ಕೋವಿಡ್‌ ಭಾರೀ ಏರಿಕೆ: 17336 ಕೇಸು, 4 ತಿಂಗಳ ಗರಿಷ್ಠ

By Govindaraj SFirst Published Jun 25, 2022, 5:20 AM IST
Highlights

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 17,336 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ.

ನವದೆಹಲಿ (ಜೂ.25): ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 17,336 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಸುಮಾರು 4 ತಿಂಗಳ (124 ದಿನಗಳು) ನಂತರ 17,000ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಒಂದೇ ದಿನದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಶೇ.30ರಷ್ಟುಏರಿಕೆ ಕಂಡುಬಂದಿದೆ. ಗುರುವಾರ 13,313 ಕೇಸುಗಳು ವರದಿಯಾಗಿದ್ದವು. ಇದೇ ವೇಳೆ ಕಳೆದ 24 ಗಂಟೆಯಲ್ಲಿ 13 ಸೋಂಕಿತರು ಸಾವಿಗೀಡಾಗಿದ್ದಾರೆ. ಕೇರಳದಲ್ಲಿ 7, ಪಂಜಾಬ್‌ನಲ್ಲಿ 2, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಬ್ಬ ಸೋಂಕಿತ ಸಾವನ್ನಪ್ಪಿದ್ದಾನೆ.

ಸಕ್ರಿಯ ಕೇಸು 88,284ಕ್ಕೇರಿಕೆ: ಕಳೆದ 24 ಗಂಟೆಗಳಲ್ಲಿ ಗುಣಮುಖರಾದವರ ಸಂಖ್ಯೆಗಿಂತ 4,294 ಹೆಚ್ಚುವರಿ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ, ಸಕ್ರಿಯ ಪ್ರಕರಣಗಳ ಸಂಖ್ಯೆಯು 88,284ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.4.32ಕ್ಕೆ ಏರಿಕೆಯಾಗಿದ್ದು, ವಾರದ ಪಾಸಿಟಿವಿಟಿ ದರವು ಶೇ.3.07ರಷ್ಟಿದೆ. ಇದು ಕೋವಿಡ್‌ ಸೋಂಕು ತೀವ್ರವಾಗಿ ಹರಡುತ್ತಿರುವುದನ್ನು ಸೂಚಿಸಿದೆ. ದೇಶದಲ್ಲಿ ಈವರೆಗೆ 196.77 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

ಕೊರೋನಾ ಕಾಟ ಒಂದಾ ಎರಡಾ?: ದಂಪತಿ ಮಧ್ಯೆ ಕಲಹಕ್ಕೂ ಕಾರಣವಾಯ್ತು ಡೆಡ್ಲಿ ವೈರಸ್‌..!

ಲಸಿಕೆಯಿಂದಾಗಿ ಭಾರತದಲ್ಲಿ 42 ಲಕ್ಷ ಜನರ ಜೀವರಕ್ಷಣೆ: ಭಾರತದಲ್ಲಿ ನಡೆದ ಬೃಹತ್‌ ಕೋವಿಡ್‌ ಲಸಿಕಾ ನೀಡಿಕೆ ಅಭಿಯಾನದಿಂದಾಗಿ 2021ರಲ್ಲೇ ಸುಮಾರು 42 ಲಕ್ಷ ಜನರ ಜೀವ ಉಳಿದಿದೆ. ಅದೇ ರೀತಿಯಲ್ಲಿ ಜಾಗತಿಕ ಮಟ್ಟದಲ್ಲಿ 1.98 ಕೋಟಿ ಜನರ ಜೀವವನ್ನು ರಕ್ಷಿಸಲಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಜೊತೆಗೆ 2021ರ ಅಂತ್ಯದೊಳಗೆ ವಿಶ್ವದ ಶೇ.40ರಷ್ಟು ಜನರಿಗೆ ಕನಿಷ್ಠ 2 ಅಥವಾ 3 ಡೋಸ್‌ ಲಸಿಕೆ ನೀಡುವ ವಿಶ್ವ ಆರೋಗ್ಯ ಸಂಸ್ಥೆಯ ಗುರಿ ಈಡೇರಿದ್ದರೆ ಇನ್ನೂ 5.99 ಲಕ್ಷ ಜನರ ಜೀವ ಉಳಿಸಬಹುದಿತ್ತು ಎಂದು ಹೇಳಿದೆ. ಈ ಮೂಲಕ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಲಸಿಕೆ ವಹಿಸಿದ ಮಹತ್ವದ ಪಾತ್ರವನ್ನು ಎತ್ತಿಹಿಡಿದಿದೆ. ಇಂಪೀರಿಯರ್‌ ಕಾಲೇಜ್‌ ಆಫ್‌ ಲಂಡನ್‌ನ ತಜ್ಞರ ತಂಡ, 185 ದೇಶಗಳಲ್ಲಿ ದಾಖಲಾದ ಹೆಚ್ಚುವರಿ ಸಾವನ್ನು ಅಂದಾಜಿಸಿ ಈ ಲೆಕ್ಕಾಚಾರ ಮಾಡಿದೆ. ಈ ಕುರಿತ ವರದಿ ‘ದ ಲ್ಯಾನ್ಸೆಟ್‌ ಇನ್ಫೆಕ್ಟೀಷಿಯಸ್‌ ಡಿಸೀಸ್‌’ ಮ್ಯಾಗಜೀನ್‌ನಲ್ಲಿ ಪ್ರಕಟವಾಗಿದೆ.

42 ಲಕ್ಷ ಜನರ ರಕ್ಷಣೆ: 2020ರ ಡಿ.8ರಿಂದ 2021ರ ಡಿ.8ರ ಅವಧಿಯಲ್ಲಿ ವಿಶ್ವದಾದ್ಯಂತ ಲಸಿಕೆ ಅಭಿಯಾನ ನಡೆದ ಮೊದಲ ವರ್ಷ ಎಂದು ಪರಿಗಣಿಸಿ ನಡೆಸಿದ ಅಧ್ಯಯನ ಅನ್ವಯ, ‘ಭಾರತದಲ್ಲಿ ನಡೆದ ಬೃಹತ್‌ ಲಸಿಕಾ ಅಭಿಯಾನವು ಲಕ್ಷಾಂತರ ಜನರ ಜೀವ ಕಾಪಾಡಿದೆ. ಇದು ಲಸಿಕೆ, ಕೋವಿಡ್‌ ಸಾಂಕ್ರಾಮಿಕದ ಮೇಲೆ ಬೀರಿದ ಪರಿಣಾಮವನ್ನು ತೋರಿಸುತ್ತದೆ, ಅದರಲ್ಲೂ ವಿಶೇಷವಾಗಿ ಡೆಲ್ಟಾತಳಿಯ ಮೊದಲ ಪರಿಣಾಮಗಳನ್ನು ಎದುರಿಸಿದ ಭಾರತದಲ್ಲಿ ಲಸಿಕೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಭಾರತದಲ್ಲಿ ಈ ಅವಧಿಯಲ್ಲಿ ಕನಿಷ್ಠ 42.10 ಲಕ್ಷ ಜನರ ಜೀವವನ್ನು ಉಳಿಸಲಾಗಿದೆ ಎಂದು ಅಧ್ಯಯನ ವರದಿಯ ಮುಖ್ಯಸ್ಥ ಓಲಿವರ್‌ ವಾಟ್ಸನ್‌ ಹೇಳಿದ್ದಾರೆ.

Covid Crisis: 3 ತಿಂಗಳ ಬಳಿಕ ಕರ್ನಾಟಕದಲ್ಲಿ 36000 ಕೋವಿಡ್‌ ಪರೀಕ್ಷೆ: 800+ ಕೇಸ್‌

ಭಾರತ ಸರ್ಕಾರ ಇದುವರೆಗೂ ಕೋವಿಡ್‌ನಿಂದ 5.24 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಆದರೆ ವಿಶ್ವ ಆರೋಗ್ಯಸಂಸ್ಥೆ ಹಾಗೂ ಇನ್ನಿತರೆ ಕೆಲ ಸಂಸ್ಥೆಗಳು ನಡೆಸಿದ ಮಾದರಿ ಅಧ್ಯಯನ ವರದಿಯು 48-56 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿವೆ. ಈ ಲೆಕ್ಕಾಚಾರದ ಅನ್ವಯ ಇನ್ನೂ 42 ಲಕ್ಷ ಜನರ ಜೀವವನ್ನು ಭಾರತದಲ್ಲಿ ಉಳಿಸಲಾಗಿದೆ ಎಂದು ವರದಿ ಹೇಳಿದೆ.

click me!