
ನವದೆಹಲಿ(ಮಾ.13): ಹತ್ತು ವರ್ಷಕ್ಕೊಮ್ಮೆ ನಡೆಯುವ ರಾಷ್ಟ್ರೀಯ ಜನಗಣತಿಯ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಮುಂಬರುವ ಜನಗಣತಿಯಲ್ಲಿ ದೇಶದ ಜನರು ತಮ್ಮ ಮಾಹಿತಿಯನ್ನು ತಾವೇ ಆನ್ಲೈನ್ನಲ್ಲಿ ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಈ ಹಿಂದಿನಂತೆ ಗಣತಿದಾರರು ಜನರ ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯವೂ ನಡೆಯಲಿದೆ.
‘ಜನಗಣತಿ (ತಿದ್ದುಪಡಿ) ನಿಯಮಗಳು-2022’ಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿ ಅಧಿಸೂಚನೆ ಹೊರಡಿಸಿದೆ. ಅದರಲ್ಲಿ ‘ಎಲೆಕ್ಟ್ರಾನಿಕ್ ಅರ್ಜಿ’ಗೂ ಭೌತಿಕ ಅರ್ಜಿಗೆ ಸಮಾನವಾದ ಮಾನ್ಯತೆ ನೀಡಲಾಗಿದೆ. ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಾನುಸಾರ ಎಲೆಕ್ಟ್ರಾನಿಕ್ ರೂಪದಲ್ಲಿ ಸರ್ಕಾರ ಸ್ವೀಕರಿಸುವ ಜನಗಣತಿಯ ಮಾಹಿತಿಯು ಜನಗಣತಿದಾರರು ಭೌತಿಕವಾಗಿ ಸಂಗ್ರಹಿಸುವ ಮಾಹಿತಿಯಷ್ಟೇ ಅಧಿಕೃತವಾಗಿರುತ್ತದೆ. ಅದರಂತೆ ಜನರು ತಮ್ಮ ಮಾಹಿತಿಯನ್ನು ಗಣತಿಯ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಕೆ ಮಾಡಬಹುದಾಗಿದೆ.
ದೇಶದಲ್ಲಿ 2021ರ ಜನಗಣತಿಯು 2020ರ ಏ.1ರಿಂದ ನಡೆಯಬೇಕಿತ್ತು. ಆದರೆ, ಕೊರೋನಾ ಕಾರಣದಿಂದ ನಡೆದಿಲ್ಲ. ಮುಂದೆ ಯಾವಾಗ ನಡೆಯುತ್ತದೆ ಎಂಬುದನ್ನು ಸರ್ಕಾರ ತಿಳಿಸಿಲ್ಲ. ಇನ್ನು, ಜನರು ಎಲೆಕ್ಟ್ರಾನಿಕ್ ರೂಪದಲ್ಲಿ ತಾವೇ ಗಣತಿಯ ಅರ್ಜಿ ಭರ್ತಿ ಮಾಡಿ ಸಲ್ಲಿಸಿದ ಮೇಲೆ ಗಣತಿದಾರರು ಅವರ ಮನೆಗೆ ಭೇಟಿ ನೀಡಿ ಭೌತಿಕವಾಗಿ ಮಾಹಿತಿ ಪಡೆಯುತ್ತಾರೋ ಅಥವಾ ಜನರು ಸಲ್ಲಿಸಿದ ಎಲೆಕ್ಟ್ರಾನಿಕ್ ಅರ್ಜಿಯಲ್ಲಿರುವ ಮಾಹಿತಿಯೇ ಅಂತಿಮವೋ ಎಂಬುದನ್ನು ಸರ್ಕಾರ ತಿಳಿಸಿಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ