ಈಗ ಪೂರ್ವ ಕರಾವಳಿಗೆ ‘ಯಾಸ್‌’ ಚಂಡಮಾರುತದ ಭೀತಿ!

By Kannadaprabha NewsFirst Published May 20, 2021, 9:01 AM IST
Highlights

* ಈಗ ಪೂರ್ವ ಕರಾವಳಿಗೆ ‘ಯಾಸ್‌’ ಚಂಡಮಾರುತದ ಭೀತಿ

* 26, 27ಕ್ಕೆ ಬಂಗಾಳ, ಒಡಿಶಾಕ್ಕೆ ಸೈಕ್ಲೋನ್‌ ದಾಳಿ ಸಂಭವ

* ಮೇ 22ರ ವೇಳೆಗೆ ಅಂಡಮಾನ್‌ನಲ್ಲಿ ವಾಯುಭಾರ ಕುಸಿತ

ನವದೆಹಲಿ(ಮೇ.20): ತೌಕ್ಟೆಚಂಡಮಾರುತದಿಂದಾಗಿ ಕೇರಳದಿಂದ ಗುಜರಾತ್‌ವರೆಗಿನ ಪಶ್ಚಿಮ ಕರಾವಳಿ ನಲುಗಿದ ಬೆನ್ನಲ್ಲೇ ಇದೀಗ ಪೂರ್ವ ಕರಾವಳಿಗೂ ಚಂಡಮಾರುತ ಭೀತಿ ಆವರಿಸಿದೆ. ಮೇ 26, 27ರ ವೇಳೆಗೆ ಪಶ್ಚಿಮ ಬಂಗಾಳ ಹಾಗೂ ಒಡಿಶಾ ಕರಾವಳಿಗೆ ‘ಯಾಸ್‌’ ಚಂಡಮಾರುತ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯಾಸ್‌ ಎಂಬ ಹೆಸರನ್ನು ಒಮಾನ್‌ ಸರ್ಕಾರ ನೀಡಿದೆ. ಯಾಸ್‌ ಎಂದರೆ ನಿರಾಶೆ ಎಂದರ್ಥ.

ಮೇ 22ರ ವೇಳೆಗೆ ಉತ್ತರ ಅಂಡಮಾನ್‌ ಸಮುದ್ರ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಪೂರ್ವ- ಕೇಂದ್ರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಇದು ಹಂತಹಂತವಾಗಿ 72 ತಾಸುಗಳಲ್ಲಿ ಚಂಡಮಾರುತ ಸ್ವರೂಪ ಪಡೆದುಕೊಳ್ಳಲಿದೆ. ನಂತರ ವಾಯವ್ಯ ದಿಕ್ಕಿನತ್ತ ಸಾಗಿ 26ರ ಸಂಜೆ ವೇಳೆಗೆ ಪಶ್ಚಿಮ ಬಂಗಾಳ- ಒಡಿಶಾ ಕರಾವಳಿಗೆ ತಲುಪುವ ಸಂಭವ ಇದೆ ಎಂದು ಹವಾಮಾನ ಇಲಾಖೆಯ ಚಂಡಮಾರುತ ಮುನ್ಸೂಚನಾ ವಿಭಾಗ ಎಚ್ಚರಿಸಿದೆ.

ಮುಂಗಾರು ಪೂರ್ವ ಮಾಸಗಳಾದ ಏಪ್ರಿಲ್‌- ಮೇನಲ್ಲಿ ದೇಶದ ಪೂರ್ವ ಹಾಗೂ ಪಶ್ಚಿಮ ಕರಾವಳಿಗೆ ಸಾಮಾನ್ಯವಾಗಿ ಚಂಡಮಾರುತಗಳು ಅಪ್ಪಳಿಸುತ್ತವೆ. 2020ರಲ್ಲಿ ಆಂಫಾನ್‌ ಹಾಗೂ ನಿಸರ್ಗ ಎಂಬ ಚಂಡಮಾರುತಗಳು ಎರಡೂ ಕರಾವಳಿಗೆ ದಾಳಿ ಮಾಡಿ, ಅಪಾರ ಹಾನಿ ಸೃಷ್ಟಿಸಿದ್ದವು.

click me!