
ನವದೆಹಲಿ (ಫೆ.12): ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಯಲ್ಲಿ ಪಾಣಿಗಳ ಕೊಬ್ಬು ಮಿಶ್ರಿತ ತುಪ್ಪವನ್ನು ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ ನಾಲ್ವರನ್ನು ಬಂಧಿಸಿದೆ. ಅದರೊಂದಿಗೆ ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಇ-ಟೆಂಡರ್ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳನ್ನು ಬಯಲು ಮಾಡಿದೆ ಎಂದು ಎಎನ್ಐ ವರದಿ ಮಾಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐನ ವಿಶೇಷ ತನಿಖಾ ತಂಡವು ಈ ವಿಷಯದ ಬಗ್ಗೆ ತನಿಖೆ ಆರಂಭ ಮಾಡಿದ್ದು, ಇದು ಟಿಟಿಡಿಯ ಖರೀದಿ ಪ್ರಕ್ರಿಯೆಯಲ್ಲಿ "ತೀವ್ರ ಲೋಪಗಳು" ಬಹಿರಂಗಗೊಳ್ಳಲು ಕಾರಣವಾಯಿತು. ಬಂಧಿತ ವ್ಯಕ್ತಿಗಳಲ್ಲಿ ಉತ್ತರಾಖಂಡದ ರೂರ್ಕಿಯ ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ಬಿಪಿನ್ ಜೈನ್ ಮತ್ತು ಪೊಮಿಲ್ ಜೈನ್ ಸೇರಿದ್ದಾರೆ. ಅವರೊಂದಿಗೆ ಪೂನಂಬಾಕ್ಕಂನ ವೈಷ್ಣವಿ ಡೈರಿಯ ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ, ದುಂಡಿಗಲ್ನ ಎಆರ್ ಡೈರಿಯ ಎಂಡಿ ರಾಜು ರಾಜಶೇಖರನ್ ಅವರನ್ನು ಬಂಧಿಸಲಾಗಿದೆ.
ರಿಮಾಂಡ್ ವರದಿಯು ತುಪ್ಪ ಕಲಬೆರಕೆ ನಡೆದಿರುವುದನ್ನು ದೃಢಪಡಿಸಿದ್ದು, ಮೂವರು ಡೈರಿ ಪೂರೈಕೆದಾರರು ಹಗರಣದಲ್ಲಿ ಭಾಗಿಯಾಗಿದ್ದಾರೆಂದು ವರದಿಯಾಗಿದೆ. ತೆಲುಗು ದೇಶಂ ಪಕ್ಷದ ಪ್ರಕಾರ, ಆರೋಪಿಗಳನ್ನು ತಿರುಪತಿಯಲ್ಲಿ ಮೂರು ದಿನಗಳ ವಿಚಾರಣೆಗೆ ಒಳಪಡಿಸಲಾಯಿತು, ಆದರೆ ಅವರ ವಿರುದ್ಧ ಬಲವಾದ ಪುರಾವೆಗಳಿದ್ದರೂ ಅವರು ಸಹಕರಿಸಲಿಲ್ಲ ಎಂದು ವರದಿಯಾಗಿದೆ.
ತುಪ್ಪದಲ್ಲಿ ಪ್ರಾಣಿಗಳ ಶವದ ಅವಶೇಷಗಳು ಕಂಡುಬಂದಿವೆ ಎಂಬ ಹೇಳಿಕೆಗಳು ಸೇರಿದಂತೆ ಆತಂಕಕಾರಿ ಆರೋಪಗಳು ತನಿಖೆಯಲ್ಲಿ ಕೇಳಿಬಂದಿದ್ದು, ಭಕ್ತರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಟಿಟಿಡಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ಐಎಆರ್ ಡೈರಿ, ಹಲವು ಉಲ್ಲಂಘನೆಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ ಎಂದು ವರದಿಯಾಗಿದೆ.
ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಲು, ಜಂಟಿ ನಿರ್ದೇಶಕ ವಿರೇಶ್ ಪ್ರಭು ತಿರುಪತಿಯಲ್ಲಿ ಬೀಡುಬಿಟ್ಟು ಮುಂದಿನ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಟಿಡಿಪಿ ತಿಳಿಸಿದೆ.ಬಂಧನಗಳ ಕುರಿತು ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷದ ವಕ್ತಾರೆ ಲಂಕಾ ದಿನಕರ್, ತುಪ್ಪ ಕಲಬೆರಕೆ ಆರೋಪದಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.
"ಈ ಪ್ರಕ್ರಿಯೆಯಲ್ಲಿ, ನಿನ್ನೆ, ಎಸ್ಐಟಿ ರೂರ್ಕಿಯ ಭೋಲೆ ಬಾಬಾ ಡೈರಿಯ ಬಿಪಿನ್ ಜೈನ್, ಪೋಮಿಲ್ ಜೈನ್, ಪೂನಂಬಕ್ಕಂನ ವೈಷ್ಣವಿ ಡೈರಿ ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ದುಂಡಿಗಲ್ನ ಎಆರ್ ಡೈರಿಯ ಎಂಡಿ ರಾಜು ರಾಜಶೇಖರನ್ ಅವರನ್ನು ಬಂಧಿಸಿದೆ. ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ತನಿಖಾ ಪ್ರಕ್ರಿಯೆ ಮುಂದುವರೆದಿದೆ" ಎಂದು ದಿನಕರ್ ಹೇಳಿದರು.
ತಿರುಪತಿ ಲಡ್ಡು ಕೇಸ್ ಕುರಿತು ಎಸ್ಐಟಿ ತನಿಖೆಗೆ ಸುಪ್ರೀಂಕೋರ್ಟ್ ಆದೇಶ
ಈ ನಡುವೆ, ಹಗರಣದ ಹಿಂದಿನ ನಿಜವಾದ ಸೂತ್ರಧಾರಿಗಳನ್ನು ಪತ್ತೆ ಮಾಡಲಾಗುವುದು ಎಂದು ಟಿಟಿಡಿ ಮಂಡಳಿ ಸದಸ್ಯ ಭಾನು ಪ್ರಕಾಶ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. "ನಿನ್ನೆ ರಾತ್ರಿ, 3-4 ಡೈರಿ ನಿರ್ದೇಶಕರನ್ನು ವಶಕ್ಕೆ ಪಡೆಯಲಾಗಿದ್ದು, ಈಗ ಅವರನ್ನು ರಿಮಾಂಡ್ಗೆ ಕಳುಹಿಸಲಾಗಿದೆ. ಇದರ ಹಿಂದೆ ಯಾರಿದ್ದಾರೆ? ಇದು ಏಕೆ ಸಂಭವಿಸಿತು, ಎಲ್ಲಾ ವಿವರಗಳು ಹೊರಬರಲಿವೆ. ಇದರ ಹಿಂದಿರುವ ಜನರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂಬ ವಿಶ್ವಾಸ ನಮಗಿದೆ" ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ