಿಷ್ಠ ಮಟ್ಟಮುಟ್ಟಿ, ಇಳಿಕೆಯ ಹಾದಿಯಲ್ಲಿ ಸಾಗಬಹುದು ಎಂಬ ಆಶಾಕಿರಣಗಳು ಗೋಚರಿಸಿವೆ.

ಧೈರ್ಯವಾಗಿದ್ದರೆ ಕೊರೋನಾ ವಿರುದ್ಧ ಗೆದ್ದಂತೆ: ಗುಣಮುಖರಾದ BBMP ನೌಕರನ ಮಾತು!

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್‌ ಗುಲೇರಿಯಾ, ‘ದೆಹಲಿಯಲ್ಲಿ ಹೊಸ ಸೋಂಕಿನಲ್ಲಿ ಗಣನೀಯ ಇಳಿಕೆಯಾಗುತ್ತಿರುವುದು, ಸೋಂಕು ಗರಿಷ್ಠ ಮಟ್ಟಮುಟ್ಟಿರುವ ಸುಳಿವಿರಬಹುದು. ಆದರೆ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಸೋಂಕು ತುತ್ತತುದಿ ತಲುಪಲು ಇನ್ನಷ್ಟುದಿನ ಬೇಕಾಗಬಹುದು. ಅದೇ ರೀತಿ ಕೆಲವು ರಾಜ್ಯಗಳಲ್ಲಿ ಈಗ ಕೊರೋನಾ ವೈರಸ್‌ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳಗೊಳ್ಳುತ್ತಿದ್ದು, ಕೊಂಚ ವಿಳಂಬವಾಗಿ ಈ ರಾಜ್ಯಗಳಲ್ಲೂ ಸೋಂಕು ಕ್ರಮೇಣ ಇಳಿಮುಖವಾಗಲಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಮಾ.2ರಂದು ಮೊದಲ ಕೇಸು ಪತ್ತೆಯಾಗಿತ್ತು. ಏ.1ಕ್ಕೆ ಅದು 55ಕ್ಕೆ, ಮೇ 1ಕ್ಕೆ 299, ಜೂನ್‌ 1ಕ್ಕೆ 1295 ಮತ್ತು ಜೂನ್‌ 23ರಂದು ಗರಿಷ್ಠ 3947 ಕೇಸಿಗೆ ತಲುಪಿತ್ತು. ನಂತರದಲ್ಲಿ ಹಂತಹಂತವಾಗಿ ಕಡಿಮೆಯಾಗುತ್ತಲೇ ಬಂದು, ಸೋಮವಾರ 954ಕ್ಕೆ ಇಳಿದಿದೆ. ಇದು ಕಳೆದ 49 ದಿನಗಳಲ್ಲೇ ಮೊದಲ ಬಾರಿಗೆ 1000ಕ್ಕಿಂತ ಕಡಿಮೆ ಹೊಸ ಕೇಸು ದಾಖಲಾದ ಮೊದಲ ಘಟನೆಯಾಗಿದೆ. ಹೀಗಾಗಿಯೇ ದೆಹಲಿಯ ಬೆಳವಣಿಗೆ ಇಡೀ ದೇಶದ ಗಮನ ಸೆಳೆದಿದೆ.

ಬುಧವಾರದಿಂದ ಬೆಂಗಳೂರು ಅನ್‌ಲಾಕ್‌: ಲಾಕ್‌ಡೌನ್‌ ವಿಸ್ತರಣೆ ಇಲ್ಲ!

ಪ್ರಸಕ್ತ ದೆಹಲಿಯಲ್ಲಿ 1,23,747 ಒಟ್ಟು ಪ್ರಕರಣಗಳ ಪೈಕಿ 1,04,918 ಮಂದಿ ಚೇತರಿಸಿಕೊಂಡಿದ್ದು, 3,663 ಮಂದಿ ಸಾವಿಗೀಡಾಗಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15,166ಕ್ಕೆ ಇಳಿಕೆ ಆಗಿದೆ. ಅಲ್ಲದೇ ಹೊಸ ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣ ಅಧಿಕವಾಗಿದೆ.

click me!