* ವಾರವಿಡೀ ಗದ್ದಲದಲ್ಲೇ ಕಾಲಕಳೆದ ವಿಪಕ್ಷಗಳು
* ಪೆಗಾಸಸ್, ಕೃಷಿ ಮಸೂದೆ ಗದ್ದಲಕ್ಕೆ ಇಡೀ ವಾರದ ಕಲಾಪ ಬಲಿ
ನವದೆಹಲಿ(ಜು.24): ಪೆಗಾಸಸ್ ಹಗರಣ ಮತ್ತು ಕೃಷಿ ಕಾಯ್ದೆಗಳು ಸೇರಿದಂತೆ ಇನ್ನಿತರ ವಿಚಾರಗಳ ಕುರಿತಾಗಿ ವಿಪಕ್ಷಗಳ ಕೋಲಾಹಲ ಮತ್ತು ಗದ್ದಲಕ್ಕೆ ಶುಕ್ರವಾರದ ಸಂಸತ್ತಿನ ಉಭಯ ಕಲಾಪಗಳು ಬಲಿಯಾಗಿವೆ. ಇದರೊಂದಿಗೆ ಮುಂಗಾರು ಅಧಿವೇಶನದ ಮೊದಲ ವಾರ ಪೂರ್ಣ ಈ ವಿಷಯಗಳ ಗದ್ದಲದಲ್ಲೇ ಮುಕ್ತಾಯವಾಗಿದೆ.
ಶುಕ್ರವಾರ ಸಂಸತ್ತಿನ ಉಭಯ ಸದನಗಳಲ್ಲೂ ಪೆಗಾಸಸ್ ಕುರಿತು ಜಂಟಿ ಸಂಸದೀಯ ತನಿಖೆ ನಡೆಸಬೇಕು, ಕೃಷಿ ಕಾಯ್ದೆ ರದ್ದು ಪಡಿಸಬೇಕೆಂದು ವಿಪಕ್ಷಗಳು ಗದ್ದಲ ಎಬ್ಬಿಸುವ ಮೂಲಕ ಕಲಾಪಕ್ಕೆ ಅಡ್ಡಿ ಮಾಡಿದವು. ಹೀಗಾಗಿ 4 ಬಾರಿ ಕಲಾಪಗಳನ್ನು ಮುಂದೂಡಲಾಗಿತ್ತು. ಆದರೂ ಪರಿಸ್ಥಿತಿ ತಿಳಿಗೊಳ್ಳದ ಕಾರಣ, ಸೋಮವಾರಕ್ಕೆ ಉಭಯ ಸದನಗಳ ಕಲಾಪ ಮುಂದೂಡಲಾಯಿತು.
ಪ್ರತಿಭಟನೆ:
ಪೆಗಾಸಸ್ ಹಗರಣ ಸಂಬಂಧ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಹಲವು ವಿಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.