
ನವದೆಹಲಿ(ಜೂ.17): ಬುಧವಾರ ಎಐಸಿಸಿ ಕಚೇರಿಯೊಳಗೆ ನುಗ್ಗಿದ್ದೂ ಅಲ್ಲದೆ, ಪ್ರತಿಭಟನಾ ನಿರತ ಸಂಸದರು ಮತ್ತು ಕಾರ್ಯಕರ್ತರ ಮೇಲೆ ದೆಹಲಿ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಈ ಕುರಿತು ನಿನ್ನೆ(ಗುರುವಾರ) ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ದೂರು ಸಲ್ಲಿಸಿದೆ. ಅಲ್ಲದೆ ಇಂದು(ಶುಕ್ರವಾರ) ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಲೂ ನಿರ್ಧರಿಸಿದೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದ ನಿಯೋಗವು ಓಂ ಬಿರ್ಲಾರನ್ನು ಮತ್ತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ನಿಯೋಗ ವೆಂಕಯ್ಯನಾಯ್ಡು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಈ ವೇಳೆ, ‘ದೆಹಲಿ ಪೊಲೀಸರು ಉಗ್ರರೊಂದಿಗೆ ವರ್ತಿಸುವಂತೆ ಪ್ರತಿಭಟನಾ ನಿರತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಜೊತೆ ವರ್ತಿಸಿದ್ದಾರೆ. ಸಂಸತ್ತಿನ ಸದಸ್ಯರಾಗಿ ತಮಗಿರುವ ಸವಲತ್ತುಗಳನ್ನು ಉಲ್ಲಂಘಿಸಲಾಗಿದೆ. ಕಿರುಕುಳ ನೀಡಿದ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್ ಸಂಸದರು ಆಗ್ರಹಿಸಿದ್ದಾರೆ. ಜೊತೆಗೆ ತಮ್ಮೊಂದಿಗೆ ಪೊಲೀಸರು ಅಸಭ್ಯವಾಗಿ ವರ್ತಿಸಿದ ವಿಡಿಯೋಗಳಿರುವ ಪೆನ್ಡ್ರೈವ್ ಅನ್ನು ಹಸ್ತಾಂತರಿಸಿದ್ದಾರೆ.
NEWS HOUR: ನ್ಯಾಷನಲ್ ಹೆರಾಲ್ಡ್ ಪ್ರಕರಣ: ನಾಳೆಯ ವಿಚಾರಣೆಗೆ ವಿನಾಯಿತಿ ಕೇಳಿದ ರಾಹುಲ್ ಗಾಂಧಿ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ ‘ಕಾಂಗ್ರೆಸ್ ಪಕ್ಷವನ್ನು ಒಡೆಯಲು ಸಂಚು ರೂಪಿಸಲಾಗಿದೆ. ಯಾವುದೇ ರಾಜಕೀಯ ನಾಯಕನು ಇಷ್ಟೊಂದು ದಿನಗಳ ಕಾಲ ವಿಚಾರಣೆಗೆ ಒಳಗಾಗುವುದನ್ನು ನೋಡಿದ್ದೀರಾ? ನಮ್ಮ ನಾಯಕನನ್ನು ಬೆಂಬಲಿಸಲು, ಒಗ್ಗಟ್ಟು ಸೂಚಿಸಲು ನಾವು ಪ್ರತಿಭಟನೆ ನಡೆಸಿದ್ದೆವು. ಆದರೆ ಪೊಲೀಸರು ಉಗ್ರರೊಂದಿಗೆ ವರ್ತಿಸುವಂತೆ ನಮ್ಮೊಂದಿಗೆ ವರ್ತಿಸಿದ್ದಾರೆ. ಮಹಿಳಾ ಸಂಸದೆಯರ ಮೇಲೂ ಹಲ್ಲೆ ಮಾಡಲಾಗಿದ್ದು, ಅವರ ವಸ್ತ್ರಗಳು ಹರಿದಿದೆ. ಇದು ಅಮೃತ ಕಾಲವೇ? ಮೋದಿ, ಅಮಿತ್ ಶಾ ಅಮೃತ ಕಾಲವನ್ನು ವಿಷದ ಕಾಲವಾಗಿ ಪರಿವರ್ತಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಖರ್ಗೆ ‘ರಾಜ್ಯಸಭಾ ಮುಖ್ಯಸ್ಥ, ಸ್ಪೀಕರ್ಗೆ ಪೂರ್ವಭಾವಿಯಾಗಿ ತಿಳಿಸುವ ಮೊದಲೇ ಕಾಂಗ್ರೆಸ್ ಸಂಸದರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅವರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಸಂಸದರಾಗಿ ನಮಗೆ ನೀಡಲಾಗುವ ಸವಲತ್ತುಗಳ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇವೆ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ