
13 ವರ್ಷಗಳ ಹಿಂದೆ ದಲಿತ ಯುವತಿ ಮೇಲೆ ಲೈಂಗಿಕ ದೌರ್ಜನ್ಯ
ಚಂಡೀಗಢ: 13 ವರ್ಷಗಳ ಹಿಂದೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದರಲ್ಲಿ ಪಂಜಾಬ್ನ ಎಎಪಿ ಶಾಸಕ ಮಂಜಿಂದರ್ ಸಿಂಗ್ ಲಾಲ್ಪುರ ಹಾಗೂ ಆರು ಪೊಲೀಸರು ಸೇರಿದಂತೆ ಒಟ್ಟು 10 ಜನರು ದೋಷಿಗಳು ಎಂದು ಸಾಬೀತಾಗಿದ್ದು, ಇವರಿಗೆ ಕೋರ್ಟ್ ನಾಳೆ ಶಿಕ್ಷೆಯ ಪ್ರಮಾಣವನ್ನು ಘೋಷಣೆ ಮಾಡಲಿದೆ. ಎಎಪಿಯ ಖಾದೂರ್ ಸಾಹಿಬ್ ಕ್ಷೇತ್ರದ ಶಾಸಕನೂ ಆಗಿರುವ ಮಂಜಿಂದರ್ ಸಿಂಗ್ ಲಾಲ್ಪುರ್ ಸೇರಿ 10 ಜನರು ಈ ಪ್ರಕರಣದಲ್ಲಿ ದೊಷಿಗಳು ಎಂದು ನ್ಯಾಯಾಲಯ ಘೋಷಣೆ ಮಾಡಿದೆ. 2013ರಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹಲ್ಲೆ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ತರಣ್ತರಣ್ನ ನ್ಯಾಯಾಲಯ 13 ವರ್ಷಗಳ ನಂತರ ಈ ಪ್ರಕರಣದ ತೀರ್ಪು ಪ್ರಕಟಿಸಿದೆ. ಶುಕ್ರವಾರ ಅಂದರೆ ನಾಳೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ತರಣ್ತರಣ್ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರೇಮ್ ಕುಮಾರ್ ತಿಳಿಸಿದ್ದಾರೆ.
ಟಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವೇಳೆ ಕೃತ್ಯ
ಕೋರ್ಟ್ ತೀರ್ಪು ಹಿನ್ನೆಲೆ ಶಾಸಕ ಮಂಜಿಂದರ್ ಸಿಂಗ್ ಲಾಲ್ಪುರ್ ಹಾಗೂ ಪೊಲೀಸರು ಸೇರಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ. 2013ರಲ್ಲಿ ಘಟನೆ ನಡೆದ ಸಮಯದಲ್ಲಿ ಈ ಶಾಸಕ ಟಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. 2022ರಲ್ಲಿ ಮಂಜಿಂದರ್ ತರಣ್ತರಣ್ ಜಿಲ್ಲೆಯ ಖಾದೂರ್ ಸಾಹೀಬ್ ವಿಧಾನಸಭಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ್ದು, 55,756 ಮತಗಳ ಅಂತರದಿಂದ ಕಾಂಗ್ರೆಸ್ ಶಾಸಕ ರಮಣ್ಜಿತ್ ಸಿಂಗ್ ಸಿಕ್ಕಿ ವಿರುದ್ಧ ಗೆಲುವು ಸಾಧಿಸಿದ್ದರು.
ವಿಡಿಯೋ ವೈರಲ್ ಬಳಿಕ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಸುಪ್ರೀಂಕೋರ್ಟ್
ಈ ಲೈಂಗಿಕ ದೌರ್ಜನ್ಯ ಪ್ರಕರಣವೂ 2013ರ ಸೆಪ್ಟೆಂಬರ್ 4 ರಂದು ನಡೆದಿತ್ತು. ಆಗ 19 ವರ್ಷದವಳಾಗಿದ್ದ ದಲಿತ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರು ಮದುವೆಯಲ್ಲಿ ಭಾಗವಹಿಸುತ್ತಿದ್ದಾಗ ಟಾಕ್ಸಿ ಚಾಲಕನಾಗಿದ್ದ ಮಂಜಿಂದರ್ ಸಿಂಗ್ ಹಾಗೂ ಇತರರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು. ಇದನ್ನು ಆಕೆ ವಿರೋಧಿಸಿದರು ಆಕೆಯ ಮೇಲೆ ದುರುಳರು ಹಲ್ಲೆ ಮಾಡಿದ್ದರು. ನಂತರ ಆ ಮಹಿಳೆ ಹಾಗೂ ಕುಟುಂಬದವರು ಪೊಲೀಸರಿಗೆ ದೂರು ನೀಡಿದಾಗ, ಸ್ಥಳಕ್ಕೆ ಬಂದ ಪೊಲೀಸರು ಕೂಡ ಆ ಮಹಿಳೆಯ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಘಟನೆಯ ವೀಡಿಯೋ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆದ ಬಳಿಕ ಸ್ವತಃ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ಬದುಕುಳಿದವರ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.
12 ಆರೋಪಿಗಳಲ್ಲಿ ಓರ್ವನಾದ ಪರಮ್ಜಿತ್ ಎನ್ನುವಾತ ವಿಚಾರಣೆ ಸಮಯದಲ್ಲೇ ಸಾವನ್ನಪ್ಪಿದ್ದ. ಶಾಸಕ ಮಂಜಿಂದರ್ ಸಿಂಗ್ ಲಾಲ್ಪುರ್, ರವೀಂದರ್ ಸಿಂಗ್, ಕವಲ್ದೀಪ್ ಸಿಂಗ್ ಮತ್ತು ಮಾಜಿ ಪೊಲೀಸ್ ಅಧಿಕಾರಿಗಳಾದ ದವೀಂದರ್ ಕುಮಾರ್, ಸರಜ್ ಸಿಂಗ್, ಅಶ್ವನಿಕುಮಾರ್, ತರ್ಸೆಮ್ ಸಿಂಗ್ ಹಾಗೂ ಹರ್ಜಿಂದರ್ ಸಿಂಗ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಇತರ ಮೂವರು ಅಪರಾಧಿಗಳಾದ ಗುರುದೀಪ್ ರಾಜ್, ಗಗನದೀಪ್ ಸಿಂಗ್, ನರಿಂದರ್ಜಿತ್ ಸಿಂಗ್ ಅವರನ್ನು ಇನ್ನೂ ಬಂಧಿಸಲಾಗಿಲ್ಲ.
ಕೋರ್ಟ್ ತೀರ್ಪಿನಿಂದಾಗಿ ಈ ದೌರ್ಜನ್ಯದ ನಂತರ ಬದುಕುಳಿದ ಮಹಿಳೆಗೆ ನ್ಯಾಯ ಸಿಕ್ಕಿದೆ ಸಂತೋಷವಾಗಿದೆ. 13 ವರ್ಷ 6 ತಿಂಗಳ ಕಾಯುವಿಕೆಗೆ ಫಲ ಸಿಕ್ಕಿದಂತಾಗಿದೆ ಎಂದು ಅವರ ಪರ ವಕೀಲ ಅಮಿತ್ ಧವನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ