
ನವದೆಹಲಿ[ನ.26]: ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಗಳಲ್ಲಿ ಒಂದಾಗಿರುವ ಐಸಿಸ್ (ಇಸ್ಲಾಮಿಕ್ ಸ್ಟೇಟ್)ನಿಂದ ಪ್ರೇರಿತರಾಗಿ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಅಸ್ಸಾಂನಲ್ಲಿ ಬಾಂಬ್ ಸ್ಫೋಟ ನಡೆಸಲು ಸುಧಾರಿತ ಸ್ಫೋಟಕವನ್ನು ಒತೆಯಲ್ಲೇ ಇಟ್ಟುಕೊಂಡು ಸನ್ನದ್ಧರಾಗಿದ್ದ ಮೂವರು ಯುವಕರನ್ನು ದೆಹಲಿ ಪೊಲೀಸರು ಅಸ್ಸಾಂನಲ್ಲಿ ಬಂಧಿಸಿದ್ದಾರೆ. ಇದರಿಂದಾಗಿ ಸೋಮವಾರ ರಾತ್ರಿ ನಡೆಯಬಹುದಾಗಿದ್ದ ಘೋರ ಅನಾಹುತವೊಂದು ತಪ್ಪಿದಂತಾಗಿದೆ.
ಬಂಧಿತ ಮೂವರೂ 20ರ ಪ್ರಾಯದ ಆಸುಪಾಸಿನವರಾಗಿದ್ದಾರೆ. ಈ ಎಲ್ಲರೂ ಅಸ್ಸಾಂನ ಗೋವಲ್ಪಾರಾ ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದ ಮೇಳದಲ್ಲಿ ಸೋಮವಾರ ರಾತ್ರಿ ಸುಧಾರಿತ ಸ್ಫೋಟಕ ಸಾಧನದ ಮೂಲಕ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದರು. ಈ ದಾಳಿ ಯಶಸ್ವಿಗೊಂಡರೆ, ರಾಷ್ಟ್ರ ರಾಜದಾನಿ ದೆಹಲಿಯ ಹೆಚ್ಚು ಜನನಿಬಿಡ ಪ್ರದೇಶದಲ್ಲೂ ದಾಳಿಗೆ ಸಂಚು ರೂಪಿಸಿದ್ದರು. ದೆಹಲಿ ಪೊಲೀಸರು ಅಸ್ಸಾಂನಲ್ಲಿ ಭಾನುವಾರವೇ ದಾಳಿ ನಡೆಸಿ ಮೂವರನ್ನೂ ಬಂಧಿಸಿದ್ದಾರೆ. ಒಂದು ಕೆ.ಜಿ. ಸ್ಫೋಟಕ ಸಾಮಗ್ರಿ, ಒಂದು ಕತ್ತಿ, ಒಂದು ಚಾಕು, ಐಸಿಸ್ ಕುರಿತಾದ ಉಪಯುಕ್ತ ಮಾಹಿತಿಗಳು, ನಾಲ್ಕು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಉಗ್ರರ ಕರಿನೆರಳು, PGಯಲ್ಲಿ NIA ತಂಡದಿಂದ ಶೋಧ
ಅಸ್ಸಾಂ ಪೊಲೀಸರ ಜತೆಗೂಡಿ ನಡೆಸಿದ ಜಂಟಿ ಕಾರ್ಯಾಚರಣೆ ಇದಾಗಿದೆ. ಮುಕದೀರ್ ಇಸ್ಲಾಮ್, ರಂಜಿತ್ ಅಲಿ ಹಾಗೂ ಜಮೀಲ್ ಲುಯಿತ್ ಎಂಬ ಯುವಕರನ್ನು ಬಂಧಿಸಲಾಗಿದೆ. ಇವರೆಲ್ಲಾ ಸಹಪಾಠಿಗಳಾಗಿದ್ದು, ದೆಹಲಿಯಲ್ಲೂ ಕೆಲವು ವ್ಯಕ್ತಿಗಳನ್ನು ಮೂಲಭೂತವಾದಿಗಳನ್ನಾಗಿಸಿದ್ದಾರೆ ಎಂದು ದೆಹಲಿ ಪೊಲೀಸ್ ಉಪ ಆಯುಕ್ತ (ವಿಶೇಷ ಘಟಕ) ಪ್ರಮೋದ್ ಸಿಂಗ್ ಕುಶ್ವಾಹಾ ತಿಳಿಸಿದ್ದಾರೆ. ದೆಹಲಿ ಸ್ಫೋಟಕ್ಕಾಗಿ ಈ ಮೂವರು ಆರೋಪಿಗಳು ದೆಹಲಿಗೆ ಭೇಟಿ ನೀಡಿದ್ದರೇ ಎಂಬುದರ ಆಯಾಮದಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ