ವಿಪಕ್ಷ ನಾಯಕ ಸ್ಥಾನದಿಂದ ಅಧೀರ್‌ಗೆ ಕಾಂಗ್ರೆಸ್‌ ಕೊಕ್‌?

By Kannadaprabha NewsFirst Published Jul 5, 2021, 9:34 AM IST
Highlights

* ಲೋಕಸಭೆ ನಾಯಕ ಸ್ಥಾನದಿಂದಅಧೀರ್‌ಗೆ ಕಾಂಗ್ರೆಸ್‌ ಕೊಕ್‌?

* ಮುಂಗಾರು ಅಧಿವೇಶನಕ್ಕೆ ಮುನ್ನವೇ ನಿರ್ಧಾರ ಸಂಭವ

* ಚೌಧರಿಗೆ ಹೋಲಿಸಿದರೆ ಖರ್ಗೆಯೇ ಬೆಸ್ಟ್‌: ನಾಯಕರು

ನವದೆಹಲಿ(ಜು.05): ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಪದಚ್ಯುತವಾಗುವ ಸಾಧ್ಯತೆ ದಟ್ಟವಾಗಿ ಕಂಡುಬರುತ್ತಿದೆ. ಪಶ್ಚಿಮ ಬಂಗಾಳದಿಂದ ಲೋಕಸಭೆ ಸದಸ್ಯರಾಗಿರುವ ಹಾಗೂ ಆ ರಾಜ್ಯದ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಅಧೀರ್‌ ರಂಜನ್‌ ಬಗ್ಗೆ ಪಕ್ಷದೊಳಗೆ ಮೊದಲಿನಿಂದಲೂ ಅಸಮಾಧಾನ ಇತ್ತು. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಬಳಿಕ ಅದು ಇನ್ನಷ್ಟುತೀವ್ರವಾಗಿದೆ. ಹೀಗಾಗಿ ಅವರನ್ನು ಬದಲಿಸಲು ಕಾಂಗ್ರೆಸ್‌ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾರಣ ಏನು?

ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕರಾಗಿದ್ದರೂ ತೃಣಮೂಲ ಕಾಂಗ್ರೆಸ್‌ ಒಳಗೊಂಡ ಪ್ರತಿಪಕ್ಷಗಳ ಸಭೆಯನ್ನು ಅಧೀರ್‌ ಅವರು ಎಂದಿಗೂ ಕರೆದಿಲ್ಲ. ಮಸೂದೆ, ಧರಣಿ, ಸಭಾತ್ಯಾಗ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಸಂಸದರ ಮೂಲಕ ತೃಣಮೂಲ ಕಾಂಗ್ರೆಸ್ಸಿಗೆ ಕಾಂಗ್ರೆಸ್‌ ಪಕ್ಷದ ನಿಲುವು ತಿಳಿಸುತ್ತಾರೆ ಎಂಬ ದೂರು ಮೊದಲಿನಿಂದಲೂ ಇದೆ. 16ನೇ ಲೋಕಸಭೆಯಲ್ಲಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ನಾಯಕರಾಗಿದ್ದರು. ಅವರಿದ್ದಾಗ ಪ್ರತಿಪಕ್ಷಗಳ ನಡುವೆ ಸಮನ್ವಯತೆ ಇತ್ತು ಎಂದು ವಿಪಕ್ಷ ನಾಯಕರೂ ಹೇಳುತ್ತಿದ್ದಾರೆ.

ಈ ನಡುವೆ ಬಂಗಾಳ ಚುನಾವಣೆ ವೇಳೆ ತೃಣಮೂಲ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವಂತೆ ಹಲವು ಹಿರಿಯ ನಾಯಕರು ಕಾಂಗ್ರೆಸ್ಸಿಗೆ ಸಲಹೆ ಮಾಡಿದ್ದರು. ಆದರೆ ಬಂಗಾಳ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಅವರ ಕಡುವೈರಿಯಾಗಿರುವ ಅಧೀರ್‌ ಅವರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಮೈತ್ರಿ ಸಾಧ್ಯವಾಗಲಿಲ್ಲ ಎಂಬ ಆಕ್ರೋಶ ಇದೆ.

ಚೌಧರಿ ಕಾರಣಕ್ಕೆ ಕಾಂಗ್ರೆಸ್‌ ಯಾವುದೇ ಸಭೆ ಕರೆದರೂ ತೃಣಮೂಲ ಕಾಂಗ್ರೆಸ್ಸಿಗರು ಬರುವುದಿಲ್ಲ. ರಾಹುಲ್‌ ಗಾಂಧಿ ನಡೆಸುವ ಪ್ರತಿಪಕ್ಷಗಳ ಸಭೆಗೂ ಅಧೀರ್‌ ಕಾರಣ ತೃಣಮೂಲ ಕಾಂಗ್ರೆಸ್‌ ಬರುತ್ತಿಲ್ಲ. ಮಮತಾ ಬ್ಯಾನರ್ಜಿ ಅವರು ಸಂಸತ್ತಿಗೆ ಭೇಟಿ ನೀಡಿದರೆ ಅವರನ್ನು ಕಾಣಲು ಎಲ್ಲ ಪಕ್ಷಗಳ ಸಂಸದರೂ ಹೋಗುತ್ತಾರೆ. ಆದರೆ ಅಧೀರ್‌ ಮಾತ್ರ ಹೋಗುವುದಿಲ್ಲ. ವೈಯಕ್ತಿಕ ಹಗೆತನವನ್ನು ಅವರು ಸಾಧಿಸುತ್ತಿದ್ದಾರೆ ಎಂಬ ಆರೋಪ ಇದೆ.

click me!