
- ಅಧಿಕಾರಕ್ಕೆ ಬಂದರೆ 6 ತಿಂಗಳಲ್ಲಿ ಯುಸಿಸಿ ಜಾರಿ
- ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ
ಕೋಲ್ಕತಾ (ಏ.11) ಆರು ತಿಂಗಳಲ್ಲಿ ಏಕರೂಪದ ನಾಗರಿಕ ಸಂಹಿತೆ(ಯುಸಿಸಿ) ಜಾರಿ, ಕರ್ನಾಟಕದಲ್ಲಿ ಮಹಿಳೆಯರಿಗೆ ನೀಡುವ ಮಾಸಿಕ ಹಣಕಾಸಿನ ನೆರವು, ಮಹಿಳೆಯರಿಗೆ ಬಸ್ಸಲ್ಲಿ ಉಚಿತ ಪ್ರಯಾಣ, ಸರ್ಕಾರಿ ನೌಕರಿಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು, ನಿರುದ್ಯೋಗಿ ಯುವಕರಿಗೆ ಮಾಸಿಕ 3000 ರು., ರೈತರು ಹಾಗೂ ಸರ್ಕಾರಿ ನೌಕರರ ಕಲ್ಯಾಣ ಕಾರ್ಯಕ್ರಮ, ಜಾನುವಾರುಗಳ ಕಳ್ಳಸಾಗಣೆ ತಡೆ, ಒತ್ತುವರಿದಾರರು, ಒಳನುಸುಳುಕೋರರಿಗೆ ನೀಡಿದ್ದ ಸೌಲಭ್ಯ ಕಟ್ ಮತ್ತು ಅವರಿಂದ ಸರ್ಕಾರಿ ಜಮೀನು ವಾಪಸ್ ಪಡೆಯಲು ಕ್ರಮ ಕೈಗೊಳ್ಳುವ ಭರವಸೆ ಒಳಗೊಂಡ ಪ್ರಣಾಳಿಕೆಯನ್ನು ಪಶ್ಚಿಮ ಬಂಗಾಳಕ್ಕಾಗಿ ಬಿಜೆಪಿ ಬಿಡುಗಡೆ ಮಾಡಿದೆ.
ಏ.23ರಿಂದ ಪಶ್ಚಿಮ ಬಂಗಾಳ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ಶುಕ್ರವಾರ ಬಿಜೆಪಿ ಪ್ರಣಾಳಿಕೆಯಾದ ‘ಸಂಕಲ್ಪ ಪತ್ರ’ವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದರು. ಈ ಪ್ರಣಾಳಿಕೆಯನ್ನು ಅವರು ಸೋನಾರ್ ಬಾಂಗ್ಲಾ(ಸುವರ್ಣ ಬಾಂಗ್ಲಾ) ಕನಸಿನ ಕಡೆಗಿನ ದಾರಿದೀಪ ಎಂದು ಕರೆದಿದ್ದಾರೆ.ಆರು ತಿಂಗಳಲ್ಲಿ ಜಾರಿ:
ಈಗಾಗಲೇ ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿ ಮಾಡಲಾಗಿದೆ. ಪಶ್ಟಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಆರೇ ತಿಂಗಳಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿ ಮಾಡಲಾಗುವುದು. ರಾಜ್ಯದ ಎಲ್ಲಾ ನಾಗರಿಕರಿಗೆ ಏಕರೀತಿಯ ಕಾನೂನು ಜಾರಿ ಮಾಡಲಾಗುವುದು ಎಂದು ಶಾ ತಿಳಿಸಿದರು. ಜೊತೆಗೆ ಸಿಸಿಗೆ ಅಲ್ಪಸಂಖ್ಯಾತರಿಂದ ವ್ಯಕ್ತವಾಗುತ್ತಿರುವ ಟೀಕೆಗಳ ಹಿನ್ನೆಲೆಯಲ್ಲಿ, ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಧರ್ಮವನ್ನು ಪಾಲಿಸುವ ಸ್ವಾತಂತ್ರ್ಯ ಕಲ್ಪಿಸುವ ಕಾನೂನನ್ನು ಬಿಜೆಪಿ ಜಾರಿ ತರಲಿದೆ ಎಂದರು.
ಇತರೆ ಪ್ರಮುಖ ಘೋಷಣೆಗಳು
- ನಿರುದ್ಯೋಗಿ ಯುವಜನರಿಗೆ ಮಾಸಿಕ 3 ಸಾವಿರ ರು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಹೆಚ್ಚುವರಿ 15 ಸಾವಿರ ರು. ನೆರವು
- ಶಾಲಾ ನೇಮಕ ಹಗರಣ, ಇತರೆ ಭ್ರಷ್ಟಾಚಾರ ಪ್ರಕರಣಗಳಿಂದಾಗಿ ಕೆಲಸ ಕಳೆದುಕೊಂಡವರಿಗೆ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು 5 ವರ್ಷ ವಯೋಮಿತಿ ಸಡಿಲಿಕೆ
- ಸರ್ಕಾರಿ ನೇಮಕಾತಿಯಲ್ಲಿ ಪಾರದರ್ಶಕ ಹಾಗೂ ಮೆರಿಟ್ ಆಧಾರಿತ ಕ್ರಮಗಳ ಜಾರಿ, ಅರ್ಹ ಅಭ್ಯರ್ಥಿಗಳಿಗಷ್ಟೇ ಸರ್ಕಾರಿ ನೌಕರಿ ಸಿಗುವಂತೆ ನೋಡಿಕೊಳ್ಳುವುದು
- ಕೇಂದ್ರ- ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ವ್ಯತ್ಯಾಸ ಸರಿಪಡಿಸುವುದು, ಏಳನೇ ವೇತನ ಆಯೋಗವನ್ನು ಪಕ್ಷ ಅಧಿಕಾರಕ್ಕೆ ಬಂದ 45 ದಿನಗಳಲ್ಲಿ ಜಾರಿ
- ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವಾರ್ಷಿಕ 9 ಸಾವಿರ ರು. ಸಹಾಯಧನ. ವಂದೇ ಮಾತರಂ ಮ್ಯೂಸಿಯಂ ಸ್ಥಾಪನೆ
- ಎಐಐಎಂಎಸ್, ಐಐಟಿ, ಐಐಎಂ ಹಾಗೂ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನಿಂಗ್ ಅನ್ನು ಉತ್ತರ ಬಂಗಾಳದ ಜಿಲ್ಲೆಗಳಲ್ಲಿ ಸ್ಥಾಪನೆ
- ಸಂದೇಶ್ಖಾಲಿಯಂಥ ಘಟನೆ ಸೇರಿ ಮಹಿಳೆಯರ ಮೇಲಿನ ದೌರ್ಜನ್ಯ, ರಾಜಕೀಯ ಹಿಂಸೆ ತನಿಖೆಗೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸಮಿತಿ ರಚನೆ
- ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ, ರಾಜ್ಯಾದ್ಯಂತ ಹೊಸ ಟೌನ್ಶಿಪ್ ಆರಂಭ
- ಡಾರ್ಜಲಿಂಗ್ ಅನ್ನು ಪಾರಂಪರಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿ
- ರವೀಂದ್ರ ನಾಥ ಠಾಗೋರ್ ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರ ಸ್ಥಾಪನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ