
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದೊಡ್ಡ ಮಟ್ಟದ ದರೋಡೆಯೊಂದು ನಡೆದಿದೆ. ಜ್ಯುವೆಲರಿ ಶಾಪ್ವೊಂದಕ್ಕೆ ಕನ್ನ ಕೊರೆದ ದರೋಡೆಕೋರರು 20 ರಿಂದ 25 ಕೋಟಿ ಮೌಲ್ಯದ ಚಿನ್ನಾಭರಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ದಕ್ಷಿಣ ದಿಲ್ಲಿಯ ಜಂಗ್ಪುರ ಸಮೀಪದ ಭೋಗಲ್ ಪ್ರದೇಶದ (Bhogal area) ಉಮ್ರಾವ್ ಜ್ಯುವೆಲ್ಲರ್ಸ್ನಲ್ಲಿ ಈ ಬಹುಕೋಟಿ ಮೊತ್ತದ ದರೋಡೆ ನಡೆದಿದ್ದು, ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ. ಜೊತೆಗೆ ಸಿಸಿಟಿವಿಯ ಜೊತೆಗೆ ಸಧೃಡವಾದ ಭದ್ರತಾ ವ್ಯವಸ್ಥೆ ಇದ್ದರೂ ಈ ದೊಡ್ಡ ಮಟ್ಟದ ದರೋಡೆ ತಡೆಯಲು ವಿಫಲವಾಗಿದ್ದು ಅಚ್ಚರಿ ಮೂಡಿಸಿದೆ. ಮೆಲ್ನೋಟಕ್ಕೆ ತಿಳಿದವರೆ ಈ ದರೋಡೆ ಕೃತ್ಯ ನಡೆಸಿರಬಹುದು ಎಂಬ ಶಂಕೆ ಮೂಡಿದೆ.
ಸಿಸಿಟಿವಿ ಸಂಪರ್ಕ ಕಡಿತಗೊಳಿಸಿ ಕೃತ್ಯ:
ಬೃಹತ್ ದರೋಡೆಯ ಪ್ಲಾನ್ ಸಿದ್ಧಪಡಿಸಿದ ಗ್ಯಾಂಗ್ ಅದರ ಮೊದಲನೇ ಭಾಗವಾಗಿ ಜ್ಯುವೆಲ್ಲರಿ ಶಾಪ್ನಲ್ಲಿದ್ದ (Umrao Jewellers) ಸಿಸಿಟಿವಿಗಳ ಸಂಪರ್ಕ ಕಡಿತಗೊಳಿಸಿದ್ದಾರೆ. ನಂತರ 4 ಮಹಡಿ ಕಟ್ಟಡದಲ್ಲಿದ್ದ ಈ ಜ್ಯುವೆಲ್ಲರಿ ಶಾಪ್ಗೆ ಟೆರೆಸ್ನಿಂದ ಪ್ರವೇಶಿಸಿದ್ದಾರೆ. ನಂತರ ಮೆಟ್ಟಿಲುಗಳಲ್ಲಿ ಇಳಿದು ನೆಲಮಹಡಿಗೆ ತಲುಪಿದ್ದಾರೆ ಅಲ್ಲಿ ಅವರಿಗೆ ಜ್ಯುವೆಲ್ಲರಿ ಶಾಪ್ನ ಸ್ಟ್ರಾಂಗ್ ರೂಮ್ ಇರುವುದು ಗೊತ್ತಾಗಿದೆ.
ನಂತರ ಸ್ಟ್ರಾಂಗ್ ರೂಮ್ ಪ್ರವೇಶಿಸುವುದಕ್ಕಾಗಿ ಸ್ಟ್ರಾಂಗ್ರೂಮ್ನ (Strongroom) ಗೋಡೆಗೆ ದೊಡ್ಡದಾದ ಕನ್ನ ಕೊರೆದಿದ್ದಾರೆ. ಇಲ್ಲಿ ಕೋಟ್ಯಾಂತರ ರೂ ಬೆಲೆ ಬಾಳುವ ಆಭರಣವನ್ನು ಇರಿಸಲಾಗಿತ್ತು. ಇದರ ಜೊತೆಗೆ ಶೋ ರೂಮ್ನಲ್ಲಿ ಗ್ರಾಹಕರಿಗೆ ಕಾಣಲು ಇರಿಸಿದ್ದ ಜ್ಯುವೆಲ್ಲರಿಯನ್ನು ಕೂಡ ಕಳ್ಳರು ಹೊತ್ತೊಯ್ದಿದ್ದಾರೆ. ಭಾನುವಾರ ಸಂಜೆ ಶೋರೂಂಗೆ ಬೀಗ ಹಾಕಿ ಮನೆಗೆ ತೆರಳಿದ್ದ ಶೋರೂಂ ಮಾಲೀಕರು ಸೋಮವಾರ ಅಂಗಡಿಗೆ ರಜೆ ಇದ್ದ ಕಾರಣ ಇಂದು ಬೆಳಗ್ಗೆ ಎಂದಿನಂತೆ ವ್ಯವಹಾರ ಶುರು ಮಾಡಲು ಶೋ ರೂಂ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಸಂಪರ್ಕ ಕಡಿತಗೊಳಿಸುವ ಮೊದಲು ಸಿಸಿಟಿವಿಯಲ್ಲಿ ದಾಖಲಾಗಿದ್ದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ನಿನ್ನೆ ಹರಿಯಾಣದ ಅಂಬಾಲಾದಲ್ಲಿ ಇದೇ ರೀತಿಯ ಘಟನೆ ವರದಿಯಾಗಿದ್ದು, ಕಳ್ಳರು ಸಹಕಾರಿ ಬ್ಯಾಂಕ್ಗೆ ನುಗ್ಗಿ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಬ್ಯಾಂಕ್ಗೆ ಪ್ರವೇಶಿಸಲು ಗ್ಯಾಸ್ ಕಟ್ಟರ್ ಬಳಸಿ ಗೋಡೆಗೆ ರಂಧ್ರ ಕೊರೆದು 32 ಲಾಕರ್ಗಳನ್ನು ಒಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾರಾಂತ್ಯದಲ್ಲಿ ಬ್ಯಾಂಕ್ ಮುಚ್ಚಿದ್ದರಿಂದ ಸೋಮವಾರ ಬೆಳಗ್ಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ