
ಜಮ್ಮು ಕಾಶ್ಮೀರ: ಭಾರಿ ಮಳೆ ಹಿನ್ನೆಲೆ ಅಮರನಾಥ ಯಾತ್ರೆಯನ್ನು ಇಂದು ಸ್ಥಗಿತಗೊಳಿಸಲಾಗಿದೆ. ಭಾರಿ ಮಳೆಯಿಂದಾಗಿ ಬೆಟ್ಟದಿಂದ ಉರುಳಿದ ಕಲ್ಲೊಂದು ತಾಗಿ ಯಾತ್ರಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಗಂಡೇರ್ಬಾಲ್(Ganderbal) ಜಿಲ್ಲೆಯ ಬಾಲ್ತಾಲ್ ರಸ್ತೆಯಲ್ಲಿ ಯಾತ್ರಿಕರು ಸಾಗುತ್ತಿದ್ದ ವೇಳೆ ಈ ಅನಾಹುತ ನಡೆದಿದೆ.
ಅಮರನಾಥ ಯಾತ್ರೆ( Amarnath Yatra) ಜುಲೈ 3ರಿಂದ ಆರಂಭವಾಗಿತ್ತು. ಆದರೆ ಭಾರಿ ಮಳೆ ಹಾಗೂ ಪ್ರಕ್ಷುಬ್ಧವಾದ ಹವಾಮಾನದಿಂದಾಗಿ ಈಗ ಆತಂಕ ಎದುರಾಗಿದ್ದು, ಯಾತ್ರಿಕರ ಸುರಕ್ಷತೆಯ ದೃಷ್ಟಿಯಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಬಾಲ್ತಾಲ್ ಮಾರ್ಗದಲ್ಲಿ ಮಳೆಯಿಂದಾಗಿ ನೀರಿನೊಂದಿಗೆ ಮಣ್ಣ ಕಲ್ಲು ಕುಸಿದುಕೊಂಡು ಬರುತ್ತಿರುವ ವೀಡಿಯೋ ಯಾತ್ರಿಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗ್ತಿದೆ. ನಡುವೆ ನೀರು ಹರಿದು ಹೋಗುತ್ತಿದ್ದರೆ ಯಾತ್ರಿಕರು ಬದಿಗೆ ಸಾಲಾಗಿ ನಿಂತುಕೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋದಲ್ಲಿ ಕಲ್ಲುಬಡಿದು ಕೆಳಗೆ ಬಿದ್ದ ಯಾತ್ರಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಹಾಗೂ ಸ್ವಲ್ಪ ದೂರ ಸಾಗಿದ ನಂತರ ಅವರನ್ನು ಇಳಿಜಾರಿನಲ್ಲಿದ್ದವರು ಹಿಡಿದುಕೊಂಡಿದ್ದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ..
ಹೀಗೆ ಕಲ್ಲು ಬಡಿದು ಮೃತಪಟ್ಟ ಮಹಿಳೆಯನ್ನು ರಾಜಸ್ಥಾನದ 55 ವರ್ಷದ ಮಹಿಳೆ ಸೋನಾಬಾಯ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಪ್ರಜ್ಞೆ ತಪ್ಪಿದ ಸೋನಾಬಾಯ್ ಅವರನ್ನು ಮೇಲ್ ರೈಲ್ಪತ್ರಿಯಿಂದ ಬೇಸ್ ಕ್ಯಾಂಪ್ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ವೈರಲ್ ಆದ ವೀಡಿಯೋದಲ್ಲಿ ಮಣ್ಣು ಮತ್ತು ಕಲ್ಲುಗಳೊಂದಿಗೆ ನೀರು ರಭಸವಾಗಿ ಹರಿದು ಹೋಗುತ್ತಿರುವುದು ಕಾಣುತ್ತಿದ್ದು, ಆ ಪ್ರದೇಶದಿಂದ ಸಾವಿರಾರು ಯಾತ್ರಿಕರನ್ನು ರಕ್ಷಿಸಲಾಗಿದೆ ಹಾಗೂ ಅಮರನಾಥ ಯಾತ್ರೆಯನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.
ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಧಾವಿಸಿದ್ದು, ಕೂಡಲೇ ಆ ಸ್ಥಳದಿಂದ ಯಾತ್ರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ. ಗಡಿ ರಸ್ತೆ ಸಂಸ್ಥೆಯು ಯಾತ್ರೆ ತೆರಳುವ ರಸ್ತೆಯಲ್ಲಿ ವ್ಯವಸ್ಥೆ ಸರಿಪಡಿಸುವ ಕೆಲಸವನ್ನು ಮಾಡಲು ಶುರು ಮಾಡಿದೆ ಎಂದು ವರದಿಯಾಗಿದೆ. ಇಲ್ಲಿ ವ್ಯವಸ್ಥೆ ಪುನಃಸ್ಥಾಪನೆ ಕೆಲಸ ಪೂರ್ಣಗೊಳ್ಳುವವರೆಗೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯಾತ್ರೆಯು ಎರಡು ಹಳಿಗಳ ಮೂಲಕ ಸಾಗುತ್ತದೆ ಅನಂತ್ನಾಗ್ ಜಿಲ್ಲೆಯ ಸಾಂಪ್ರದಾಯಿಕ 48 ಕಿಮೀ ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂಡೇರ್ಬಾಲ್ ಜಿಲ್ಲೆಯ 14 ಕಿಮೀ ಬಾಲ್ತಾಲ್ ಮಾರ್ಗದ ಮೂಲಕ ಸಾಗುತ್ತದೆ. ಈ ಮಾರ್ಗವೂ ಚಿಕ್ಕ ಹಾಗೂ ಕಡಿದಾದ ಮಾರ್ಗವಾಗಿದೆ. ಇದುವರೆಗೆ ಈ ವರ್ಷ ಎರಡು ಲಕ್ಷಕ್ಕೂ ಹೆಚ್ಚು ಯಾತ್ರಿಕರು 3,880 ಮೀಟರ್ ಎತ್ತರದವರೆಗೆ ಸಾಗಿ ಅಲ್ಲಿ ಅಮರನಾಥನಿಗೆ ಪೂಜೆ ಸಲ್ಲಿಸಿದ್ದಾರೆ.
ಆಗಸ್ಟ್ 9 ರಂದು ಮುಕ್ತಾಯಗೊಳ್ಳಲಿರುವ ಈ ಯಾತ್ರೆಗೆ ಭದ್ರತೆ ಒದಗಿಸುವುದಕ್ಕಾಗಿ ಸಾವಿರಾರು ಸೈನಿಕರು, ಅರೆಸೇನಾ ಪಡೆ ಸಿಬ್ಬಂದಿ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಇಲ್ಲಿ ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ