
ಪುಣೆ: ಸುಮಾರು 200 ಜನರಿದ್ದ ಏರ್ ಇಂಡಿಯಾ ವಿಮಾನ ರನ್ವೇಯಲ್ಲಿ ಲಗ್ಗೇಜ್ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದೆ. ಗುರುವಾರ ಪುಣೆಯ ವಿಮಾನನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಲಗ್ಗೇಜ್ ಟ್ರ್ಯಾಕ್ಟರ್ಗೆ ಡಿಕ್ಕಿಯಾದ ಹಿನ್ನೆಲೆ ವಿಮಾನದ ಒಂದು ಭಾಗದ ರೆಕ್ಕೆ ಮತ್ತು ಚಕ್ರಕ್ಕೆ ಹಾನಿಯುಂಟಾಗಿದೆ. ಈ ಅವಘಡ ಸಂಭವಿಸಿದಾಗ ಬರೋಬ್ಬರಿ 180 ಪ್ರಯಾಣಿಕರು ವಿಮಾನದಲ್ಲಿದ್ದರು. ಸಿಬ್ಬಂದಿ ಸೇರಿದಂತೆ 200 ಜನರು ವಿಮಾನದಲ್ಲಿದ್ದರು. ಈ ವಿಮಾನ ಪುಣೆಯಿಂದ ದೆಹಲಿಯತ್ತ ಹೊರಟಿತ್ತು.
ಈ ಅವಘಡದಲ್ಲಿ ಸಿಬ್ಬಂದಿ ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಯಾರಿಗೂ ಯಾವುದೇ ಅಪಾಯ ಆಗಿಲ್ಲ. ಕೂಡಲೇ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸಲಾಯ್ತು ಎಂದು ಏರ್ ಇಂಡಿಯಾ ಅಧಿಕೃತ ಹೇಳಿಕೆಯನ್ನು ನೀಡಿದೆ.
ಘಟನೆ ಸಂಬಂಧ ತನಿಖೆಗೆ ಆದೇಶ
ಏರ್ ಇಂಡಿಯಾ ಎಐ-858 ಸಂಜೆ ನಾಲ್ಕು ಗಂಟೆಗೆ ಪುಣೆಯಿಂದ ದೆಹಲಿಗೆ ತೆರಳಬೇಕಿತ್ತು. ಆದರೆ ರನ್ವೇನಲ್ಲಿ ಲಗ್ಗೇಜ್ ಟ್ರಾಕ್ಟರ್ ಡಿಕ್ಕಿಯಾದ ಪರಿಣಾಮ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಯ್ತು. ಈ ಅವಘಡ ಸಂಬಂಧ ಡಿಜಿಸಿಎ ( Directorate General of Civil Aviation) ತನಿಖೆಗೆ ಆದೇಶಿಸಿದೆ. ಸುರಕ್ಷತಾ ದೃಷ್ಟಿ ಹಿನ್ನೆಲೆ ಅಪಘಾತಕ್ಕೀಡಾದ ವಿಮಾನದ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಘಟನೆ ಬಗ್ಗೆ ಏರ್ ಇಂಡಿಯಾ ಮಾಹಿತಿ
ಗುರುವಾರ ಸಂಜೆ ನಾಲ್ಕು ಗಂಟೆಗೆ ನಮ್ಮ ಸಂಸ್ಥೆಯ ವಿಮಾನ ಪುಣೆಯಿಂದ ದೆಹಲಿಗೆ ತೆರಳಬೇಕಿತ್ತು. ಆದ್ರೆ ಟ್ಯಾಕ್ಸಿ ಸಮಯದಲ್ಲಿ ಅಡಚಣೆ ಉಂಟಾಗಿದೆ. ತಪಾಸಣೆಗಾಗಿ ವಿಮಾನ ಹಾರಾಟವನ್ನು ತಡೆ ಹಿಡಿಯಲಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಹಣ ಮರು ಪಾವತಿಸಲಾಗಿದೆ. ಅಗತ್ಯ ಇರೋ ಪ್ರಯಾಣಿಕರಿಗೆ ಬದಲಿ ವಿಮಾನಗಳಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈಗಾಗಲೇ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಏರ್ ಇಂಡಿಯಾ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.
ಏರ್ ಇಂಡಿಯಾ ಕೈಗೆಟುಕವ ದರದ ಟಿಕೆಟ್ ಸೇವೆಯಲ್ಲಿ ಒಂದು ಉಚಿತ ಸೌಲಭ್ಯಕ್ಕೆ ಮಿತಿ!
ಸಾಮೂಹಿಕ ರಜೆ ಹಾಕಿದ್ರು ಏರ್ ಇಂಡಿಯಾ ಸಿಬ್ಬಂದಿ
ಕೆಲ ದಿನಗಳ ಹಿಂದೆ ಏರ್ ಇಂಡಿಯಾ ಸಿಬ್ಬಂದಿ ಸಾಮೂಹಿಕ ರಜೆ ಹಾಕಿದ್ದ ಕಾರಣ ಸುಮಾರು 170ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿತ್ತು. ಸುಮಾರು 300ಕ್ಕೂ ಹೆಚ್ಚು ಸಿಬ್ಬಂದಿ ಸಾಮೂಹಿಕ ರಜೆ ಹಾಕುವ ಮೂಲಕ ಅಘೋಷಿತ ಮುಷ್ಕರಕ್ಕೆ ಕರೆ ನೀಡಿದ್ದರು.
ಸಿಬ್ಬಂದಿಗಳ ಬೇಡಿಕೆ ಕುರಿತು ಪರಿಶೀಲಿಸುವುದಾಗಿ ಏರ್ ಇಂಡಿಯಾ ಆಡಳಿತ ಮಂಡಳಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮತ್ತು 30 ಸಿಬ್ಬಂದಿಗಳ ವಜಾ ಆದೇಶ ಹಿಂಪಡೆಯುವ ಭರವಸೆ ನೀಡಿದ ಬೆನ್ನಲ್ಲೇ ಮುಷ್ಕರ ನಿರತ ಸಿಬ್ಬಂದಿ ಕರ್ತವ್ಯಕ್ಕೆ ಮರಳಿದ್ದಾರೆ.
ಪ್ರಸ್ತುತ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ನಿರ್ವಹಿಸುತ್ತಿದೆ. ಏರ್ಲೈನ್ನ ನಿರ್ವಹಣೆ ಮತ್ತು ಕ್ಯಾಬಿನ್ ಸಿಬ್ಬಂದಿ ಸದಸ್ಯರ ನಡುವಿನ ವಿವಾದಗಳಿಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯ ಕಾರಣಕ್ಕೆ 2023ರ ಡಿಸೆಂಬರ್ನಲ್ಲಿ ಕೇಂದ್ರ ಕಾರ್ಮಿಕ ಸಚಿವಾಲಯವೂ ಏರ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ