ಶ್ರೀಕ್ಷೇತ್ರ ತಿರುಮಲದಲ್ಲಿ 3 ಭಕ್ತರು ಶೂ ಧರಿಸಿ ದೇಗುಲ ಪ್ರವೇಶಿಸಿದ ಘಟನೆ ನಡೆದಿದೆ. ಇದು ಭಾರಿ ಭದ್ರತಾ ಲೋಪ ಎಂದು ಆಂಧ್ರಪ್ರದೇಶ ಪ್ರತಿಪಕ್ಷಗಳು ಕಿಡಿಕಾರಿವೆ. 3 ಭಕ್ತರು ವೈಕುಂಠಂ ಕ್ಯೂ ಕಾಂಪ್ಲೆಕ್ಸ್ನಿಂದ ಶೂ ಧರಿಸಿ ಬಂದಿದ್ದಾರೆ.
ತಿರುಮಲ (ಏ.13): ಶ್ರೀಕ್ಷೇತ್ರ ತಿರುಮಲದಲ್ಲಿ 3 ಭಕ್ತರು ಶೂ ಧರಿಸಿ ದೇಗುಲ ಪ್ರವೇಶಿಸಿದ ಘಟನೆ ನಡೆದಿದೆ. ಇದು ಭಾರಿ ಭದ್ರತಾ ಲೋಪ ಎಂದು ಆಂಧ್ರಪ್ರದೇಶ ಪ್ರತಿಪಕ್ಷಗಳು ಕಿಡಿಕಾರಿವೆ. 3 ಭಕ್ತರು ವೈಕುಂಠಂ ಕ್ಯೂ ಕಾಂಪ್ಲೆಕ್ಸ್ನಿಂದ ಶೂ ಧರಿಸಿ ಬಂದಿದ್ದಾರೆ. ಆದರೆ, ದಾರಿಯುದ್ದಕ್ಕೂ ಭದ್ರತಾ ತಪಾಸಣಾಧಿಕಾರಿಗಳು ಇವರನ್ನು ಹೇಗೆ ಗಮನಿಸಲಿಲ್ಲ ಎಂಬ ಪ್ರಶ್ನೆ ಎದ್ದಿದೆ. ಕೊನೆಗೆ ಮಹಾದ್ವಾರದಲ್ಲಿನ ಸಿಬ್ಬಂದಿ ಅವರನ್ನು ತಡೆದು ಶೂ ಬಿಚ್ಚಿಸಿದ್ದಾರೆ. ಈ ಘಟನೆಯ ಬಗ್ಗೆ ಟಿಟಿಡಿ ಮಾಜಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಕಿಡಿಕಾರಿದ್ದು, ‘ಇದು ಭಾರಿ ಭದ್ರತಾ ಲೋಪ’ ಎಂದಿದ್ದಾರೆ.
100 ಹಸು ಸಾವು: ‘ಆಂಧ್ರ ಪ್ರದೇಶದ ಆಡಳಿತಾರೂಢ ಟಿಡಿಪಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ತಿರುಮಲದ ಟಿಟಿಡಿ ಗೋಶಾಲೆಯಲ್ಲಿ ಕಳೆದ 3 ತಿಂಗಳಲ್ಲಿ 100 ಆಕಳು ಸಾವನ್ನಪ್ಪಿವೆ’ ಎಂದು ಮಾಜಿ ಸಿಎಂ ಜಗನ್ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ‘ಹಸುಗಳ ರಕ್ಷಣೆಗೆಂದು ಇರಬೇಕಿದ್ದ ಟಿಟಿಡಿಯ ಗೋಶಾಲೆಯಲ್ಲಿ ಸರಿಯಾದ ಸಿಬ್ಬಂದಿಗಳ ನಿರ್ಲಕ್ಷ್ಯ ಮತ್ತು ಸರಿಯಾದ ನಿರ್ವಹಣೆಯಿಲ್ಲದೇ 3 ತಿಂಗಳಲ್ಲಿ 100 ಹಸುಗಳು ಮೃತಪಟ್ಟಿವೆ’ ಎಂದು ಹಸುಗಳ ಮೃತದೇಹಗಳ ಚಿತ್ರಗಳನ್ನು ಹಂಚಿಕೊಂಡಿದೆ. ಆದರೆ ಟಿಟಿಡಿ, ‘ಇದು ಸುಳ್ಳು ಆರೋಪ. ಚಿತ್ರಗಳು ಟಿಟಿಡಿ ಗೋಶಾಲೆಯದ್ದಲ್ಲ’ ಎಂದಿದೆ.
ವಾಟ್ಸಾಪ್ನಲ್ಲೂ ತಿರುಮಲ ಸೇವೆ ಲಭ್ಯ: ಭಕ್ತಾದಿಗಳ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ವಾಟ್ಸಪ್ನಲ್ಲೂ ಸೇವೆ ನೀಡಲು ಮುಂದಾಗಿದೆ. ಇದರ ಭಾಗವಾಗಿ, 15 ಅಗತ್ಯ ಸೇವೆಗಳನ್ನು ವಾಟ್ಸಾಪ್ ಜತೆ ಸಂಯೋಜಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ. ಟಿಕೆಟ್ ಕಾಯ್ದಿರಿಸುವಿಕೆ, ವಸತಿ ಲಭ್ಯತೆ, ನೈಜ ಸಮಯ ಅಪ್ಡೇಟ್ಗಳಂತಹ ವ್ಯಸ್ಥೆಗಳ ಬಗ್ಗೆ ಮಾಹಿತಿ ಪಡೆಯಲು ಭಕ್ತರು ಈ ಸೌಲಭ್ಯವನ್ನು ಬಳಸಬಹುದು.
ತಿಮ್ಮಪ್ಪನ ದರ್ಶನಕ್ಕೆ ಶಿಫಾರಸು ಬಗ್ಗೆ ಆಂಧ್ರ ಸಿಎಂ ಜತೆ ಚರ್ಚೆ: ಸಚಿವ ರಾಮಲಿಂಗಾರೆಡ್ಡಿ
ಬಳಕೆ ಹೇಗೆ?: ಮೊದಲು 9552300009 ಸಂಖ್ಯೆಯನ್ನು ಸೇವ್ ಮಾಡಿಕೊಂಡು, ಬಳಿಕ ವಾಟ್ಸಪ್ನಲ್ಲಿ ಇದಕ್ಕೆ ‘ಹಾಯ್’ ಎಂದು ಸಂದೇಶ ಕಳಿಸಬೇಕು. ಆಗ ತೋರಿಸಲಾಗುವ ಆಯ್ಕೆಗಳಲ್ಲಿ ‘ಟಿಟಿಡಿ ದೇವಸ್ಥಾನದ ಸೇವೆ’ಯನ್ನು ಆಯ್ಕೆ ಮಾಡಬೇಕು. ಆಗ, ನಿಗದಿಯಾಗಿರುವ ಸರ್ವದರ್ಶನದ ಲೈವ್ ಸ್ಟೇಟಸ್, ಸರ್ವದರ್ಶನದ ಲೈವ್ ಸ್ಟೇಟಸ್, ಶ್ರೀ ವಾಣಿ ಟ್ರಸ್ಟ್ ಸ್ಟೇಟಸ್, ಮುಂಗಡ ಠೇವಣಿ ಮರುಪಾವತಿ ಲೈವ್ ಸ್ಟೇಟಸ್ ಎಂಬ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಸೂಕ್ತ ಆಯ್ಕೆಗಳನ್ನು ಆರಿಸಿಕೊಂಡು ಸೇವೆಗಳನ್ನು ಪಡೆಯಬಹುದು.