ಚಿತಾಗಾರ ಬಳಿ ಮೃತದೇಹ ಪೂಜೆಗೆ ಅವಕಾಶವಿಲ್ಲ: ರಾಹುಕಾಲದ ನೆಪದಲ್ಲಿ ಅಂತ್ಯಕ್ರಿಯೆ ವಿಳಂಬ

First Published Aug 24, 2020, 8:30 AM IST

ಬೆಂಗಳೂರು(ಆ.24): ಬಿಬಿಎಂಪಿಯ ಚಿತಾಗಾರಗಳ ಬಳಿ ಮೃತದೇಹಗಳ ಪೂಜೆಗೆ ಅವಕಾಶ ಕೊಡದೇ ತ್ವರಿತವಾಗಿ ಅಂತ್ಯಕ್ರಿಯೆ ನೆರವೇರಿಸುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೂಚಿಸಿದ್ದಾರೆ

ಪಾಲಿಕೆ ವ್ಯಾಪ್ತಿಯ ಪಾದರಾಯನಪುರ, ಹೆಬ್ಬಾಳ ಹಾಗೂ ಮೇಡಿ ಅಗ್ರಹಾರ ವಿದ್ಯುತ್‌ ಚಿತಾಗಾರಗಳಿಗೆ ಭಾನುವಾರ ಭೇಟಿ ನೀಡಿ ತಪಾಸಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ದಿನ ಸರಾಸರಿ 30 ಕೊರೋನಾ ಸೋಂಕಿತರ ಮೃತದೇಹಗಳು ಹಾಗೂ 60 ಕೊರೋನೇತರ ಮೃತದೇಹಗಳು ವಿದ್ಯುತ್‌ ಚಿತಾಗಾರಗಳಿಗೆ ಬರುತ್ತಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 12 ವಿದ್ಯುತ್‌ ಚಿತಾಗಾರಗಳಿವೆ. ಈ ಪೈಕಿ ಪಾದರಾಯನಪುರ ಚಿತಾಗಾರ ದುರಸ್ತಿ ಕಾಮಗಾರಿ ಮಂದಗತಿಯಲ್ಲಿ ಸಾಗಿಸುತ್ತಿರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ, ಸೆ.7ಕ್ಕೆ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
undefined
ಎಲ್ಲ ಚಿತಾಗಾರಗಳ ಬಳಿ ಆ್ಯಂಬುಲೆನ್ಸ್‌ಗಳು ಸಾಲುಗಟ್ಟಿ ನಿಂತಿರುತ್ತವೆ. ಅಂತ್ಯಕ್ರಿಯೆ ವಿಳಂಬವಾಗುತ್ತಿದೆ. ಚಿತಾಗಾರದ ಸಿಬ್ಬಂದಿ ಅಂತ್ಯಕ್ರಿಯೆ ನೆರವೇರಿಸಲು ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಪರಿಶೀಲಿಸಿದ್ದೇನೆ. ಶವಸಂಸ್ಕಾರ ನೆರವೇರಿಸಲು ಬರುವವರು ರಾಹುಕಾಲ ನೋಡಿಕೊಂಡು ಅಂತ್ಯಕ್ರಿಯೆಗೆ ಮೃತದೇಹಗಳನ್ನು ತರುತ್ತಿದ್ದಾರೆ. ನಂತರ ಪೂಜೆಗೆ ಹೆಚ್ಚು ಸಮಯ ವ್ಯಯವಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ನಿಗದಿತ ಸಮಯದಲ್ಲೇ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಬೇಕು. ಪೂಜೆ ಮಾಡಲು ಬ್ರೇಕ್‌ ಹಾಕಿ ಆ ಸಮಯದಲ್ಲಿ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸುವಂತೆ ಸೂಚಿಸಿದ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌
undefined
ಕೋವಿಡ್‌ ಸೋಂಕಿಗೆ ಬಲಿಯಾದ ವ್ಯಕ್ತಿಗಳ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸುವ ಸಿಬ್ಬಂದಿಗೆ ಪ್ರಸ್ತುತ .500 ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದರೊಂದಿಗೆ ಅವರ ವೇತನವನ್ನೂ .6 ಸಾವಿರದಿಂದ .18 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅಗತ್ಯ ಬಿದ್ದರೆ ಚಿತಾಗಾರಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಂತೆ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಲಾಗಿದೆ. ಚಿತಾಗಾರ ಹಾಗೂ ಚಿತಾಗಾರಗಳ ಸಿಬ್ಬಂದಿ ಸಂಬಂಧ ಯಾವುದೇ ದೂರುಗಳು ಬಂದರೂ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದರು.
undefined
ಎಲ್ಲ ಚಿತಾಗಾರಗಳಲ್ಲಿ ಶುಚಿತ್ವ ಕಾಪಾಡಲಾಗಿದ್ದು, ಶೌಚಾಲಯ, ಸ್ನಾನದ ಕೊಠಡಿ, ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತೆಯೆ ಹೊಸದಾಗಿ 9 ವಿದ್ಯುತ್‌ ಚಿತಾಗಾರಗಳ ನಿರ್ಮಾಣಕ್ಕೆ ಕಂದಾಯಯ ಇಲಾಖೆ ಜಾಗ ಗುರುತಿಸಿ, ಬಿಬಿಎಂಪಿಗೆ ಹಸ್ತಾಂತರಿಸಿದೆ. ಈ ಹೊಸ ಚಿತಾಗಾರಗಳು ಸೇರಿದರೆ ನಗರದ ವಿದ್ಯುತ್‌ ಚಿತಾಗಾರಗಳ ಒಟ್ಟು ಸಂಖ್ಯೆ 21ಕ್ಕೆ ಏರಿಕೆಯಾಗಲಿದ್ದು, ಅಂತ್ಯಕ್ರಿಯೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
undefined
ಈ ವೇಳೆ ಪಶ್ಚಿಮ ವಲಯ ಮುಖ್ಯ ಅಭಿಯಂತರ ನಾಗರಾಜ್‌, ಮುಖ್ಯ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
undefined
click me!