
ನವದೆಹಲಿ(ಆ.29) ರಕ್ಷಾ ಬಂಧನ ಹಬ್ಬಕ್ಕೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡುತ್ತಿದೆ. ಆಗಸ್ಟ್ 30 ರಿಂದ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮೂಲಗಳ ಪ್ರಕಾರ ಆಗಸ್ಟ್ 30 ರಿಂದ 200 ರೂಪಾಯಿ ಇಳಿಕೆಯಾಗಲಿದೆ. ಕೇಂದ್ರ ಕ್ಯಾಬಿನೆಟ್ ಸಿಲಿಂಡರ್ ಇಳಿಕೆಗೆ ಅನುಮತಿ ನೀಡಿದೆ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಸಿಎನ್ಬಿಸಿಟಿ ವರದಿ ಪ್ರಕಾರ ಅಡುಗೆ ಅನಿಲ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಲಿದೆ ಎಂದಿದೆ.
ಸದ್ಯ 14.2 ಕೆಜಿ ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆ ಕರ್ನಾಟಕದಲ್ಲಿ 1,105.50 ರೂಪಾಯಿ ಇದ್ದರೆ, ದೆಹಲಿಯಲ್ಲಿ 1053, ಮುಂಬೈನಲ್ಲಿ 1052.50 ರೂಪಾಯಿ, ಚೆನ್ನೈನಲ್ಲಿ 1079 ರೂಪಾಯಿ ದರವಿದೆ. ಈ ಬೆಲೆಯಲ್ಲಿ 200 ರೂಪಾಯಿ ಕಡಿತಗೊಳ್ಳಲಿದೆ ಎಂದು ವರದಿಯಾಗಿದೆ. ಜುಲೈ ತಿಂಗಳಲ್ಲಿ 50 ರೂಪಾಯಿ ಏರಿಕೆ ಕಂಡಿದ್ದರೆ, ಮೇ ತಿಂಗಳಲ್ಲಿ 2 ಬಾರಿ ದರ ಏರಿಕೆಯಾಗಿತ್ತು. ಚತ್ತೀಸಘಡ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಮಿಜೋರಾಂನ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಈ ರಾಜ್ಯದಲ್ಲಿ ಶೀಘ್ರದಲ್ಲೇ 500 ರೂ. ಗೆ ಸಿಗುತ್ತೆ ಎಲ್ಪಿಜಿ ಸಿಲಿಂಡರ್!
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಇಳಿಕೆಯಾಗುವ ಸಾಧ್ಯತೆ ಇದೆ. 19 ಕೆಜಿ ವಾಣಿಜ್ಯ ಗ್ಯಾಸ್ ಬೆಲೆ 99.75 ರೂಪಾಯಿ ಇಳಿಕೆಯಾಗಲಿದೆ. ಕಮರ್ಷಿಯಲ್ ಸಿಲಿಂಡರ್ ಬೆಲೆ ಆಗಸ್ಟ್ 1 ರಿಂದ ಇಳಿಕೆಯಾಗಲಿದೆ. ಸದ್ಯ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2190.5 ರೂಪಾಯಿ ಇದೆ. ಆಗಸ್ಟ್ 1 ರಿಂದ ಈ ಬೆಲೆಯೂ ಪರಿಷ್ಕರಣೆಗೊಳ್ಳಲಿದೆ.
ಸಾಮಾನ್ಯವಾಗಿ ಅಡುಗೆ ಅನಿಲ ಹಾಗೂ ವಾಣಿಜ್ಯ ಗ್ಯಾಸ್ ಬೆಲೆ ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಣೆಗೊಳ್ಳಲಿದೆ. ಆಯಿಲ್ ಮಾರ್ಕೆಟಿಂಗ್ ಕಂಪನಿ(OMC)ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ ಆಧರಿಸಿ ಬೆಲೆ ಪರಿಷ್ಕರಿಸಲಿದೆ.ಇದರ ಭಾಗವಾಗಿ OMC ಅನಿಲ ಬೆಲೆ ಇಳಿಕೆ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಲು ಮುಂದಾಗಿದೆ.
‘ಆಕ್ಸಿಜನ್ ಸಿಲೆಂಡರ್ ಹೊತ್ತು ತಿರುಗುವ ದಿನ ದೂರವಿಲ್ಲ’
ವಿಧಾನಸಭೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚವ್ಹಾನ್ ಮಹಿಳೆಯರಿಗೆ ಬಂಪರ್ ಆಫರ್ ಘೋಷಿಸಿದ್ದರು. ಲಾಡ್ಲಿ ಬೆಹೆನಾ’ ಯೋಜನೆಯಡಿ ಮಹಿಳೆಯರಿಗೆ 1250 ರು. ನೀಡಲಾಗುವುದು (ಈ ಹಿಂದೆ ಮಾಸಿಕ 1000 ರು. ಇತ್ತು). ಅಕ್ಟೋಬರ್ ತಿಂಗಳಿನಿಂದ ಇದನ್ನು ಶಾಶ್ವತವಾಗಿ 1250 ರು.ಗೆ ಏರಿಸಲಾಗುವುದು. ಶ್ರಾವಣ ಮಾಸದಲ್ಲಿ 450 ರು.ಗೆ ಎಲ್ಪಿಜಿ ಸಿಲಿಂಡರ್ ನೀಡಲಾಗುವುದು. ಮುಂದೆ ಇದೇ ದರಕ್ಕೆ ಸಿಲಿಂಡರ್ ನೀಡಲು ಶಾಶ್ವತ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ನೌಕರಿಯಲ್ಲಿ ಮಹಿಳೆಯರಿಗಿರುವ ಮೀಸಲಾತಿಯನ್ನು ಈಗಿನ ಶೇ.30ರಿಂದ ಶೇ.35ಕ್ಕೆ ಏರಿಸಲಾಗುವುದು ಎಂದು ಶಿವರಾಜ ಸಿಂಗ್ ಪ್ರಕಟಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ