ಶುಕ್ರವಾರದ ನಮಾಜ್‌ ಬೆನ್ನಲ್ಲೇ, ಜ್ಞಾನವಾಪಿ ವಿಚಾರದಲ್ಲಿ ಜೈಲ್‌ ಭರೋಗೆ ಕರೆ ನೀಡಿದ ಮುಸ್ಲಿಂ ಧರ್ಮಗುರು!

By Santosh NaikFirst Published Feb 9, 2024, 11:39 PM IST
Highlights

ತೌಕೀರ್ ರಝಾ ಅವರನ್ನು ಕೆಲ ಕಾಲ ಬಂಧಿಸಲಾಗಿದ್ದರೆ, ಇನ್ನೊಂದೆಡೆ ಬರೇಲಿ ಆಡಳಿತವು ಪರಿಸ್ಥಿತಿಯನ್ನು ಹತೋಟಿಗೆ ತರಲು ಎರಡು ಗಂಟೆಗಳ ಕಾಲ ತೆಗೆದುಕೊಂಡಿತು.
 

ನವದೆಹಲಿ (ಫೆ.9): ಜ್ಞಾನವಾಪಿ ವಿಚಾರದಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು 'ಜೈಲ್ ಭರೋ' ಕರೆ ನೀಡಿದ ಮುಸ್ಲಿಂ ಧರ್ಮಗುರು ತೌಕೀರ್ ರಜಾ ಅವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲಿಯೇ ಶುಕ್ರವಾರ ಉತ್ತರ ಪ್ರದೇಶದ ಬರೇಲಿಯಲ್ಲಿ ಕಲ್ಲು ತೂರಾಟ ನಡೆದಿದೆ. ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ತೌಕೀರ್ ರಜಾ, ದೇಶದಲ್ಲಿ ಮುಸ್ಲಿಮರ ವಿರುದ್ಧ ದಬ್ಬಾಳಿಕೆ ನಡೆಯುತ್ತಿದೆ. ಇದರ ವಿರುದ್ಧ ಪ್ರತಿಭಟನೆ ಮಾಡಿ ಪೊಲೀಸರಿಂದ ಬಂಧನಕ್ಕೆ ಒಳಪಡುವಂತೆ ಮನವಿ ಮಾಡಿದ್ದರು. ಶುಕ್ರವಾರ ಮಧ್ಯಾಹ್ನ ನಮಾಜ್‌ಗೂ ಮುನ್ನ ತೌಕೀರ್ ರಜಾ ಅವರ ‘ಜೈಲ್ ಭರೋ’ ಮೆರವಣಿಗೆ ನಡೆಯಿತು. ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಮದರಸಾವನ್ನು ಕೆಡವಿದ್ದಕ್ಕೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಉತ್ತರಾಖಂಡದಲ್ಲಿ ಮುಸ್ಲಿಮರು ಕಲ್ಲುತೂರಾಟ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಕೆಲ ಕಾಲ ಬಂಧನದಲ್ಲಿ ಇರಿಸಿದ ಬಳಿಕ ತೌಕೀರ್‌ ರಾಜಾ ಅವರನ್ನು ಬಿಡುಗಡೆ ಮಾಡಲಾಗಿದೆ.

ತೌಕೀರ್‌ ರಾಜಾ ಅವರ ಜೈಲ್‌ ಭರೋ ಕರೆ ನೀಡಿದ ಬೆನ್ನಲ್ಲಿಯೇ ಪೊಲೀಸರು ಕೂಡ ಅಲರ್ಟ್‌ ಆಗಿದ್ದರು. ಸಹಾಯಕ ಎಸ್‌ಪಿ ರಾಹುಲ್‌ ಭಟ್ಟಿ, ಇದಕ್ಕಾಗಿ 1 ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಝನೆ ಮಾಡಿದ್ದು ಮಾತ್ರವಲ್ಲದೆ, ಪ್ರತಿ ಮಸೀದಿಯ ಬಳಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು ಎಂದಿದ್ದಾರೆ. 'ಯಾವುದೇ ರೀತಿಯ ಬುಲ್ಡೋಜರ್‌ ಕ್ರಮವನ್ನು ನಾವಿನ್ನು ಸಹಿಸೋದಿಲ್ಲ. ಸುಪ್ರೀಂ ಕೋರ್ಟ್‌ ನಮ್ಮ ಕಾಳಜಿ ವಹಿಸದೇ ಇದ್ದಲ್ಲಿ, ನಮ್ಮ ಕಾಳಜಿಯನ್ನು ನಾವೇ ಮಾಡಿಕೊಳ್ಳುತ್ತೇನೆ. ನಾನೀಗ ನಮಾಜ್‌ ಮಾಡಲು ಹೋಗುತ್ತೇನೆ. ಆ ಬಳಿಕ ನಾನು ಬಂಧನಕ್ಕೆ ಒಳಗಾಗುತ್ತೇನೆ ಎಂದು ತೌಕೀರ್‌ ರಾಜಾ ಜೈಲ್‌ ಭರೋ ಆಂದೋಲನಕ್ಕೂ ಮುನ್ನ ಹೇಳಿದ್ದರು.

ವಾರಣಾಸಿ ನ್ಯಾಯಾಲಯವು ಜನವರಿ 31 ರಂದು ನೀಡಿದ ಮಹತ್ವದ ತೀರ್ಪಿನಲ್ಲಿ ಜ್ಞಾನವಾಪಿ ಮಸೀದಿಯ ವ್ಯಾಸ್ ಜಿ ಕಾ ತಹಖಾನಾದಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದೆ. ಮುಸ್ಲಿಂ ಕಡೆಯವರು ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಇತ್ತೀಚಿನ ಭಾಷಣದಲ್ಲಿ ಈ ಬಗ್ಗೆ ಮಾತನಾಡಿದ್ದು,  ಅಯೋಧ್ಯೆಯೊಂದಿಗೆ ಕಾಶಿ ಮತ್ತು ಮಥುರಾ ಹಿಂದೂ ನಂಬಿಕೆಯ ಮೂರು ಕೇಂದ್ರಗಳ ಭಾಗವಾಗಿರುವುದರಿಂದ ಇಲ್ಲಿ ದೇವಾಲಯಗಳನ್ನು ನಿರ್ಮಿಸಲಾಗುವುದು ಎಂದು ಉತ್ತರ ಪ್ರದೇಶದ ವಿಧಾನಸಭೆಯಲ್ಲಿಯೇ ಹೇಳಿದ್ದರು.

ಜೈಲ್ ಭರೋ ಕರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಇಸ್ಲಾಮಿಯಾ ಕಾಲೇಜ್ ಮೈದಾನವನ್ನು ಸೀಲ್‌ ಮಾಡಿದ್ದರು. ಇಲ್ಲಿಯೇ ತೌಕೀರ್ ರಜಾ ತನ್ನ ಅನುಯಾಯಿಗಳನ್ನು ಒಟ್ಟುಗೂಡಬೇಕು ಎಂದು ಹೇಳಿದ್ದರು. ಹಾಗಿದ್ದರೂ ಮೈದಾನದ ಬಳಿಕ ಸಾವಿರಾರು ಬೆಂಬಲಿಗರು ಜಮಾಯಿಸಿದ್ದರು. ಕೊನೆಗೆ ಪೊಲೀಸರು ಅವರ ಮನವೊಲಿಸಿ ಮನೆಗಳಿಗೆ ತೆರಳುವಂತೆ ಮಾಡಲು ಎರಡು ಗಂಟೆ ತೆಗೆದುಕೊಂಡರು. ಬರೇಲ್ವಿ ಧರ್ಮಗುರು ಮೌಲಾನಾ ತೌಕೀರ್ ರಜಾ ಅವರು ಸುನ್ನಿ ಇಸ್ಲಾಂನ ಬರೇಲ್ವಿ ಪಂಥದ ಸಂಸ್ಥಾಪಕ ಅಹ್ಮದ್ ರಜಾ ಖಾನ್ ಬರೇಲ್ವಿ ಅವರ ನೇರ ವಂಶಸ್ಥರಾಗಿದ್ದಾರೆ.

click me!