ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಮನಸಾರೆ ತಬ್ಬಿಕೊಂಡು ಕಣ್ಣೀರಿಟ್ಟ ಡಿಕೆ ಶಿವಕುಮಾರ್

Published : May 28, 2026, 10:59 AM ISTUpdated : May 28, 2026, 11:02 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಉಪಾಹಾರ ಕೂಟದಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಕಾಲಿಗೆ ನಮಸ್ಕರಿಸಿ, ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು. ನಾಯಕತ್ವ ಬದಲಾವಣೆಯ ತೀವ್ರ ಕುತೂಹಲದ ನಡುವೆ, ಸಚಿವರು ಮತ್ತು ಶಾಸಕರು ಹೈಕಮಾಂಡ್ ನಿರ್ಧಾರಕ್ಕಾಗಿ ಕಾಯುತ್ತಿದೆ.

PREV
17
ರಾಜೀನಾಮೆ ನಿರ್ಧಾರ ಘೋಷಿಸಿದ‌ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕ ರಾಜಕೀಯದ ಇತಿಹಾಸದಲ್ಲೇ ಅತ್ಯಂತ ಅಭೂತಪೂರ್ವ ಮತ್ತು ನಾಟಕೀಯ ವಿದ್ಯಮಾನಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದಲ್ಲಿ ಜರುಗುತ್ತಿವೆ. ಮುಖ್ಯಮಂತ್ರಿಗಳು ಕರೆದಿದ್ದ ವಿದಾಯದ ಉಪಾಹಾರ ಕೂಟದಲ್ಲಿ (Breakfast Meeting) ಭಾಗವಹಿಸಲು ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ಸಂಪುಟದ ಸಚಿವರು ಆಪ್ತರು ಬಂದಿದ್ದರು.ಝಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಸಚಿವ ಮಂಕಾಳ್ ವೈದ್ಯ ಅವರೊಂದಿಗೆ ಒಂದೇ ಕಾರಿನಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಡಿಕೆಶಿ ಆಗಮಿಸಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದು, ಅವರನ್ನು ತಬ್ಬಿಕೊಂಡು ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದಾರೆ.

ಉಪಹಾರ ಕೂಟದಲ್ಲಿ ರಾಜೀನಾಮೆ ನಿರ್ಧಾರ ಘೋಷಿಸಿದ‌ ಸಿಎಂ ಸಿದ್ದರಾಮಯ್ಯ. ಡಿಕೆ ಶಿವಕುಮಾರ್‌ಗೆ ಕಂಗ್ರಾಚುಲೇಷನ್ಸ್ ಎಂದಾಗ ಡಿಕೆಶಿ ಕಾಲಿಗೆ ಎರಗಿದರು ಈ ವೇಳೆ ಸಿದ್ದರಾಮಯ್ಯ ಅಭಿನಂದನೆ ಹೇಳಿದರು. ಏನು ರಾಜ್ಯಪಾಲರು ಇಲ್ವಂತಲ್ಲ, ಹೋಗ್ತೀನಿ ನೋಡೋಣ ಎಂದು ಈ ವೇಳೆ ಸಿದ್ದರಾಮಯ್ಯ ಹೇಳಿದರು. ಇನ್ನು ಉಪಹಾರ ಕೂಟಕ್ಕೂ ಮುನ್ನ 10 ನಿಮಿಷಗಳ ಕಾಲ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಪ್ರತ್ಯೇಕ ಮಾತುಕತೆ ನಡೆಸಿದರು.

27
ಡಿಕೆಶಿ ಕಾರಿಗೆ ಮುತ್ತಿಗೆ, ಸಿದ್ದರಾಮಯ್ಯ ಪರ ಅಭಿಮಾನಿಗಳ ಘೋಷಣೆ!

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿ ಜಮಾಯಿಸಿದ್ದ ಸಿದ್ದರಾಮಯ್ಯ ಅವರ ನೂರಾರು ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಕಾರಿಗೆ ಅಡ್ಡ ಬಂದು ಮುತ್ತಿಗೆ ಹಾಕಿದರು. ಐದು ವರ್ಷ ಸಿದ್ದರಾಮಯ್ಯ ಅವರಿಗೆ ಜೈ ಎಂದು ಘೋಷಣೆ ಕೂಗಿದ ಅಭಿಮಾನಿಗಳು, ಸಿದ್ದರಾಮಯ್ಯ ಪರವಾಗಿ ಭಾರಿ ಜೈಕಾರ ಹಾಕಿದರು.

ಈ ನಡುವೆ ಮುಖ್ಯಮಂತ್ರಿಗಳ ನಿವಾಸದ ಹೊರಗೆ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. "ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಟ್ಟರೆ ನಾವು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವೋಟ್ ಹಾಕಲ್ಲ. ನಾವು ಡಿಕೆಶಿ ವಿರೋಧಿಗಳಲ್ಲ, ಅವರೂ ಸಿಎಂ ಆಗಲಿ ಎಂಬ ಆಸೆ ನಮಗಿದೆ. ಆದರೆ 2028ರ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಅವರು ಸಿಎಂ ಆಗಲಿ. ಈ ರೀತಿ ಸಿದ್ದರಾಮಯ್ಯ ಅವರಿಂದ ಸಿಎಂ ಸ್ಥಾನ ಕಿತ್ತುಕೊಳ್ಳುವುದು ತಪ್ಪು. ಇದರಿಂದ ಅಹಿಂದ ಮತಗಳು ಕಾಂಗ್ರೆಸ್‌ನಿಂದ ದೂರವಾಗುತ್ತವೆ" ಎಂದು ಭಾವುಕರಾಗಿ ನುಡಿದರು.

37
‘ರಾಜೀನಾಮೆ ನೀಡುವವರೆಗೂ ಆಟ ಮುಗಿದಿಲ್ಲ’: ಡಿಕೆಶಿ ಎಚ್ಚರಿಕೆ

ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ನಾಯಕತ್ವ ಬದಲಾವಣೆಯ ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತ್ಯಂತ ಜಾಗರೂಕ ನಡೆ ಇಟ್ಟಿದ್ದಾರೆ. ತಮ್ಮನ್ನು ಭೇಟಿಯಾಗುತ್ತಿರುವ ಶಾಸಕರು, ಮಂತ್ರಿಗಳು ಹಾಗೂ ಬೆಂಬಲಿಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಅವರು, ಸಿದ್ದರಾಮಯ್ಯ ಅವರು ಅಧಿಕೃತವಾಗಿ ರಾಜೀನಾಮೆ ನೀಡುವವರೆಗೂ ಈ ರಾಜಕೀಯ ಆಟ ಮುಗಿದಿಲ್ಲ. ಆದ್ದರಿಂದ ಯಾರೂ ಸಹ ಮಾಧ್ಯಮಗಳ ಮುಂದೆ ದುಡುಕಿನ ಅಥವಾ ಅತಿರೇಕದ ಹೇಳಿಕೆಗಳನ್ನು ನೀಡಬಾರದು ಎಂದು ಎಚ್ಚರಿಸಿದ್ದಾರೆ.

ಹೈಕಮಾಂಡ್ ನಡೆ ಮತ್ತು ನಾಯಕತ್ವ ಬದಲಾವಣೆ ಬಗ್ಗೆ ತಮಗೇನೂ ತಿಳಿಯದಂತೆ ವರ್ತಿಸುತ್ತಿರುವ ಡಿ.ಕೆ. ಶಿವಕುಮಾರ್, ಹೈಕಮಾಂಡ್ ನನ್ನ ಜೊತೆಗೆ ನೇರವಾಗಿ ಏನನ್ನೂ ಮಾತನಾಡಿಲ್ಲ. ಏನೇ ಚರ್ಚೆಗಳಿದ್ದರೂ ಸಿದ್ದರಾಮಯ್ಯ ಅವರ ಜೊತೆಯಲ್ಲೇ ನಡೆಸಿದೆ. ಹಾಗಾಗಿ ಸಿದ್ದರಾಮಯ್ಯ ಅವರ ರಾಜೀನಾಮೆ ವಿಷಯ ಸೇರಿದಂತೆ ಮುಂದಿನ ಯಾವುದೇ ಪ್ರಕ್ರಿಯೆಗಳು ಸದ್ಯಕ್ಕೆ ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಜಾಣ್ಮೆಯ ಮೌನ ವಹಿಸಿದ್ದಾರೆ.

47
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ:

ಮುಖ್ಯಮಂತ್ರಿಗಳು ರಾಜೀನಾಮೆ ಸಲ್ಲಿಸುವ ಮುನ್ನ ತಮಗೆ ಸಹಕಾರ ನೀಡಿದ ಎಲ್ಲಾ ಸಚಿವರಿಗೆ ಧನ್ಯವಾದ ಅರ್ಪಿಸಲು ಈ ಉಪಾಹಾರ ಕೂಟವನ್ನು ಕರೆದಿದ್ದಾರೆ. ಸಿದ್ದರಾಮಯ್ಯ ಅವರು ದೆಹಲಿ ರಾಜಕಾರಣಕ್ಕೆ ಹೋಗುವ ಅಥವಾ ಅವರಿಗೆ ರಾಜ್ಯಸಭೆ ಸ್ಥಾನ ನೀಡುವ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕಿದೆ, ಆ ಬಗ್ಗೆ ನನಗೇನೂ ತಿಳಿದಿಲ್ಲ. ನಾಯಕತ್ವ ಬದಲಾವಣೆಯಿಂದ ಒಬಿಸಿ ಸಮುದಾಯಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದರು.

57
ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಸದ್ಯಕ್ಕೆ ನಮಗೂ ಏನೂ ಗೊತ್ತಿಲ್ಲ. ಹೈಕಮಾಂಡ್‌ನಿಂದ ಮುಖ್ಯಮಂತ್ರಿಗಳಿಗೆ ಏನು ಸಂದೇಶ ಬಂದಿದೆ ಎಂಬುದನ್ನು ಅವರೇ ಈ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ನಮಗೆ ತಿಳಿಸಲಿದ್ದಾರೆ. ಇನ್ನು ಅರ್ಧ ಗಂಟೆಯಲ್ಲಿ ಎಲ್ಲವೂ ನಿಖರವಾಗಿ ತಿಳಿಯಲಿದೆ. ಮುಖ್ಯಮಂತ್ರಿಗಳು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ನಿರ್ಧಾರ ಪ್ರಕಟಿಸಿದ ಬಳಿಕವಷ್ಟೇ ನಾವು ನಮ್ಮ ಅಭಿಪ್ರಾಯ ಹೇಳುತ್ತೇವೆ" ಎಂದರು.

67
ಕಡೂರು ಶಾಸಕ ಆನಂದ್ ಹೇಳಿಕೆ:

ನಿನ್ನೆ ರಾತ್ರಿಯೇ ನಾವು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೆವು. ಆದರೆ ಅವರು ರಾಜೀನಾಮೆ ನೀಡುತ್ತಾರೋ ಇಲ್ಲವೋ ಎಂಬುದು ಇನ್ನೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದಾಗಿದೆ. ಮುಂದಿನ ನಡೆಗಳೇನು ಎಂಬುದು ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ನಿರ್ಧಾರವಾಗಲಿದೆ. ನಾವೆಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು. ಈ ನಡುವೆ ಶಾಸಕರ ಭವನದಲ್ಲಿದ್ದ ಬಹುತೇಕ ಕೈ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡದೆ ಸಂಪೂರ್ಣ ಸೌಮ್ಯ ನಿಯಮ (Silent Mode) ಪಾಲಿಸುತ್ತಿದ್ದಾರೆ.

77
ಸಿಎಂ ನಿವಾಸದಲ್ಲಿ ಬೀಡುಬಿಟ್ಟಿರುವ 26 ಪ್ರಮುಖ ಸಚಿವರ ಪಟ್ಟಿ:

ಡಿ.ಕೆ. ಶಿವಕುಮಾರ್ (ಉಪಮುಖ್ಯಮಂತ್ರಿ), ಡಾ. ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಭೈರತಿ ಸುರೇಶ್, ಸಂತೋಷ್ ಲಾಡ್. ಎಂ.ಸಿ. ಸುಧಾಕರ್, ಎಸ್.ಎಸ್. ಮಲ್ಲಿಕಾರ್ಜುನ, ಕೆ. ವೆಂಕಟೇಶ್, ಶಿವರಾಜ್ ತಂಗಡಗಿ, ಎನ್. ಚಲುವರಾಯಸ್ವಾಮಿ, ಲಕ್ಷ್ಮಿ ಹೆಬ್ಬಾಳ್ಕರ್, ಶರಣಬಸಪ್ಪ ದರ್ಶನಾಪುರ, ಮಧು ಬಂಗಾರಪ್ಪ, ಡಾ. ಎಚ್.ಸಿ. ಮಹದೇವಪ್ಪ, ಮಂಕಾಳ್ ವೈದ್ಯ, ಆರ್.ಬಿ. ತಿಮ್ಮಾಪುರ್, ಡಾ. ಶರಣಪ್ರಕಾಶ್ ಪಾಟೀಲ್, ಎನ್.ಎಸ್. ಬೋಸರಾಜು, ಕೆ.ಎಚ್. ಮುನಿಯಪ್ಪ, ಈಶ್ವರ್ ಖಂಡ್ರೆ.

ಉಪಾಹಾರ ಕೂಟ ಮುಗಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದು, ಇಡೀ ರಾಜ್ಯದ ಕಣ್ಣು ಈಗ ಮುಖ್ಯಮಂತ್ರಿಗಳ ನಿವಾಸದ ಮೇಲಿದೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories