ಒಂದು ಕಡತ ನಾಲ್ಕಕ್ಕಿಂತ ಹೆಚ್ಚು ಕೈಗೆ ಹೋಗುವಂತಿಲ್ಲ: ನವೆಂಬರ್‌ನಿಂದ ಹೊಸ ಯೋಜನೆ!

By Kannadaprabha NewsFirst Published Oct 29, 2021, 6:58 AM IST
Highlights

* ಕಡತ ಫಟಾಫಟ್‌ ವಿಲೇವಾರಿ: ಮೋದಿ ಸರ್ಕಾರದ ಯೋಜನೆ

* ಒಂದು ಕಡತ ನಾಲ್ಕಕ್ಕಿಂತ ಹೆಚ್ಚು ಕೈಗಳಿಗೆ ಹೋಗುವಂತಿಲ್ಲ

* ಫೈಲ್ಸ್‌ ತ್ವರಿತ ಇತ್ಯರ್ಥ: ನವೆಂಬರ್‌ನಿಂದ ಹೊಸ ವ್ಯವಸ್ಥೆ

* 6 ವರ್ಷದಲ್ಲಿ 300 ಸಭೆ ನಡೆಸಿ ನಿರ್ಧಾರ

ನವದೆಹಲಿ(ಅ.29): ಸರ್ಕಾರಕ್ಕೆ ಒಂದು ಕಡತ (file) ಕಳುಹಿಸಿದರೆ ಅದು ಮೇಜಿನಿಂದ ಮೇಜಿಗೆ ಹೋಗಿ ವಿಲೇವಾರಿಯಾಗಲು ವರ್ಷಾನುಗಟ್ಟಲೆ ಸಮಯ ಹಿಡಿಯುತ್ತದೆ ಎಂಬ ದೂರುಗಳಿಗೆ ಕಡೆಗೂ ಪರಿಹಾರ ಹುಡುಕಿರುವ ಕೇಂದ್ರ ಸರ್ಕಾರ, ಕ್ರಾಂತಿಕಾರಕ ಸುಧಾರಣೆಯನ್ನು (Big Governance Reform) ಮುಂದಿನ ತಿಂಗಳಿನಿಂದಲೇ ಜಾರಿಗೆ ತರುತ್ತಿದೆ. ಹೊಸ ನಿಯಮದ ಪ್ರಕಾರ, ಕೇಂದ್ರ ಸರ್ಕಾರದ ಯಾವುದೇ ಕಡತ 4ಕ್ಕಿಂತ ಹೆಚ್ಚು ಕೈಗಳಿಗೆ ಬದಲಾಗುವಂತಿಲ್ಲ.

ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ವೇಗ ನೀಡಲು ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ (Union Govt) ಇಂತಹದ್ದೊಂದು ಕ್ರಮಕ್ಕೆ ಮುಂದಾಗಿದೆ. ಇದರಿಂದಾಗಿ ಅನಗತ್ಯವಾಗಿ ಅಧಿಕಾರಿಗಳು ತಾವೇ ವಿಲೇವಾರಿ ಮಾಡಬಹುದಾದ ಕಡತವನ್ನು ಮೇಲಧಿಕಾರಿಗಳಿಗೆ ರವಾನಿಸುವುದು ತಪ್ಪುತ್ತದೆ. ಕಡತಗಳು ವೇಗವಾಗಿ ಇತ್ಯರ್ಥವಾಗುತ್ತವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಟೀವಿ ವಾಹಿನಿಯೊಂದು ವರದಿ ಮಾಡಿದೆ.

ಕಡತಗಳ ತ್ವರಿತ ವಿಲೇವಾರಿಗೆ 2015ರಿಂದಲೇ ಕೇಂದ್ರ ಸರ್ಕಾರ ಪ್ರಕ್ರಿಯೆ ಆರಂಭಿಸಿತ್ತು. ಆರು ವರ್ಷಗಳ ಅವಧಿಯಲ್ಲಿ 300ಕ್ಕೂ ಅಧಿಕ ಸಭೆಗಳನ್ನು ನಡೆಸಿ, ಕಡತ ಸಲ್ಲಿಕೆ ಕಗ್ಗಂಟನ್ನು ಬಗೆಹರಿಸಿತ್ತು. ಇದರ ಪರಿಣಾಮ, ಕೇಂದ್ರ ಸರ್ಕಾರದ 58 ಸಚಿವಾಲಯಗಳು ಹಾಗೂ ಇಲಾಖೆಗಳು ಕಡತ ಸಲ್ಲಿಕೆ ವಿಧಾನವನ್ನು ಪುನಾಪರಿಶೀಲಿಸಿವೆ. ಮತ್ತಷ್ಟುಇಲಾಖೆಗಳು ಆ ಪ್ರಕ್ರಿಯೆಯಲ್ಲಿವೆ. ಇದರಿಂದಾಗಿ ಕೇವಲ ನಾಲ್ಕು ಹಂತದಲ್ಲಿ ಕಡತ ವಿಲೇವಾರಿಗೆ ಮುಂದಾಗಿವೆ. ಈ ಹಿಂದೆ ಒಂದು ಕಡತ ಸಾಮಾನ್ಯವಾಗಿ 6ರಿಂದ 7 ಹಂತ ಅಥವಾ 10ರಿಂದ 12 ಹಂತದವರೆಗೂ ಹೋಗುತ್ತಿತ್ತು. ಇದನ್ನು ಮೋದಿ ಸರ್ಕಾರ ತಗ್ಗಿಸಿದ್ದು, ಇನ್ನಷ್ಟುತಗ್ಗಿಸಲು ಹೊರಟಿದೆ.

ಒಂದೇ ವರ್ಗದ ಅಧಿಕಾರಿ ತಾನು ನೋಡಿದ ಕಡತವನ್ನು ಅದೇ ವರ್ಗದ ಮತ್ತೊಬ್ಬ ಅಧಿಕಾರಿಗೆ ರವಾನಿಸುವುದನ್ನು ತಪ್ಪಿಸಲಾಗಿದೆ. ಅಧಿಕಾರ ವಿಕೇಂದ್ರೀಕರಣ ಮೂಲಕ ಆಯಾ ಹಂತದಲ್ಲೇ ಕಡತ ವಿಲೇವಾರಿಗೆ ಒತ್ತು ನೀಡಲಾಗಿದೆ.

ಮತ್ತೊಂದೆಡೆ, ಅಂತರ ಸಚಿವಾಲಯಗಳ ಕಡತ ವರ್ಗಾವಣೆಗಾಗಿ ಇ-ಕಚೇರಿ 7.0 ಆವೃತ್ತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಹೀಗಾಗಿ ಯಾವುದೇ ಸಚಿವಾಲಯಗಳು ತಮ್ಮ ಪ್ರಸ್ತಾವವನ್ನು ಆನ್‌ಲೈನ್‌ ಮೂಲಕವೇ ಕಳುಹಿಸಬಹುದು. ಉದಾಹರಣೆಗೆ, ಹಣಕಾಸು ಸಚಿವಾಲಯದ ಬಳಿ ಯಾವುದಾದರೂ ಪ್ರಸ್ತಾವ ಮಂಡಿಸಿ ಒಪ್ಪಿಗೆ ಪಡೆಯಬೇಕು ಎಂದು ಬೇರೊಂದು ಇಲಾಖೆಗೆ ಅನ್ನಿಸಿದರೆ ಇ- ಕಚೇರಿ ಮೂಲಕವೇ ಮಾಡಬಹುದು. ಇ- ಕಚೇರಿಯಲ್ಲಿ ನಿತ್ಯ 32 ಸಾವಿರ ಇ- ಕಡತಗಳು ಸೃಷ್ಟಿಯಾಗುತ್ತಿವೆ. ಸದ್ಯ 25 ಲಕ್ಷ ಇ- ಕಡತಗಳು ಇವೆ. ಇಲ್ಲಿವರೆಗೆ ಆಯಾ ಇಲಾಖೆಯೊಳಗೆ ಮಾತ್ರ ಕಡತ ರವಾನಿಸಲು ಇ- ಕಚೇರಿಯಲ್ಲಿ ಅವಕಾಶ ಇತ್ತು. ನವೆಂಬರ್‌ನಲ್ಲಿ ಎಲ್ಲ 84 ಸಚಿವಾಲಯ ಹಾಗೂ ಇಲಾಖೆಗಳು ಇ- ಕಚೇರಿ 7.0 ಬಳಸುವ ನಿರೀಕ್ಷೆ ಇದೆ.

ಮೋದಿ ರ‍್ಯಾಲಿ ಸ್ಥಳ ಸ್ಫೋಟ ಕೇಸಲ್ಲಿ 9 ಜನ ದೋಷಿಗಳು

2013ರ ಪಟನಾ ಸರಣಿ ಸ್ಪೋಟ ಪ್ರಕರಣದ 10 ಆರೋಪಿಗಳ ಪೈಕಿ 9 ಜನರನ್ನು ದೋಷಿಗಳೆಂದು ಘೋಷಿಸಿರುವ ಸ್ಥಳೀಯ ಎನ್‌ಐಎ ವಿಶೇಷ ನ್ಯಾಯಾಲಯ, ಓರ್ವನನ್ನು ಸಾಕ್ಷ್ಯಾಧಾರಗಳ ಕೊರತೆ ಕಾರಣ ಖುಲಾಸೆಗೊಳಿಸಿದೆ. ದೋಷಿಗಳಿಗೆ ನ.1ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಗುವುದು.

ಆಗಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದ ನರೇಂದ್ರ ಮೋದಿ, 2013ರ ಅ.27ರಂದು ಪಟನಾದಲ್ಲಿ ಆಯೋಜಿಸಿದ್ದ ಹೂಂಕರ್‌ ರಾರ‍ಯಲಿಯಲ್ಲಿ ಭಾಗವಹಿಸಿದ್ದರು. ಅದೇ ದಿನ ರಾರ‍ಯಲಿ ಸ್ಥಳದಲ್ಲಿ ಸರಣಿ ಸ್ಫೋಟ ನಡೆದಿತ್ತು. ಈ ವೇಳೆ ನಡೆದ ಕಾಲ್ತುಳಿತದಲ್ಲಿ 6 ಜನರು ಸಾವನ್ನಪ್ಪಿದ್ದರು.

ಘಟನೆಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತಿರಲಿಲ್ಲ. ಆದರೆ ಪ್ರಕರಣ ಸಂಬಂಧ ಬಂಧಿತ 10 ಜನರು ನಿಷೇಧಿತ ಸಿಮಿ ಮತ್ತು ಇಂಡಿಯನ್‌ ಮುಜಾಹಿದಿನ್‌ ಕಾರ್ಯಕರ್ತರಾಗಿದ್ದರು ಎಂದು ತನಿಖೆ ವೇಳೆ ಕಂಡುಬಂದಿತ್ತು.

click me!