ನಾಯ್ಡುಗೆ ಅಮರಾವತಿ ಭೂ ಕಂಟಕ!

Published : Dec 29, 2019, 04:24 PM IST
ನಾಯ್ಡುಗೆ ಅಮರಾವತಿ ಭೂ ಕಂಟಕ!

ಸಾರಾಂಶ

ನಾಯ್ಡುಗೆ ಅಮರಾವತಿ ಭೂ ಕಂಟಕ| ಅಮರಾವತಿ ರಾಜಧಾನಿ ಘೋಷಣೆಗೆ ಮುನ್ನ ಭಾರಿ ಭೂಮಿ ಖರೀದಿ| ಸಿಬಿಐ ತನಿಖೆಗೆ ಆದೇಶಿಸಲು ಮುಂದಾದ ಜಗನ್‌ ರೆಡ್ಡಿ ಸರ್ಕಾರ

ವಿಜಯವಾಡ[ಡಿ.29]: ಅಮರಾವತಿಯನ್ನು ಆಂಧ್ರಪ್ರದೇಶ ರಾಜಧಾನಿ ಎಂದು ಘೋಷಣೆ ಮಾಡುವ ಮೊದಲೇ ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಆ ಪಕ್ಷದ ಮಾಜಿ ಸಚಿವರು ಹಾಗೂ ಮುಖಂಡರು ಅಲ್ಲಿ ಭಾರಿ ಪ್ರಮಾಣದ ಭೂಮಿಯನ್ನು ಖರೀದಿಸಿದ್ದರು ಎಂಬ ರೋಚಕ ಮಾಹಿತಿ ಬೆಳಕಿಗೆ ಬಂದಿದೆ. ಸಚಿವ ಸಂಪುಟ ಉಪಸಮಿತಿ ತನಿಖೆಯಲ್ಲಿ ಈ ಅಂಶ ಗೊತ್ತಾಗುತ್ತಿದ್ದಂತೆ, ಸಿಬಿಐ ತನಿಖೆಗೆ ಜಗನ್ಮೋಹನ ರೆಡ್ಡಿ ನೇತೃತ್ವದ ಸರ್ಕಾರ ಒಲವು ತೋರಿದೆ.

ಈ ಅಕ್ರಮದ ಕುರಿತು ಕಾನೂನು ಅಭಿಪ್ರಾಯ ಪಡೆದ ಬಳಿಕ ಲೋಕಾಯುಕ್ತರಿಂದ ತನಿಖೆ ಮಾಡಿಸಬೇಕೆ ಅಥವಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆ ಎಂಬ ಕುರಿತು ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರಿಂದಾಗಿ ಈಗಾಗಲೇ ಅಧಿಕಾರ ಕಳೆದುಕೊಂಡು ಹಿನ್ನಡೆ ಅನುಭವಿಸಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಬಹುದೊಡ್ಡ ಭೂಕಂಟಕ ಎದುರಾಗುವ ಸಾಧ್ಯತೆ ಇದೆ.

2014ರ ಡಿಸೆಂಬರ್‌ನಲ್ಲಿ ಅಮರಾವತಿಯನ್ನು ಆಂಧ್ರಪ್ರದೇಶ ರಾಜಧಾನಿ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಅದಕ್ಕೂ 5 ತಿಂಗಳು ಮೊದಲೇ ಅಂದರೆ ಜುಲೈನಲ್ಲಿ ಚಂದ್ರಬಾಬು ನಾಯ್ಡು ಅವರ ಕುಟುಂಬ ಸದಸ್ಯರ ಒಡೆತನದ ಕಂಪನಿಗಳು, ತೆಲುಗುದೇಶಂ ನಾಯಕರು ಭಾರಿ ಪ್ರಮಾಣದಲ್ಲಿ ಭೂಮಿಯನ್ನು ಖರೀದಿಸಿಟ್ಟುಕೊಂಡಿದ್ದರು. ಈ ಕುರಿತಾದ ನೋಂದಣಿ ದಾಖಲೆಗಳು ಲಭಿಸಿವೆ ಎಂದು ಸಚಿವ ಸಂಪುಟ ಉಪಸಮಿತಿ ಶುಕ್ರವಾರ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಅಮರಾವತಿ ರಾಜಧಾನಿ ಘೋಷಣೆ ವೇಳೆ ಭಾರಿ ಪ್ರಮಾಣದ ‘ಒಳ ವ್ಯವಹಾರ’ (ಇನ್‌ಸೈಡರ್‌ ಟ್ರೇಡಿಂಗ್‌) ನಡೆದಿದೆ ಎಂಬ ಆರೋಪ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ಜಗನ್‌ ರಚಿಸಿದ್ದರು. ತೆಲುಗುದೇಶಂ ನಾಯಕರು ತಮ್ಮ ಚಾಲಕರು, ಕೆಲಸಗಾರರ ಹೆಸರಿನಲ್ಲೂ ಭೂಮಿ ಖರೀದಿಸಿದ್ದಾರೆ ಎಂದು ಈ ಸಮಿತಿ ವರದಿಯಲ್ಲಿ ವಿವರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್