
ನವದೆಹಲಿ (ನ.25): ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಾಗಿರಲಿಲ್ಲ, ಅದು ಕೋಟ್ಯಂತರ ಜನರ ಭಾವನೆಗಳ ಮಹಾಪೂರವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರದ ಶಿಖರದ ಮೇಲೆ 'ಧರ್ಮ ಧ್ವಜ' ಹಾರಿಸಿ, ದೇವಸ್ಥಾನದ ನಿರ್ಮಾಣ ಕಾರ್ಯ ಪೂರ್ಣಗೊಂಡಿತು ಎಂದು ಇಡೀ ಜಗತ್ತಿಗೆ ಸಾರಿದ ಆ ಕ್ಷಣ, ಮೋದಿಯವರಲ್ಲಿನ ಒಬ್ಬ ಕಠಿಣ ನಾಯಕನ ಹಿಂದೆ ಅಡಗಿರುವ ಭಕ್ತನ ಮೃದು ಮನಸ್ಸನ್ನು ವಿಶ್ವಕ್ಕೆ ತೋರಿಸಿತು.
ಧ್ವಜ ಹಾರಾಟದ ನಂತರ, ಪ್ರಧಾನಿ ಮೋದಿ ಕಣ್ಣು ಮುಚ್ಚಿ ಕೈ ಜೋಡಿಸಿ ರಾಮ ದೇವರ ಶಿಖರಕ್ಕೆ ನಮಸ್ಕರಿಸಿದಾಗ, ಅವರ ಕೈಗಳು ಮತ್ತು ಬೆರಳುಗಳು ಸೂಕ್ಷ್ಮವಾಗಿ ನಡುಗುತ್ತಿರುವುದು ಎಲ್ಲರ ಗಮನಸೆಳೆಯಿತು.
ಅವರ ಕೈಗಳು ನಡುಗುತ್ತಿರುವುದು ಕೇವಲ ದೈಹಿಕ ಪ್ರತಿಕ್ರಿಯೆಗಿಂತಲೂ ಹೆಚ್ಚಿನದಾಗಿತ್ತು. ಹಿಂದೂ ಧರ್ಮದ ಸಿದ್ಧಾಂತದ ಪ್ರಕಾರ, ಇದನ್ನು 'ಸಾತ್ವಿಕ ಭಾವ' ಎಂದು ಕರೆಯಲಾಗುತ್ತದೆ. ಒಬ್ಬ ಮನುಷ್ಯ ಅತಿಯಾದ ಭಕ್ತಿ, ಆನಂದ ಅಥವಾ ಭಾವನಾತ್ಮಕತೆಯ ಉತ್ತುಂಗಕ್ಕೆ ತಲುಪಿದಾಗ, ಮಾತು ಹೊರಡದೇ ಹೋದಾಗ ದೇಹವು ತನ್ನ ನಿಯಂತ್ರಣವನ್ನು ಕಳೆದುಕೊಂಡು ಈ ರೀತಿ ಪ್ರತಿಕ್ರಿಯಿಸುತ್ತದೆ.
ಮೋದಿ ಅವರು ಅಲ್ಲಿ ದೇಶದ ಪ್ರಧಾನಿಯಾಗಿರದೆ, ತಮ್ಮ ಸೇವೆಯನ್ನು ರಾಮನ ಪಾದಕ್ಕೆ ಅರ್ಪಿಸಿದ ಒಬ್ಬ ಪರಮ ಭಕ್ತನಾಗಿ ನಿಂತಿದ್ದರು ಎಂಬುದಕ್ಕೆ ಈ ನಡುಗುವ ಕೈಗಳೇ ಸಾಕ್ಷಿ. ಅಯೋಧ್ಯೆಯ ರಾಮಮಂದಿರ 500 ವರ್ಷಗಳ ಸುದೀರ್ಘ ಹೋರಾಟದ ಫಲ. ಕೋಟ್ಯಂತರ ಹಿಂದೂಗಳ ಆಕಾಂಕ್ಷೆ ಮತ್ತು ಜವಾಬ್ದಾರಿಯನ್ನು ಹೊತ್ತಿದ್ದ ಮೋದಿ, ಆ ಧ್ವಜವನ್ನು ಶಿಖರದ ಮೇಲೆ ಹಾರಾಡುವುದನ್ನು ನೋಡಿದಾಗ, ಅವರ ಮನಸ್ಸಿನ ಮೇಲಿದ್ದ ಭಾರ ಇಳಿದುಹೋಯಿತು.
"ನನ್ನ ಕರ್ತವ್ಯ ಮುಗಿಯಿತು, ರಾಮನಿಗೊಂದು ಭವ್ಯ ಸೂರು ಸಿಕ್ಕಿತು" ಎಂಬ ಸಾರ್ಥಕ ಭಾವ ಅವರಲ್ಲಿ ಮೂಡಿದ್ದಿರಬಹುದು. ಈ ನಿರಾಳ ಮತ್ತು ಧನ್ಯತೆಯ ಭಾವವೇ ಅವರ ಕಣ್ಣಲ್ಲಿ ನೀರಾಗಿ, ಕೈಗಳಲ್ಲಿ ನಡುಕವಾಗಿ ಹೊರಹೊಮ್ಮಿತ್ತು. ಸಾಮಾನ್ಯವಾಗಿ, ಪ್ರಧಾನಿ ಮೋದಿಯವರನ್ನು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ, ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸದ ಗಟ್ಟಿಗ ನಾಯಕನಾಗಿ ನೋಡುತ್ತೇವೆ. ಆದರೆ ಅಯೋಧ್ಯೆಯಲ್ಲಿ ಕಂಡದ್ದು ಒಂದು ವಿಭಿನ್ನ ವ್ಯಕ್ತಿತ್ವ.
ಅವರು ಅಲ್ಲಿ ರಾಮನ ಮುಂದೆ ಒಂದು ಕ್ಷಣ ಮಗುವಿನಂತೆ ಭಾವುಕರಾಗಿದ್ದರು. ಆ ನಡುಕದಲ್ಲಿ ಕಂಡದ್ದು ಮೋದಿಯವರ ವೈಯಕ್ತಿಕ ಭಕ್ತಿ ಮಾತ್ರವಲ್ಲ; ರಾಮ ಮಂದಿರಕ್ಕಾಗಿ ತಳಮಳಿಸುತ್ತಿದ್ದ ಪ್ರತಿಯೊಬ್ಬ ಭಾರತೀಯನ ಹೃದಯದ ಸ್ಪಂದನ. ಈ ಐತಿಹಾಸಿಕ ಕ್ಷಣದಲ್ಲಿ, ಮೋದಿ ಅವರು ನಡುಗುವ ಕೈಗಳಲ್ಲಿ ಮಾಡಿದ ಆ ಸಮರ್ಪಣಾ ಭಾವದ ನಮಸ್ಕಾರ ಇತಿಹಾಸದ ಪುಟಗಳಲ್ಲಿ ರಾಮರಾಜ್ಯದ ಸಾಕ್ಷಿಯಾಗಿ ಶಾಶ್ವತವಾಗಿ ಉಳಿಯುತ್ತದೆ. ಜೈ ಶ್ರೀರಾಮ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ