70 ಶಾಸಕರ ಪೈಕಿ 61 ಜನರ ಬಳಿ ಜನನ ಪ್ರಮಾಣ ಪತ್ರವಿಲ್ಲ| ದೆಹಲಿ ವಿಧಾನಸಭೆಯಲ್ಲಿ ಕೇಜ್ರೀವಾಲ್ ಮಾತು
ನವದೆಹಲಿ[ಮಾ.14]: ಕೇಂದ್ರ ಸರ್ಕಾರದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ಪಿಆರ್) ಹಾಗೂ ಪ್ರಸ್ತಾಪಿತ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ವಿರುದ್ಧದ ಗೊತ್ತುವಳಿಯನ್ನು ದೆಹಲಿ ಸರ್ಕಾರ ಅನುಮೋದಿಸಿದೆ.
ಎನ್ಪಿಆರ್ ಹಾಗೂ ಎನ್ಆರ್ಸಿ ಸಂಬಂಧ ದೆಹಲಿ ವಿಧಾನಸಭೆಯಲ್ಲಿ ಶುಕ್ರವಾರ ವಿಶೇಷ ಕಲಾಪ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸದನವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘70 ಸದಸ್ಯರ ಪೈಕಿ 61 ಮಂದಿ ಬಳಿ ಜನನ ಪ್ರಮಾಣಪತ್ರವಿಲ್ಲ. ಅಲ್ಲದೆ, ನನಗೆ, ನನ್ನ ಹೆಂಡತಿ ಹಾಗೂ ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳ ಬಳಿಯೂ ಜನನ ಪ್ರಮಾಣ ಪತ್ರವಿಲ್ಲ. ಹಾಗಿದ್ದರೆ, ನಮ್ಮನ್ನು ಬಂಧನ ಕೇಂದ್ರಗಳಲ್ಲಿ ಅಟ್ಟಲಾಗುತ್ತದೆಯೇ’ ಎಂದು ಪ್ರಶ್ನಿಸಿದರು.
ಕೇರಳ, ಬಿಹಾರ ಮೊದಲಾದ ರಾಜ್ಯಗಳ ಬೆನ್ನಲ್ಲೇ ಸದ್ಯ ದೆಹಲಿ ಕೂಡಾ ಎನ್ಪಿಆರ್ ಹಾಗೂ ಎನ್ಆರ್ಸಿ ವಿರುದ್ಧ ಗೊತ್ತುವಳಿ ಅನುಮೋದಿಸಿದೆ.