July 2023 ರಾಜಕೀಯ ಬೆಳವಣಿಗೆ: ಸಿದ್ದು ಬಜೆಟ್‌, ಸಿಟಿ ರವಿ ಸೀಟು, ಕಾಂಗ್ರೆಸ್‌ಗೆ ಗ್ಯಾರಂಟಿ ಓಟು

First Published Dec 11, 2023, 6:22 PM IST

2023ರ ಜುಲೈ ತಿಂಗಳಿನಲ್ಲಿ  ಭಾರತ ಮತ್ತು ಕರ್ನಾಟಕದಲ್ಲಿ  ನಡೆದ ರಾಜಕೀಯ ಬೆಳವಣಿಗೆಗಳ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ. ಏನೆಲ್ಲ ಘಟನೆಗಳು, ಬೆಳವಣಿಗೆಗಳು ನಡೆದವು ಎಂಬ ಸಂಪೂರ್ಣ ವಿವರಣೆ ಇಲ್ಲಿದೆ.

ಕರ್ನಾಟಕದ ಜನತೆಗೆ ಪ್ರಮುಖ 5 ಗ್ಯಾರಂಟಿಗಳ ಜಾರಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಮೊದಲಿಗೆ ‘ಶಕ್ತಿ’ ಯೋಜನೆ ಅಡಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭಿಸಿತು. ಜೂನ್‌ 11 ರಂದು ಮಹಿಳೆಯರ ಉಚಿತ ಬಸ್‌ ಪ್ರಯಾಣಕ್ಕೆ ಚಾಲನೆ ನೀಡಿದರೆ ಯುವನಿಧಿ ಒಂದನ್ನು ಬಿಟ್ಟು ಮಿಕ್ಕ ಎಲ್ಲಾ ಗ್ಯಾರಂಟಿಗಳನ್ನು  ಜಾರಿಗೆ ತಂದಿತು.  ಜುಲೈ 1 ರಿಂದ  ಅನ್ನಭಾಗ್ಯ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಗಳನ್ನು ಜಾರಿಗೊಳಿಸಿತು. ಆಗಸ್ಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂತು. ಯುವನಿಧಿ ಯೋಜನೆ ಜನವರಿ 2024ರಲ್ಲಿ ಬರಲಿದೆ ಎನ್ನಲಾಗಿದೆ

ರಾಜ್ಯ ಸರ್ಕಾರದ ಉಚಿತ 200 ಯುನಿಟ್ ವಿದ್ಯುತ್​ ಕಲ್ಪಿಸುವ ಯೋಜನೆ ಗೃಹಜ್ಯೋತಿ. 12 ತಿಂಗಳ ಸರಾಸರಿ ವಿದ್ಯುತ್ ಬಿಲ್‌ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಬಳಕೆಯನ್ನು​ ಉಚಿತವಾಗಿ ನೀಡಲಾಗುತ್ತದೆ. 12 ತಿಂಗಳ ಸರಾಸರಿ ಬಳಕೆ 200 ಯುನಿಟ್ ಇದ್ದರೂ ಅಂಥವರಿಗೆ ಉಚಿತ ವಿದ್ಯುತ್​ ಲಭ್ಯವಾಗಲಿದೆ. ಇನ್ನು 12 ತಿಂಗಳ ಸರಾಸರಿಗಿಂತ ಶೇ.10 ಪರ್ಸೆಂಟ್‌ಗಿಂತ ಹೆಚ್ಚಿನ ವಿದ್ಯುತ್‌ ಬಳಸಿದರೆ ಅಂಥವರಿಗೆ ಬಿಲ್ ಬರಲಿದೆ. ಇನ್ನು 200 ಯೂನಿಟ್‌ಗಿಂತ ಕೇವಲ ಒಂದು ಯೂನಿಟ್‌ ಹೆಚ್ಚು ಬಂದರೂ ಅಷ್ಟೂ ವಿದ್ಯುತ್‌ ಬಿಲ್‌ನ ಮೊತ್ತವನ್ನು ಗ್ರಾಹಕರು ಪಾವತಿಸಬೇಕು. 81 ಲಕ್ಷ ಕುಟುಂಬದಿಂದ ಉಚಿತ ವಿದ್ಯುತ್‌ಗೆ ನೋಂದಣಿ ಮಾಡಲಾಗಿದೆ.  

 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.1 ರಿಂದ ಅನ್ನಭಾಗ್ಯ ಯೋಜನೆ. 10 ಕೆಜಿ ಅಕ್ಕಿ ವಿತರಣೆ ಯೋಜನೆ ಜಾರಿ ಮಾಡಿದ್ದರು. ಈ ಯೋಜನೆಯಡಿ ಎಲ್ಲ ಪಡಿತರ ಚೀಟಿಯ ಫಲಾನುಭವಿಗಳಿಗೆ ಜುಲೈ ತಿಂಗಳು 5 ಕೆ.ಜಿ. ಅಕ್ಕಿ ಹಾಗೂ ಬಾಕಿ 5 ಕೆ.ಜಿಗೆ ತಲಾ 34 ರೂ.ಗಳಂತೆ 170 ರೂ. ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. 

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7 ರಂದು ತಮ್ಮ 14 ನೇ ರಾಜ್ಯ ಬಜೆಟ್ ಅನ್ನು ಮಂಡಿಸಿದರು.   3 ಲಕ್ಷ 27 ಸಾವಿರ ಕೋಟಿ ರೂ. ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅನೇಕ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಕೊಕ್‌ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 85,818 ಕೋಟಿ ರು. ಸಾಲ ಪಡೆಯಲು ಉದ್ದೇಶಿಸಿದ್ದು, ಆರ್ಥಿಕ ವರ್ಷಾಂತ್ಯಕ್ಕೆ ರಾಜ್ಯದ ಸಾಲದ ಹೊರೆ 5,71,665 ಕೋಟಿ ರು. ತಲುಪುವ ನಿರೀಕ್ಷೆ ಇದೆ. ಮೊದಲ ಬಾರಿಗೆ ಕೊರತೆಯ ಬಜೆಟ್‌ ಮಂಡಿಸಿರುವುದು ಸಹ ದಾಖಲೆಯಾಗಿದೆ. ಪ್ರಸಕ್ತ ಸಾಲಿನಲ್ಲಿ 2,38,410 ಕೋಟಿ ರು. ರಾಜಸ್ವ ಜಮೆ ಆಗಬಹುದೆಂದು ನಿರೀಕ್ಷಿಸಲಾಗಿದೆ. ಇದರಲ್ಲಿ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವು ಜಿಎಸ್‌ಟಿ ಪರಿಹಾರ ಒಳಗೊಂಡಂತೆ 1,75,653 ಕೋಟಿ ರು.ಗಳಾಗಬಹುದೆಂದು ಅಂದಾಜಿಸಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 12,500 ಕೋಟಿ ರು., ಕೇಂದ್ರ ತೆರಿಗೆ ಪಾಲಿನ ರೂಪದಲ್ಲಿ 37,252 ಕೋಟಿ ರು. ಹಾಗೂ 13,005 ಕೋಟಿ ರುಗಳನ್ನು ಕೇಂದ್ರ ಸರ್ಕಾರದಿಂದ ಸಹಾಯನುದಾನ ರೂಪದಲ್ಲಿ ನಿರೀಕ್ಷಿಸಲಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿ ಕೂಟದ ವಿರುದ್ಧ ಹೋರಾಟ ನಡೆಸಲು ಸಜ್ಜಾಗಿರುವ I-N-D-I-A ಎಂದರೆ Indian National Developmental Inclusive Alliance ಅಂದರೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿ. ಇದರ ಎರಡನೇ ಸಭೆ ಬೆಂಗಳೂರಿನಲ್ಲಿ ನಡೆದಿತ್ತು.  ಜುಲೈ 17, ಹಾಗೂ 18 ಎರಡು ದಿನಗಳ ಕಾಲ ಆಯೋಜನೆಗೊಂಡ ಈ ಸಭೆಯಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ನಿತೀಶ್ ಕುಮಾರ್ ಸೇರಿ ಹಲವು ರಾಜಕೀಯ ಗಣ್ಯರು ಭಾಗವಹಿಸಿದ್ದರು. ಈ ಮಹಾಮೈತ್ರಿಗೆ ಸೆಡ್ಡು ಹೊಡೆದು ಅದೇ ದಿನ ಎನ್‌ಡಿಎ ಮೈತ್ರಿ ಕೂಟದ 38 ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ಸಭೆ ನಡೆಯಿತು.

ಮುಂಬರುವ ಲೋಕಸಭೆ  ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ತನ್ನ ಸಂಘಟನಾ ರಚನೆಯಲ್ಲಿ ಮಹತ್ವದ ಬದಲಾವಣೆ ಮಾಡಿ ಜುಲೈ ತಿಂಗಳ ಕೊನೆಗೆ ಘೋಷಿಸಿತು. ಮುಖ್ಯವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾಜಿ ಶಾಸಕ ಸಿಟಿ ರವಿ ಅವರನ್ನು ಹುದ್ದೆಯಿಂದ ಕೆಳಕ್ಕಿಳಿಸಿತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿಎಲ್ ಸಂತೋಷ್ ಅವರನ್ನು ಮುಂದುವರಿಸಲಾಗಿದೆ. 38 ನಾಯಕರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಸಿಟಿ ರವಿ ಅವರ ಸ್ಥಾನಕ್ಕೆ ಮಧ್ಯಪ್ರದೇಶ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಅವರನ್ನು ನೇಮಕ ಮಾಡಲಾಗಿದೆ.  

ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಜುಲೈ 18 ರಂದು ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.  79 ವರ್ಷದ ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ದೀರ್ಘಕಾಲದ ಶಾಸಕ ಮತ್ತು ಅಪಾರ ಜನಪ್ರಿಯ ಸಾರ್ವಜನಿಕ ವ್ಯಕ್ತಿ, ಚಾಂಡಿ ಎರಡು ಬಾರಿ ಕೇರಳದ ಮುಖ್ಯಮಂತ್ರಿಯಾಗಿದ್ದರು. 

 ಬಿಜೆಪಿ ನಾಯಕಿ ಮತ್ತು ನಾಗಾಲ್ಯಾಂಡ್‌ನ ಮೊದಲ ಮಹಿಳಾ ರಾಜ್ಯಸಭಾ ಸಂಸದ ಎಸ್ ಫಾಂಗ್ನಾನ್ ಕೊನ್ಯಾಕ್ ಅವರು ರಾಜ್ಯಸಭೆಯ ಅಧ್ಯಕ್ಷತೆ ವಹಿಸಿ ಐತಿಹಾಸಿಕ ಸಾಧನೆ ಮಾಡಿದರು. ಅವರ ರಾಜಕೀಯ ಪಯಣದ ಈ ಗಮನಾರ್ಹ ಮೈಲಿಗಲ್ಲು ನಾಗಾಲ್ಯಾಂಡ್‌ನಿಂದ ಈ ಪ್ರತಿಷ್ಠಿತ ಸ್ಥಾನವನ್ನು ಪಡೆದ ಮೊದಲ ಮಹಿಳೆ. ತಮ್ಮ ಪ್ರದೇಶದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷ ಸ್ಥಾನವನ್ನು ಹೊಂದಿದ್ದಾರೆ. ನಾಗಾಲ್ಯಾಂಡ್‌ನಿಂದ ರಾಜ್ಯಸಭೆಯಲ್ಲಿ ಸಂಸದರಾಗಿ ಸ್ಥಾನ ಪಡೆದ ಮೊದಲ ಮಹಿಳೆ. 

click me!