ಕೋವಿಡ್‌ ಸುರಕ್ಷತೆ ಹೊರತಾಗಿ ಎಲ್ಲ ನಿರ್ಬಂಧ ಮಾ. 31ರಿಂದ ರದ್ದು

By Girish GoudarFirst Published Mar 24, 2022, 4:30 AM IST
Highlights

*   ವಿಪತ್ತು ಕಾಯ್ದೆಯಡಿಯ ಸೂಚನೆ ಹಿಂಪಡೆದ ಕೇಂದ್ರ
*  ಮಾಸ್ಕ್‌, ಸ್ಯಾನಿಟೈಸರ್‌, ಅಂತರ ಮಾತ್ರ ಮುಂದುವರಿಕೆ
*  ಮಿಶ್ರತಳಿಯಿಂದಾಗಿ 4ನೇ ಅಲೆ ಸಂಭವ
 

ನವದೆಹಲಿ(ಮಾ.24): ಅತ್ಯಂತ ವೇಗವಾಗಿ ಹಬ್ಬುವ ಕೋವಿಡ್‌ನ(Covid-19) ರೂಪಾಂತರಿ ಒಮಿಕ್ರೋನ್‌ನಿಂದ(Omicron) ದೇಶದಲ್ಲಿ 4ನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಕಡಿಮೆ. ಆದರೆ ಹೊಸ ರೀತಿಯ ಕೊರೋನಾ ರೂಪಾಂತರಿ ತಳಿಗಳ ಮಿಶ್ರಣದಿಂದ 4ನೇ ಅಲೆ ಕಾಣಿಸಿಕೊಳ್ಳುವ ಸಂಭವವಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ನಡುವೆ, ಇಂತಹ ಮಿಶ್ರ ತಳಿಗಳ ಮೇಲೆ ವಿಶ್ವ ಆರೋಗ್ಯ ಸಂಸ್ಥೆ(World Health Organization) ಕೂಡ ನಿಗಾ ವಹಿಸಿದೆ.

ದೇಶದಲ್ಲಿ(India) ಕೊರೋನಾ(Coronavirus) ಸೋಂಕು ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿದ್ದ ಕಠಿಣ ನಿರ್ಬಂಧಗಳನ್ನು ಮಾ.31ರಿಂದ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ(Central Government) ನಿರ್ಧರಿಸಿದೆ. ಈ ಕುರಿತು ಕೇಂದ್ರ ಗೃಹ ಇಲಾಖೆಯು ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ರವಾನಿಸಿದ್ದು, ಜನರು ಕೊರೋನಾದಿಂದ ಕಳೆದುಕೊಂಡಿದ್ದ ‘ಸ್ವಾತಂತ್ರ್ಯ’ 24 ತಿಂಗಳ ನಂತರ ಮರಳಿದಂತಾಗಿದೆ. ಹೀಗಾಗಿ ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಹೊರತುಪಡಿಸಿ ಉಳಿದ ನಿರ್ಬಂಧಗಳು ರದ್ದಾಗಲಿವೆ.

Fake Covid Claims: ಕೋವಿಡ್‌ ಪರಿಹಾರಕ್ಕಾಗಿ ನಕಲಿ ದಾಖಲೆ, ಅಧಿಕಾರಿಗಳೂ ಸಾಥ್‌!

ಆದರೆ ಕೊರೋನಾ ಇನ್ನೂ ಪೂರ್ತಿ ನಿರ್ಮೂಲನೆ ಆಗಿಲ್ಲದ ಕಾರಣ ಮಾಸ್ಕ್‌, ಸ್ಯಾನಿಟೈಸರ್‌ ಮತ್ತು ಸಾಮಾಜಿಕ ಅಂತರದಂತಹ ಸ್ವಯಂ ನಿಯಂತ್ರಣ ಕ್ರಮಗಳು ಇನ್ನು ಮುಂದೆಯೂ ಜಾರಿಯಲ್ಲಿರುತ್ತವೆ. ಅವುಗಳನ್ನು ಜನರು ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

24 ತಿಂಗಳ ಹಿಂದಿನ ಕಠಿಣ ಆದೇಶ:

ದೇಶದಲ್ಲಿ ಕೊರೋನಾ ಹರಡತೊಡಗಿದ ನಂತರ 2020ರ ಮಾ.24ರಂದು ವಿಪತ್ತು ನಿರ್ವಹಣಾ ಕಾಯ್ದೆ-2005ರ ಅಡಿ ಕೇಂದ್ರ ಸರ್ಕಾರ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿತ್ತು. ನಂತರ ಅವುಗಳನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಾ ಬಂದಿತ್ತು. ರಾಜ್ಯ ಸರ್ಕಾರಗಳು ಈ ಕಾಯ್ದೆಯಡಿ ಕೇಂದ್ರ ನೀಡಿದ ಸೂಚನೆಯಂತೆ ನೈಟ್‌ ಕರ್ಫ್ಯೂ, ಲಾಕ್‌ಡೌನ್‌, ವೀಕೆಂಡ್‌ ಕರ್ಫ್ಯೂ, ಕಂಟೇನ್ಮೆಂಟ್‌ ವಲಯ, ನಿಯಮ ಪಾಲಿಸದವರ ಬಂಧನವೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದವು. ಈ ಮಾದರಿಯ ಎಲ್ಲ ಕ್ರಮಗಳು ಮಾ.31ರಿಂದ ಸ್ಥಗಿತಗೊಳ್ಳಲಿವೆ.

‘ಕೊರೋನಾ ವಿಷಯದಲ್ಲಿ ಈವರೆಗೆ ಆಗಿರುವ ಪ್ರಗತಿ, ಜನರಲ್ಲಿ ಮೂಡಿರುವ ಜಾಗೃತಿ ಹಾಗೂ ಸರ್ಕಾರಗಳ ಸನ್ನದ್ಧತೆಯನ್ನು ಪರಿಗಣಿಸಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಿಪತ್ತು ನಿರ್ವಹಣೆ ಕಾಯ್ದೆಯಡಿ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇನ್ನಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ’ ಎಂದು ರಾಜ್ಯಗಳಿಗೆ ಕಳಿಸಿರುವ ಸುತ್ತೋಲೆಯಲ್ಲಿ ಕೇಂದ್ರ ಸರ್ಕಾರ ಹೇಳಿದೆ.

Covid Crisis: 18+ ಆದ ಎಲ್ಲರಿಗೂ ಬೂಸ್ಟರ್‌ ಡೋಸ್‌..?

ಆದರೆ, ಮತ್ತೆ ಕೋವಿಡ್‌ ಸೋಂಕು ಹೆಚ್ಚಿದರೆ ರಾಜ್ಯ ಸರ್ಕಾರಗಳು ಕೇಂದ್ರ ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಬಹುದು. ಲಸಿಕಾಕರಣ ಸೇರಿದಂತೆ ಇನ್ನಿತರ ಕೋವಿಡ್‌ ನಿಯಂತ್ರಣ ಕ್ರಮಗಳು ಎಂದಿನಂತೆ ಮುಂದುವರೆಯುತ್ತವೆ ಎಂದೂ ತಿಳಿಸಿದೆ.

ಕೊರೋನಾ 4ನೇ ಅಲೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಡಾ. ಮಂಜುನಾಥ್ ಮಾಹಿತಿ

ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಕೊರೋನಾ ನಾಲ್ಕನೇ ಅಲೆ ಬರಬಹುದು ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ, ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರಾದ ಡಾ.  ಮಂಜುನಾಥ್ (Dr Manjunath) ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಮುಂದಿನ ಅಲೆ ಬಗ್ಗೆ ನಿರ್ಲಕ್ಷ್ಯ ತೋರಬಾರದು ಎಂದು ಸಲಹೆ ನೀಡಿದ್ದಾರೆ. 

ಈಗಾಗಲೇ ಚೀನಾದಲ್ಲಿ ಲಕ್ಷಾಂತರ ಕೋವಿಡ್ ಕೇಸ್ ಪತ್ತೆಯಾಗ್ತಿದೆ. ದಕ್ಷಿಣ ಕೊರಿಯಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಒಮಿಕ್ರಾನ್ ತಳಿಯಿಂದಲೇ ಮತ್ತೊಂದು ಅಲೆ ಸೃಷ್ಠಿಯಾಗುವ ಸಾಧ್ಯತೆ ಇದೆ. ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ನಾಲ್ಕನೇ ಅಲೆ ಬರುವ ಸಾಧ್ಯತೆ ಅತಿ ಹೆಚ್ಚು ಎಂದು ಎಚ್ಚರಿಸಿದ್ದಾರೆ. 
 

click me!