ಮಂಡ್ಯ: ಸತ್ತ ಭಿಕ್ಷುಕಿ ಗುಡಿಸಲಿನಲ್ಲಿ ಹಣದ ಮೂಟೆಗಳ ರಾಶಿ, ಮನೆಯವರು ಎಣಿಸಲಾಗದೇ ಮಸೀದಿಗೆ ತಂದರು!

Published : Aug 23, 2026, 07:36 PM IST

ಮಂಡ್ಯದಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಅವರ ಸಾವಿನ ನಂತರ ಮನೆಯನ್ನು ಪರಿಶೀಲಿಸಿದಾಗ, ಭಿಕ್ಷೆಯಿಂದ ಸಂಗ್ರಹಿಸಿದ್ದ ಲಕ್ಷ ಲಕ್ಷ ಕಂತೆ-ಕಂತೆ ನಗದು ಹಣ ಪತ್ತೆಯಾಗಿದೆ. ಈ ಹಣವನ್ನು ಸಂಬಂಧಿಕರು ಹಂಚಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

PREV
15
ಭಿಕ್ಷುಕಿಯ ಮನೆಯಲ್ಲಿ ಕಂತೆ ಕಂತೆ ಹಣ

ಮಂಡ್ಯ (ಆ.23): ಸಿಕ್ಕರೆ ಊಟ, ಇಲ್ಲದಿದ್ದರೆ ಉಪವಾಸ... ಊರೂರು ಅಲೆದು ಭಿಕ್ಷೆ ಬೇಡುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ಬಳಿಕ ಅವರ ಮನೆಯಲ್ಲಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ನಗದು ಹಣ ಪತ್ತೆಯಾಗಿರುವ ಅಚ್ಚರಿಯ ಘಟನೆ ಮಂಡ್ಯ ನಗರದಲ್ಲಿ ಬೆಳಕಿಗೆ ಬಂದಿದೆ. ಬದುಕಿದ್ದಾಗ ಕಣ್ಣೆತ್ತಿಯೂ ನೋಡದ ಸಂಬಂಧಿಕರು, ಸಾವಿನ ನಂತರ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಹಂಚಿಕೊಂಡಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

25
ಹಲವು ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದ ನೂರ್

ಮಂಡ್ಯ ನಗರದ ಗುತ್ತಲು ಬಡಾವಣೆಯ ನಿವಾಸಿಯಾಗಿದ್ದ ನೂರ್ (ಹೆಸರು) ಎಂಬ ವೃದ್ಧೆ, ಕುಟುಂಬಸ್ಥರು ಹಾಗೂ ಸಂಬಂಧಿಕರ ಆಸರೆ ಇಲ್ಲದೆ ಹಲವು ವರ್ಷಗಳಿಂದ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿನ್ನೆ (ಗುರುವಾರ) ತಮ್ಮ ಪುಟ್ಟ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ವೃದ್ಧೆ ಮೃತಪಟ್ಟ ಸುದ್ದಿ ತಿಳಿದ ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

35
ಮೂಟೆಗಟ್ಟಲೆ ನೋಟು-ನಾಣ್ಯಗಳು ಪ್ರತ್ಯಕ್ಷ!

ಅಂತ್ಯಸಂಸ್ಕಾರ ಮುಗಿದ ನಂತರ ಸಂಬಂಧಿಕರು ಹಾಗೂ ಸ್ಥಳೀಯ ಮುಖಂಡರು ವೃದ್ಧೆ ವಾಸವಿದ್ದ ಮನೆಯನ್ನು ಪರಿಶೀಲಿಸಲು ತೆರಳಿದ್ದಾರೆ. ಈ ವೇಳೆ ಮನೆಯ ಒಳಗಿದ್ದ ಮೂಟೆಗಳು, ಪೆಟ್ಟಿಗೆಗಳನ್ನು ತೆರೆದು ನೋಡಿದಾಗ ಎಲ್ಲರಿಗೂ ಶಾಕ್ ಕಾದಿತ್ತು. ಮನೆಯ ಮೂಲೆ ಮೂಲೆಗಳಲ್ಲಿ ಕಂತೆ ಕಂತೆ ನೋಟುಗಳು ಹಾಗೂ ನಾಣ್ಯಗಳ ಮೂಟೆಗಳು ಪತ್ತೆಯಾಗಿದ್ದವು. ಹಲವು ವರ್ಷಗಳಿಂದ ತನಗೆ ಭಿಕ್ಷೆಯಲ್ಲಿ ಬಂದ ಹಣವನ್ನು ಆ ವೃದ್ಧೆ ಖರ್ಚು ಮಾಡದೆ ಹಾಗೆಯೇ ಕೂಡಿಟ್ಟಿದ್ದರು ಎನ್ನಲಾಗಿದೆ.

45
ಎಣಿಕೆಯಲ್ಲಿ ₹8 ಲಕ್ಷಕ್ಕೂ ಅಧಿಕ ಹಣ ಪತ್ತೆ!

ಸ್ಥಳೀಯರು ಮತ್ತು ಸಂಬಂಧಿಕರು ಒಟ್ಟಾಗಿ ಕುಳಿತು ನಾಣ್ಯಗಳು ಮತ್ತು ನೋಟುಗಳನ್ನು ಎಣಿಕೆ ಮಾಡಲು ಆರಂಭಿಸಿದ್ದು, ಎಣಿಕೆಯ ನಂತರ ಒಟ್ಟು ಮೊತ್ತ ₹8 ಲಕ್ಷಕ್ಕೂ ಅಧಿಕ ಇರುವುದು ದೃಢಪಟ್ಟಿದೆ. ಬಳಿಕ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಮಾತುಕತೆ ನಡೆಸಿ, ಆ ಹಣವನ್ನು ವೃದ್ಧೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

55
'ಬದುಕಿದ್ದಾಗ ನೋಡದವರು, ಹಣಕ್ಕೆ ಮುಗಿಬಿದ್ದರು!'

ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. 'ವೃದ್ಧೆ ಬದುಕಿದ್ದಾಗ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಬೀದಿ ಬೀದಿ ಅಲೆದಾಗ ಯಾವೊಬ್ಬ ಸಂಬಂಧಿಯೂ ಸಹಾಯಕ್ಕೆ ಬರಲಿಲ್ಲ. ಆದರೆ ಆಕೆ ಸತ್ತ ಮೇಲೆ ಆಕೆಯ ಭಿಕ್ಷಾಟನೆಯ ಕಷ್ಟದ ಹಣವನ್ನು ಮುಲಾಜಿಲ್ಲದೆ ಹಂಚಿಕೊಂಡಿದ್ದಾರೆ' ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಈ ಘಟನೆ ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read more Photos on
click me!

Recommended Stories