ಹಾನಗಲ್ಲ ಚುನಾವಣೆ ಫಲಿತಾಂಶ ಟ್ರಯಲ್‌ ಅಷ್ಟೇ: ಡಿ.ಕೆ.ಶಿವಕುಮಾರ

First Published Nov 7, 2021, 12:42 PM IST

ಹಾನಗಲ್ಲ(ನ.07):  ಹಾನಗಲ್ಲ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಗೆಲುವಿಗೆ ಹರಕೆ ತೀರಿಸಲು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಹಾನಗಲ್ಲ ಪಟ್ಟಣದ ವಿವಿಧ ದೇವಸ್ಥಾನ, ಮಠ ಹಾಗೂ ದರ್ಗಾಕ್ಕೆ ಭೇಟಿ ನೀಡಿ ಪೂಜೆ-ಪ್ರಾರ್ಥನೆ ಸಲ್ಲಿಸಿದ್ದಾರೆ. 

ಹಾನಗಲ್ಲ(Hanagl) ಪಟ್ಟಣಕ್ಕೆ ಆಗಮಿಸಿದ ಕಾಂಗ್ರೆಸ್‌(Congress) ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಹಾನಗಲ್ಲಿನ ಗ್ರಾಮದೇವತೆಯ ಪಾದಗಟ್ಟಿಗೆ ಪೂಜೆ ಸಲ್ಲಿಸಿ ಹರಕೆಯಂತೆ 11 ಟೆಂಗಿನಕಾಯಿಯನ್ನು ಒಡೆದರು. ಆನಂತರ ಕಾಶ್ಮೀರಿ ದರ್ಗಾಕ್ಕೆ(Kashmiri Dargah) ತೆರಳಿ ಪೂಜೆ ಸಲ್ಲಿಸಿದರು. ಆನಂತರ ಶ್ರೀ ಕುಮಾರೇಶ್ವರ ವಿರಕ್ತಮಠಕ್ಕೆ ತೆರಳಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ತಾಲೂಕಿನ ಹೀರೂರು ಬಸವಣ್ಣ ದೇವರಿಗೆ ಪೂಜೆ ಸಲ್ಲಿಸಿ, ಗೆಜ್ಜಿಹಳ್ಳಿಯ ಜಲಕಂಟೇಶ್ವರ ದೇವಸ್ಥಾನದಲ್ಲಿ(Temple) ವಿಶೇಷ ಪೂಜೆ ಸಲ್ಲಿಸಿದರು.

ನಾನು ಹಾನಗಲ್ಲಿನ ಉಪಚುನಾವಣೆಯ(Byelection) ನಾಮಪತ್ರ ಸಲ್ಲಿಸಲು ಆಗಮಿಸಿದ ಸಂದರ್ಭದಲ್ಲಿ ಗ್ರಾಮದೇವಿಗೆ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ನನಗೂ ಗ್ರಾಮದೇವಿಗೂ ಸಂಭಾಷಣೆ ನಡೆಯಿತು. ಆಗ ನಾನು ಒಂದು ಹರಕೆಯನ್ನು ಮಾಡಿದ್ದೆ. ನಾನು ಕೇಳಿಕೊಂಡಂತೆ ಗ್ರಾಮದೇವಿ ಫಲವನ್ನು ಕೊಟ್ಟಿದ್ದಾಳೆ. ಹೀಗಾಗಿ ಇಂದು ಪವಿತ್ರವಾದ ದೀಪಾವಳಿಯ(Deepavali) ಶುಭದಿನವೇ ಆ ಹರಕೆಯನ್ನು ತೀರಿಸಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದ ನಾಯಕರು ಆಗಮಿಸಿ ಮತದಾರ ಪ್ರಭುಗಳಿಗೆ ಅಭಿನಂದನಾ ಸಮಾರಂಭ ಮಾಡಲಿದ್ದಾರೆ ಎಂದು ತಿಳಿಸಿದ ಡಿ.ಕೆ. ಶಿವಕುಮಾರ 

ಈ ಚುನಾವಣೆ(Election) ಫಲಿತಾಂಶ ಟ್ರಯಲ್‌ ಅಷ್ಟೇ. ಮುಂಬರುವ ಚುನಾವಣೆ ವೇಳೆಗೆ ಪ್ರತಿಯೊಬ್ಬರೂ ಒಬ್ಬೊಬ್ಬರನ್ನು ಸಂಪಾದಿಸಬೇಕು ಹಾಗೂ ಮುಂದಿನ ಚುನಾವಣೆಯಲ್ಲಿ 13 ಸಾವಿರಕ್ಕೂ ಅಧಿಕ ಮತಗಳಿಂದ ಕಾಂಗ್ರೆಸ್‌ ಗೆಲ್ಲಿಸಬೇಕು ಎಂದು ಈಗಲೇ ಪ್ರತಿಜ್ಞೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಡಿ.ಕೆ. ಶಿವಕುಮಾರ, ವಿಧಾನಸಭೆಯಲ್ಲಿ ಶ್ರೀನಿವಾಸ ಮಾನೆ ಅವರಿಗೆ ಏನು ಶಕ್ತಿ ನೀಡಬೇಕೊ ನೀಡುತ್ತೇವೆ. ಮಾನೆ ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಲಿದ್ದಾರೆ ಎಂದ ಡಿಕೆಶಿ

ಹಾನಗಲ್ಲ ತಾಲೂಕಿನ ಜನತೆ ನನ್ನನ್ನು ಆಯ್ಕೆ ಮಾಡುವ ಮೂಲಕ ಶಕ್ತಿ ತುಂಬಿದ್ದೀರಿ. ತಮ್ಮ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ತಮ್ಮೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ವಿಶೇಷವಾಗಿ ವಿಜಯೋತ್ಸವ ಮೆರವಣಿಗೆ ಮಾಡದೇ ನೇರವಾಗಿ ಕೆಲಸ ಕಾರ್ಯಗಳಲ್ಲಿ ಮುಂದಾಗಬೇಕು ಎಂದು ಸಂಕಲ್ಪ ಮಾಡಿದ್ದೇನೆ. ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ತಮ್ಮೆಲ್ಲರ ಪ್ರೀತಿ-ವಿಶ್ವಾಸ ಇದೇ ರೀತಿ ನನ್ನ ಮೇಲಿರಲಿ ಎಂದ ಶಾಸಕ ಶ್ರೀನಿವಾಸ ಮಾನೆ(Srinivas Mane)

ತಾಲೂಕಿನ ಮಲ್ಲಿಗ್ಗಾರ ಬಳಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಬೃಹತ್‌ ಬೈಕ್‌ ರಾರ‍ಯಲಿ(Bike Rally) ಮೂಲಕ ಬರಮಾಡಿಕೊಂಡು ಮುಖ್ಯ ರಸ್ತೆ ಮೂಲಕ ಗ್ರಾಮದೇವಿ ದೇವಸ್ಥಾನಕ್ಕೆ ಕರೆ ತಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ, ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಮಾಜಿ ಸಚಿವ ಮನೋಹರ ತಹಶೀಲ್ದಾರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಎಸ್‌. ಪಾಟೀಲ, ಪುಟ್ಟಪ್ಪ ನರೇಗಲ್‌, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮಾಜಿ ಪುರಸಭೆ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ಪುರಸಭೆ ಸದಸ್ಯ ನಾಗಪ್ಪ ಸವದತ್ತಿ, ಮುಖಂಡರಾದ ಶಿವಯೋಗಿ ಹಿರೇಮಠ, ಮಾರುತಿ ಪುರಲಿ, ಆದರ್ಶ ಶೆಟ್ಟಿ, ಯಾಸೀರ್‌ಖಾನ್‌ ಪಠಾಣ, ಘನಶ್ಯಾಮ ದೇಶಪಾಂಡೆ, ವಿದ್ಯಾಶಂಕರ ದೇಶಪಾಂಡೆ, ವೀರೇಶ ಬೈಲವಾಳ, ಭರ್ಮಣ್ಣ ಶಿವೂರ ಈ ಸಂದರ್ಭದಲ್ಲಿದ್ದರು.

click me!