#UP22WithAsianetNews: ಯೋಗಿ, ಅಖಿಲೇಶ್ ನಡುವೆ ಬಿಗ್‌ ಫೈಟ್!

By Suvarna NewsFirst Published Aug 18, 2021, 12:02 PM IST
Highlights

* ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಒಂದೇ ವರ್ಷ

* ರಾಜ್ಯದ ಜನರ ಅಭಿಪ್ರಾಯವೇನು? ಯಾರ ಕಡೆಗಿದೆ ಮತದಾರನ ಒಲವು

* ಯೋಗಿ ಸರ್ಕಾರದ ಬಗ್ಗೆ ನಾಗರಿಕರು ಹೇಳೋದೇನು? 

* ಯೋಗಿ, ಅಖಿಲೇಶ್, ಮಾಯಾವತಿ ಉತ್ತರ ಪ್ರದೇಶ ಜನರ ಮನಗೆದ್ದವರಾರು

* ಏಷ್ಯಾನೆಟ್ ಸುವರ್ಣನ್ಯೂಸ್ -ಜನ್ ಕಿ ಬಾತ್ ಸಮೀಕ್ಷೆ 2021

 ಲಕ್ನೋ(ಆ.18): ಭಾರತದ ರಾಜಕೀಯದಲ್ಲಿ ಉತ್ತರ ಪ್ರದೇಶ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಿರುವಾಗ 2022ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇಡೀ ದೇಶದ ಚಿತ್ತ ಈ ಚುನಾವಣೆ ಮೇಲೆ ನಿಂತಿದೆ. ಈ ನಡುವೆ ಅತ್ತ ರಾಜಕೀಯ ಪಕ್ಷಗಳೂ ಮತದಾರರನ್ನು ಓಲೈಸುವ ಕಾಯಕ ವರ್ಷಕ್ಕೂ ಮೊದಲೇ ಆರಂಭಿಸಿವೆ. ಒಂದೆಡೆ ಬಿಜೆಪಿ ಅಧಿಕಾರ ಬಿಟ್ಟು ಕೊಡದಿರಲು ತಂತ್ರ ಹೂಡುತ್ತಿದ್ದರೆ, ಅತ್ತ ಪ್ರತಿ ಪಕ್ಷಗಳಾದ ಸಮಾಜವಾದಿ ಪಾರ್ಟಿ, ಬಹುಜನ್‌ ಸಮಾಜ ಪಾರ್ಟಿ, ಕಾಂಗ್ರೆಸ್‌ ಸೇರಿ ಇನ್ನುಳಿದ ಕೆಲವು ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ತಮ್ಮ ಅಧಿಪತ್ಯ ಸ್ಥಾಪಿಸಲು ಸಿದ್ಧತೆ ನಡೆಸುತ್ತಿವೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಮಧ್ಯೆ ನಿಮ್ಮ ಏಷ್ಯಾನೆಟ್‌ ನ್ಯೂಸ್‌ ಉತ್ತರ ಪ್ರದೇಶ ಜನರು ಏನು ಬಯಸುತ್ತಾರೆ? ಅವರ ಒಲವು ಯಾರ ಕಡೆಗಿದೆ? ರಾಮ ಮಂದಿರ ವಿಚಾರ ಎಷ್ಟು ಪರಿಣಾಮ ಬೀರಿದೆ? ಜಾತಿ ಲೆಕ್ಕಾಚಾರ ಹೇಗಿದೆ ಎಂಬಿತ್ಯಾದಿ ಕುರಿತು ಚುನಾವಣೆಗಿನ್ನು 7-8 ತಿಂಗಳು ಇರುವಾಗಲೇ ಜನರ ಮೂಡ್ ಅರಿತು ಕೊಳ್ಳಲು ಸಮೀಕ್ಷೆ ನಡೆಸಿದೆ.

"

ಯುಪಿ ಎಲೆಕ್ಷನ್‌ಗೂ ಮುನ್ನ 20 ಸಾವಿರ ಕೋಟಿ ರೂ. ಪ್ರಾಜೆಕ್ಟ್ ಪರಿಶೀಲಿಸಿದ ಮೋದಿ!

ಆರು ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹ

ಏಷ್ಯಾನೆಟ್‌- ಜನ್ ಕಿ ಬಾತ್ ನಡೆಸಿದ ಈ ಸಮೀಕ್ಷೆ ಉತ್ತರ ಪ್ರದೇಶ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸುವ ಆರು ಪ್ರದೇಶಗಳ ಜನರ ಅಭಿಪ್ರಾಯ ಸಂಗ್ರಹಿಸಿದೆ. ಈ ಮೂಲಕ ಉತ್ತರ ಪ್ರದೇಶ ಜನತೆಯ ನಾಡಿಮಿಡಿತ ಅರಿತುಕೊಳ್ಳುವ ಹಾಗೂ ರಾಜ್ಯದಲ್ಲಿ ಮುಂದೆ ಅಧಿಕಾರಕ್ಕೇರುವವರು ಯಾರು ಎಂಬುವುದನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸಿದೆ.

ಪ್ರಸ್ತುತ ಸಿಎಂ ಯೋಗಿ ಹಾಗೂ ಇಲ್ಲಿನ ಪ್ರಮುಖ ರಾಜಕೀಯ ನಾಯಕರಾದ ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್, ಬಹುಜನ್‌ ಸಮಾಜ ಪಾರ್ಟಿಯ ಮಾಯವತಿ ಈ ಮೂವರ ಬಗ್ಗೆ ಜನರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಜೊತೆಗೆ ಈಗಿನ ಸರ್ಕಾರದ ವೈಫಲ್ಯಗಳೇನು? ಯಾವ ವಿಚಾರಗಳನ್ನು ಉತ್ತಮವಾಗಿ ನಿಭಾಯಿಸಿದೆ? ಎಂಬುವುದನ್ನೂ ಬಿಡಿಸಿಟ್ಟಿದ್ದಾರೆ.

 

ಉತ್ತರ ಪ್ರದೇಶ ಜನತೆಗೆ 14 ಪ್ರಶ್ನೆಗಳು

ತಲಾ 4200 ಜನರ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ ಭ್ರಷ್ಟಾಚಾರ, ನೆಚ್ಚಿನ ನಾಯಕ, ಜಾತಿ ವಿಚಾರ, ರಾಮ ಮಂದಿರ, ಕೃಷಿ ಕಾನೂನು, ಕೊರೋನಾ ನಿರ್ವಹಣೆ, ಕಾನೂನು ಹಾಗೂ ಸುವ್ಯವಸ್ಥೆ ಈ ವಿಚಾರಗಳನ್ನು ಮುಂದಿಟ್ಟುಕೊಂಡು ಒಟ್ಟು 14 ಪ್ರಮುಖ ಪ್ರಶ್ನೆಗಳನ್ನು ಕೇಳಲಾಗಿತ್ತು. ತಮ್ಮ ಮುಂದಿನ ಸಿಎಂ ಹೇಗಿರಬೇಕು? ಯಾರಾಗಬೇಕು? ಜನರ ಜಾತಿ ಒಲವು ಯಾರ ಕಡೆಗಿದೆ? ಅಯೋಧ್ಯೆಲ್ಲಿ ರಾಮ ಮಂದಿರ ನಿರ್ಮಾಣ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಷ್ಟು ಮಹತ್ವದ ಪಾತ್ರ ವಹಿಸಲಿದೆ, ಎಂಬ ಬಗ್ಗೆ ಜನರು ಕೊಟ್ಟ ಅಭಿಪ್ರಾಯ, ಅವರು ಕೊಟ್ಟ ಉತ್ತರವೂ ಅಷ್ಟೇ ಅಚ್ಚರಿ ಹಾಗೂ ಕುತೂಹಲ ಮೂಡಿಸಿದೆ.

ಉತ್ತರ ಪ್ರದೇಶದಲ್ಲಿ ಗೆಲ್ಲಲು ಪ್ರಧಾನ ಮಂತ್ರಿ ಹೆಸರೇ ಸಾಕು: ಮೋದಿ ಆಪ್ತನ ಮಾತು!

ಸಮೀಕ್ಷೆ ಫಲಿತಾಂಶ ಯಾವಾಗ?

ಏಷ್ಯಾನೆಟ್‌- ಜನ್ ಕಿ ಬಾತ್ ನಡೆಸಿದ ಈ ಸಮೀಕ್ಷೆ ಫಲಿತಾಂಶ ಮುಂದಿನ ಸಿಎಂ ಯಾರಾಗಲಿದ್ದಾರೆಂಬ ಸ್ಪಷ್ಟ ಚಿತ್ರಣ ನೀಡಿದೆ. ಈ ಫಲಿತಾಂಶ ಇಂದು, ಬುಧವಾರ ಸಂಜೆ 5 ಗಂಟೆಗೆ ಬಹಿರಂಗವಾಗಲಿದೆ. ಉತ್ತರ ಪ್ರದೇಶ ಜನರ ಮೂಡ್‌ ಹೇಗಿದೆ? ಮತ್ತೆ ಯೋಗಿಯೇ ಸಿಎಂ ಆಗ್ತಾರಾ ಅಥವಾ ಅಧಿಕಾರ ಬೇರೆ ಪಕ್ಷಕ್ಕೆ ಹಸ್ತಾಂತರವಾಗುತ್ತಾ? ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಪಡೆಯಲು ನೀವು ಕೊಂಚ ಕಾಯಲೇಬೇಕಿದೆ. 

click me!