
ಒಟ್ಟಾವಾ (ಅ.31): ‘ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಹಿನ್ನೆಲೆ ಇಲ್ಲಿನ ಒಟ್ಟಾವಾದ ಪಾರ್ಲಿಮೆಂಟ್ ಹಿಲ್ನಲ್ಲಿ ಭಾರತೀಯರ ಸಮುದಾಯದವರು ಆಚರಿಸಬೇಕಿದ್ದ ದೀಪಾವಳಿ ಆಚರಣೆಯನ್ನು ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ ರದ್ದುಗೊಳಿಸಿದ್ದಾರೆ. ಇದರಿಂದ ಕೆನಡಾದಲ್ಲಿರುವ ಭಾರತೀಯರಿಗೆ ತೀವ್ರ ಹಿನ್ನಡೆಯಾಗಿದೆ.
ಕನ್ಸರ್ವೇಟಿವ್ ಸಂಸದ ಟಾಡ್ ಡೊಹೆರ್ಟಿ ಅ.30ರಂದು ದೀಪಾವಳಿ ಆಚರಣೆಯನ್ನು ಹಮ್ಮಿಕೊಂಡಿದ್ದರು.ಸಾಗರೋತ್ತರ ಫ್ರೆಂಡ್ಸ್ ಆಫ್ ಇಂಡಿಯಾ ಕೆನಡಾ ( ಓಎಫ್ಐಸ)ಯು ಪಾರ್ಲಿಮೆಂಟ್ ಹಿಲ್ನಲ್ಲಿ ದೀಪಾವಳಿ ಅಯೋಜಿಸಿತ್ತು. ಆದರೆ ಇದೀಗ ವಿರೋಧ ಪಕ್ಷ ಈ ಆಚರಣೆಯಿಂದ ಹಿಂದಕ್ಕೆ ಸರಿದಿದೆ. ಇದು ಪಕ್ಷಪಾತಿ ಮತ್ತು ವರ್ಣಬೇಧದ ನಿಲುವಾಗಿದ್ದು, ಜಸ್ಟೀನ್ ಟ್ರುಡೋ ವಿರೋಧಿಗಳು ಕ್ಷಮೆ ಕೇಳಬೇಕೆಂದು ಭಾರತೀಯರು ಆಗ್ರಹಿಸಿದ್ದಾರೆ.
‘ಕೆನಡಾದೊಳಗಿನ ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಹಿಂಸಾಚಾರ, ಬೆದರಿಕೆ ಮತ್ತು ಗುಪ್ತಚರ ಸಂಗ್ರಹಣೆ ಅಭಿಯಾನಕ್ಕೆ ಆದೇಶಿಸಿದ್ದೇ ಭಾರತದ ಗೃಹ ಸಚಿವ ಅಮಿತ್ ಶಾ’ ಎಂದು ಕೆನಡಾ ವಿದೇಶಾಂಗ ಖಾತೆ ಉಪ ಸಚಿವ ಡೇವಿಡ್ ಮಾರಿಸನ್ ಹಾಗೂ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿ ನಥಾಲಿ ಡ್ರೂಯಿನ್ ಆರೋಪಿಸಿದ್ದಾರೆ. ಅಲ್ಲದೆ, ‘ಶಾ ಭಾಗೀದಾರಿಕೆ ಬಗ್ಗೆ ಅಮೆರಿಕ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್ಗೆ ಮಾಹಿತಿ ನೀಡಿದ್ದೇ ನಾವು’ ಎಂದೂ ಹೇಳಿದ್ದಾರೆ.
2 ವಾರ ಹಿಂದೆ ಅಮೆರಿಕ ದಿನಪತ್ರಿಕೆ ‘ವಾಷಿಂಗ್ಟನ್ ಪೋಸ್ಟ್’ ಶಾ ವಿರುದ್ಧ ಈ ಆರೋಪ ಹೊರಿಸಿ ವರದಿ ಮಾಡಿತ್ತು. ಈ ಬಗ್ಗೆ ಕೆನಡಾ ರಾಷ್ಟ್ರೀಯ ಭದ್ರತಾ ಸಮಿತಿಯ ಸಂಸತ್ ಸದಸ್ಯರ ಮುಂದೆ ಹೇಳಿಕೆ ನೀಡಿದ ಮಾರಿಸನ್, ‘ಪತ್ರಕರ್ತನು ನನಗೆ ಕರೆ ಮಾಡಿ ‘ಆ ವ್ಯಕ್ತಿಯೇ (ಶಾ) ಹೌದಾ?’ ಎಂದು ಕೇಳಿದ. ನಾನು, ‘ಹೌದು.. ಅದೇ ವ್ಯಕ್ತಿ’ ಎಂದು ನಾನು ದೃಢಪಡಿಸಿದೆ’ ಎಂದು ಹೇಳಿದರು. ಆದರೆ ಶಾ ಇದರಲ್ಲಿ ಭಾಗಿ ಆಗಿದ್ದು ಕೆನಡಾಗೆ ಹೇಗೆ ತಿಳಿದಿತ್ತು ಎಂಬುದನ್ನು ಮಾರಿಸನ್ ಹೇಳಲಿಲ್ಲ.
ವಿಮಾನಗಳಿಗೆ ಬಾಂಬ್ ಬೆದರಿಕೆಯಿಂದ 300 ಕೋಟಿ ನಷ್ಟ, ಏರ್ ಇಂಡಿಯಾದಲ್ಲಿ ಪ್ರಯಾಣಿಸದಂತೆ ಉಗ್ರ ಪನ್ನು ಎಚ್ಚರಿಕೆ
ಇನ್ನು ಟ್ರುಡೋ ಅವರ ಭದ್ರತಾ ಸಲಹೆಗಾರ್ತಿ ನಥಾಲಿ ಡ್ರೂಯಿನ್ ಮಾತನಾಡಿ, ‘ಶಾ ಭಾಗಿಯಾಗಿದ್ದರ ಬಗ್ಗೆ ಮಾಹಿತಿಯನ್ನು ವಾಷಿಂಗ್ಟನ್ ಪೋಸ್ಟ್ಗೆ ನೀಡಿದ್ದು ನಾನು. ಇದಕ್ಕೆ ಟ್ರುಡೋ ಅನುಮತಿ ಬೇಕಿಲ್ಲ. ಏಕೆಂದರೆ ಇದು ರಹಸ್ಯ ಮಾಹಿತಿ ಅಲ್ಲ’ ಎಂದರು. ಆದರೆ ವಿಪಕ್ಷಗಳ ಸಂಸದರು ಇದಕ್ಕೆ ಆಕ್ಷೇಪಿಸಿ, ‘ದೇಶಕ್ಕೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಅಮೆರಿಕ ಪತ್ರಿಕೆಗೆ ನೀಡುವ ಅಗತ್ಯ ಏನಿತ್ತು?’ ಎಂದು ಪ್ರಶ್ನಿಸಿದರು.
ಜೂನ್ 2023ರಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಕೆನಡಾದ ಸಿಖ್ ಉಗ್ರವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಡೆದಿತ್ತು. ಇದರಲ್ಲಿ ಭಾರತ ಸರ್ಕಾರದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿ, ಉಭಯ ದೇಶಗಳ ಸಂಬಂಧ ಹಾಳು ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ