ಬೆಲೆ ಏರಿಕೆಯನ್ನು ನಿಯಂತ್ರಿಸಿ, ರೈತರಿಗೆ ನೆರವಾಗಿ: ಮೋದಿ ಸರ್ಕಾರಕ್ಕೆ ಹೊಸಬಾಳೆ ಸಲಹೆ

By Kannadaprabha NewsFirst Published Jul 25, 2022, 5:45 AM IST
Highlights

ಆಹಾರ, ಬಟ್ಟೆ ಮತ್ತು ಮನೆ ಜನರ ಅತ್ಯಂತ ಮೂಲಭೂತ ಅಗತ್ಯಗಳು. ಇದು ಸದಾ ಜನರಿಗೆ ಕೈಗೆಟಕುವ ರೀತಿಯಲ್ಲಿ ಇರಬೇಕು: ಹೊಸಬಾಳೆ

ನವದೆಹಲಿ(ಜು.25):  ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಹಣದುಬ್ಬರ ಹೆಚ್ಚಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಸರ್ಕಾರ ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ ಇಂಥ ಕ್ರಮಗಳು ಪರೋಕ್ಷವಾಗಿ ರೈತರನ್ನು ಘಾಸಿಗೊಳಿಸಬಾರದು ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಸಹ ಸಂಘಟನೆಯಾದ ಭಾರತೀಯ ಕಿಸಾನ್‌ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ದತ್ತಾತ್ರೇಯ ಹೊಸಬಾಳೆ, ‘ಆಹಾರ, ಬಟ್ಟೆ ಮತ್ತು ಮನೆ ಜನರ ಅತ್ಯಂತ ಮೂಲಭೂತ ಅಗತ್ಯಗಳು. ಇದು ಸದಾ ಜನರಿಗೆ ಕೈಗೆಟಕುವ ರೀತಿಯಲ್ಲಿ ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಮತ್ತು ಹಣದುಬ್ಬರ ಏರಿಕೆಯಾಗುತ್ತಿದೆ. ಹೀಗಾಗಿ ಆಹಾರ ಬೆಲೆಗಳು ಹಾಗೂ ಹಣದುಬ್ಬರದ ನಡುವಿನ ಕೊಂಡಿಯ ಬಗ್ಗೆ ಸರ್ಕಾರ ಆಳವಾದ ಅಧ್ಯಯನ ಮಾಡಬೇಕು. ಕೈಗಾರಿಕೋತ್ಪನ್ನದ ಬೆಲೆಗಳು ಏರುತ್ತಿವೆ. ಈ ಬಗ್ಗೆ ಜನರು ಹೆಚ್ಚು ಯೋಚಿಸಲ್ಲ. ಆದರೆ ಜನರು ಆಹಾರ ಉತ್ಪನ್ನ ಹಾಗೂ ಬಟ್ಟೆಗಳು ಕಡಿಮೆ ಬೆಲೆಯಲ್ಲಿ ಸಿಗಬೇಕು ಎಂದು ಜನರು ಬಯಸುತ್ತಾರೆ. ಏಕೆಂದರೆ ಆಹಾರ ಮೂಲಭೂತ ವಸ್ತು. ಅದು ಕೈಗೆಟಕುವ ದರದಲ್ಲಿ ಸಿಗಬೇಕು’ ಎಂದರು.

ಜಿಎಸ್‌ಟಿ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್, ವಾಹನ ಮಾಲೀಕರ ಜೇಬಿಗೆ ಕತ್ತರಿ!

‘ಆಹಾರ ಬೆಲೆಗಳು ಕಡಿಮೆ ಆದರೆ ರೈತರು ನಷ್ಟಅನುಭವಿಸುವಂತೆ ಆಗಬಾರದು. ಸರ್ಕಾರದ ಬೆಲೆ ನಿಯಂತ್ರಣ ಕ್ರಮಗಳು ರೈತರನ್ನು ಘಾಸಿಗೊಳಿಸಬಾರದು’ ಎಂದೂ ಅವರು ಆಗ್ರಹಿಸಿದರು.
 

click me!