
ನವದೆಹಲಿ (ಜೂ.18): ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ, ಸ್ಪೀಕರ್ ಹುದ್ದೆಯನ್ನು ತನ್ನಲ್ಲಿ ಉಳಿಸಿಕೊಂಡು, ಉಪಸ್ಪೀಕರ್ ಹುದ್ದೆಯನ್ನು ಮಿತ್ರಪಕ್ಷಗಳಾದ ಟಿಡಿಪಿ ಅಥವಾ ಜೆಡಿಯುಗೆ ನೀಡುವ ಬಗ್ಗೆ ಒಲವು ವ್ಯಕ್ತಪಡಿಸಿದೆ ಎಂದು ಮೂಲಗಳು ಹೇಳಿವೆ. ಟಿಡಿಪಿ ಮತ್ತು ಜೆಡಿಯು ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ಬಿಜೆಪಿಗೆ, ಸ್ಪೀಕರ್ ಹುದ್ದೆ ಅತ್ಯಂತ ಮಹತ್ವದ್ದು ಎಂಬ ಅರಿವಿದೆ. ಹೀಗಾಗಿ ಆ ಹುದ್ದೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದೇ ಇರುವ ನಿರ್ಧಾರಕ್ಕೆ ಬಂದಿದೆ. ಇನ್ನು ಉಪಸ್ಪೀಕರ್ ಹುದ್ದೆ ಮಿತ್ರರಿಗೆ ಬಿಡಲು ಪಕ್ಷ ಸಿದ್ದವಿದ್ದು, ಈ ಕುರಿತು ಮಿತ್ರ ಜೊತೆ ಮಾತುಕತೆ ನಡೆಸುವ ಹೊಣೆಯನ್ನು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರಿಗೆ ವಹಿಸಿದೆ. ಈ ನಡುವೆ ಎನ್ಡಿಎ ಮೈತ್ರಿಕೂಟ ಸ್ಪೀಕರ್ ಹುದ್ದೆಗೆ ಸರ್ವಸಮ್ಮತಿಯ ಅಭ್ಯರ್ಥಿ ಕಣಕ್ಕೆ ಇಳಿಸಬೇಕೆಂದು ಟಿಡಿಪಿ ಹೇಳಿದ್ದರೆ, ಬಿಜೆಪಿ ನಿರ್ಧಾರ ಬೆಂಬಲಿಸುವುದಾಗಿ ಜೆಡಿಯು ಹೇಳಿದೆ. ಈ ಮುಂಚೆ ಸ್ಪೀಕರ್ ಹುದ್ದೆ ತನಗೆ ಬೇಕು ಎಂದು ಟಿಡಿಪಿ ಷರತ್ತು ವಿಧಿಸಿದೆ ಎಂದು ವರದಿಯಾಗಿತ್ತು. ಈ ನಡುವೆ ಇಂಡಿಯಾ ಮೈತ್ರಿಕೂಟ ಕೂಡಾ ಉಪಸ್ಪೀಕರ್ ಹುದ್ದೆಯನ್ನು ತನಗೆ ನೀಡಬೇಕು. ಇಲ್ಲದೇ ಹೋದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಸುಳಿವು ನೀಡಿರುವುದು ಕುತೂಹಲ ಮೂಡಿಸಿದೆ.
ಲೋಕಸಭೆಗೆ ಕಾಂಗ್ರೆಸ್ನ ಕೆ. ಸುರೇಶ್ ಹಂಗಾಮಿ ಸಭಾಧ್ಯಕ್ಷ: ಹಿರಿಯ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರನ್ನು ಲೋಕಸಭೆಯ ಹಂಗಾಮಿ ಸಭಾಧ್ಯಕ್ಷ ಎಂದು ನೇಮಿಸಲು ನಿರ್ಧರಿಸಲಾಗಿದೆ. ಜೂ.24ರಿಂದ ಆರಂಭವಾಗಲಿರವ ಅಧಿವೇಶನದಲ್ಲಿ ನೂತನ ಸಂಸದರಿಗೆ ಅವರು ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಸಂಸತ್ ಸದಸ್ಯನಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವ ಕೇರಳದ ಸುರೇಶ್ (68) ಅವರಿಗೆ ಜೂ.24ರಂದು ಸಂಸತ್ ಸಭೆ ಸೇರುವ ಮುನ್ನ ರಾಷ್ಟ್ರಪತಿ ದ್ರೌಪತಿ ಮುರ್ಮು ಪ್ರಮಾಣವಚನ ಬೋಧಿಸಲಿದ್ದಾರೆ. ಕಾಯಂ ಸಭಾಧ್ಯಕ್ಷರು ಆಯ್ಕೆ ಆಗುವವರೆಗೆ ಸುರೇಶ್ ಕೆಲಸ ಮಾಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ